ಕಾಯ್, ಎಂ. ಸೀಗ್ಬನ್ –(1918--) 1981 Kai , M.Siegbahn
ಸ್ವೀಡನ್-ಭೌತಶಾಸ್ತ್ರ-ರೋಹಿತ ಅಧ್ಯಯನಗಳ ಮುಂದಾಳು.
ಕಾಯ್ ಸೀಗ್ಬನ್ 20 ಏಪ್ರಿಲ್ 1918 ರಂದು ಸ್ವೀಡನ್ನ ಲಂಡನ್ನಲ್ಲಿ ಜನಿಸಿದನು. ಉಪ್ಸಾಲ ಪಟ್ಟಣದ ಜಿಮ್ನಾಷಿಯಂನಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಓದಿದನು. 1936ರಿಂದ 1942ರವರೆಗೆ ಉಪ್ಸಾಲ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಕಾಯ್ ಸೀಗ್ಬನ್ 1944ರಲ್ಲಿ ಸ್ಟಾಕ್ಹೋಂನಿಂದ ಪದವಿ ಪಡೆದನು. 1942 ರಿಂದ 1951ರವರೆಗೆ ಈತ ಸ್ಟಾಕ್ಹೋಂನಲ್ಲಿರುವ ನೊಬೆಲ್ ಇನ್ಸ್ಟಿಟ್ಯೂಟ್ನಲ್ಲಿ ಸಂಶೋಧಕ ಸಹಾಯಕನಾಗಿದ್ದನು. 1951ರಿಂದ 1954ರವರೆಗೆ ಸ್ಟಾಕ್ಹೋಂನ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕನಾದನು. 1954ರಲ್ಲಿ ಉಪ್ಸಾಲ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥನಾದನು. ಸೀಗ್ಬನ್ ಅಣ್ವಯಿಕ, ಬೈಜಿಕ, ಪ್ಲಾಸ್ಮಾ ಭೌತಶಾಸ್ತ್ರ, ಎಲೆಕ್ಟ್ರಾನ್ ದ್ಯುತಿ ಶಾಸ್ತ್ರಗಳಲ್ಲಿ ಆಸಕ್ತಿ ಹೊಂದಿದ್ದನು. ಎಲೆಕ್ಟಾನ್ ರೋಹಿತಶಾಸ್ತ್ರದಲ್ಲಿ ಅಪಾರ ಸಾಧನೆ ಮಾಡಿದ ಸೀಗ್ಬನ್ ಆಲ್ಪಾ, ಬೀಟಾ,ಗಾಮಾ ಕಿರಣ ರೋಹಿತಶಾಸ್ತ್ರದ ಮುಂಚೂಣಿಗನೆಂದು ಖ್ಯಾತನಾದನು. ಈ ರಂಗದಲ್ಲಿನ ಸಾಧನೆಗಾಗಿ ಕಾಯ್ ಸೀಗ್ಬನ್ 1981ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಈತನ ತಂದೆ ಕಾರ್ಲ್ ಮನ್ನೆ ಸೀಗ್ಬನ್ 1924ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾಗಿದ್ದನು. 1945 ರಲ್ಲಿ ಲಿಂಡ್ಮನ್ ಪ್ರಶಸ್ತಿ 1955ರಲ್ಲಿ ಜೋರ್ಕೆನ್ ಪ್ರಶಸ್ತಿ 1962ರಲ್ಲಿಸೆಲ್ಸಿಯಸ್ ಪದಕ, 1971ರಲ್ಲಿ ಗುಥೆನ್ಬರ್ಗ್ ವಿಶ್ವವಿದ್ಯಾಲಯದ ಸಿಕ್ಸೆಟನ್ ಹೆಯ್ಮನ್ ಪ್ರಶಸ್ತಿ, 1973ರಲ್ಲಿ ರೊಚೆನ್ಟಿರ್ನ ಹಾರಿಸನ್ ಹೋಲ್ ಪ್ರಶಸ್ತಿ, 1979ರಲ್ಲಿ ಟೋರ್ಬರ್ನ ಬರ್ಗ್ಮನ್ ಪದಕ, 1982ರಲ್ಲಿ ಪಿಟ್ಸ್ಬರ್ಗ್ ಅವಾರ್ಡ್ ಫಾರ್ ಸ್ಪೆಕ್ಟ್ರೋಸ್ಕೋಪ್ ಸೀಗ್ಬನ್ನನ್ನು ಅರಸಿಬಂದವು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ನಿಕೊಲಾಸ್, ಬ್ಲೂಯೆಂಬರ್ಜನ್ (1920--) 1981 Nicholas Bluembergen
ನೆದರ್ಲ್ಯಾಂಡ್ಸ್-ಭೌತಶಾಸ್ತ್ರ-ಬೈಜಿಕ ಕಾಂತೀಯ ಅನುರಣನ ಹಾಗೂ ವಿಶ್ರಾಂತ ಸ್ಥಿತಿ ಅಧ್ಯಯನದ ಮುಂಚೂಣಿಗ
ರಾಸಾಯನಿಕ ಇಂಜಿನಿಯರ್ನ ನಾಲ್ಕು ಜನ ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಲ್ಲಿ ನಿಕೊಲಾಸ್ ಎರಡನೆಯವನು. ನೆದರ್ಲ್ಯಾಂಡ್ಸ್ನ ಡೊಡ್ರೆಕ್ಟ್ನಲ್ಲಿ 11 ಮಾರ್ಚ್ 1920 ರಂದು ಜನಿಸಿದನು. ನಿಕೊಲಾಸ್, ಪ್ರಾಥಮಿಕ ಶಾಲೆಯಲ್ಲಿರುವಾಗ, ಆತನ ಕುಟುಂಬ ಉಟ್ರೆಸ್ಟ್ ಬಳಿಯ ವಿಲ್ಥೋವನ್ ಪಟ್ಟಣಕ್ಕೆ ಹೋಗಿ ನೆಲೆಸಿತು. ಉಟ್ರೆಕ್ಟ್ನಲ್ಲಿ ಲ್ಯಾಟಿನ್ ಸ್ಕೂಲ್ ಹೆಸರಿನಲ್ಲಿ 1474ರಲ್ಲಿ ಪ್ರಾರಂಭವಾಗಿದ್ದ ಮುನ್ಸಿಪಲ್ ಜಿಮ್ನಾಷಿಯಂನ್ನು ಹನ್ನೆರಡನೇ ವರ್ಷದಲ್ಲಿ ಸೇರಿದ ನಿಕೊಲಾಸ್ ಲ್ಯಾಟಿನ್, ಗ್ರೀಕ್, ಫ್ರೆಂಚ್ , ಜರ್ಮನ್, ಇಂಗ್ಲೀಷ್, ಡಚ್ ಹಾಗೂ ಮಾನಸಿಕ ವಿಜ್ಞಾನಗಳನ್ನು ಕಲಿತನು. ಪ್ರೌಢಶಾಲೆಯಲ್ಲಿರುವಾಗ ಭೌತ ಹಾಗೂ ರಸಾಯನಶಾಸ್ತ್ರಗಳಲ್ಲಿ ಉತ್ತಮ ಬೋಧಕರಿದ್ದರು. ಇದರಿಂದಾಗಿ ನಿಕೊಲಾಸ್ ವಿಜ್ಞಾನದತ್ತ ಆಕರ್ಷಿತನಾದನು. ಗಣಿತ ಹೇಗೆ ಭೌತಿಕ ಜಗತ್ತನ್ನು ವಿವರಿಸುತ್ತದೆಯೆಂದು ಚಿಂತಿಸಿ ನಿಕೊಲಾಸ್ ಸೋಜಿಗಗೊಂಡಿದ್ದನು. 1938ರಲ್ಲಿ ಉಟ್ರೆಸ್ಟ್ ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ಪ್ರಾಧ್ಯಾಪಕನಾಗಿದ್ದ ಓರ್ನ್ಸ್ಟೀನ್, ನಿಕೊಲಾಸ್ ಪದವಿಯ ವಿದ್ಯಾಭ್ಯಾಸದೊಂದಿಗೆ, ಡಾಕ್ಟರೇಟ್ಗೆ ಸಂಶೋಧನೆ ನಡೆಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿಗೆ ಸಹಾಯಕವಾಗುವಂತೆ ಮಾಡಿದನು. ಈತನ ಸಂಪ್ರಂಬಂಧ ಪ್ರಕಟನಗೊಂಡಾಗ ಅದಕ್ಕೆ ನೆರವಾದವರ ಪಟ್ಟಿಯಲ್ಲಿ ನಿಕೊಲಾಸ್ ಹೆಸರು ಸೇರಿದ್ದಿತು. ಇದು ಆತ ಪುಳಕಗೊಳ್ಳುವಂತೆ ಮಾಡಿತು. 1940ರಲ್ಲಿ ಹಾಲೆಂಡ್ ಜರ್ಮನಿಯ ನಾಝಿಗಳ ವಶವಾಯಿತು. ಓರ್ನ್ಸ್ಟೀನ್ನ್ನು 1941ರಲ್ಲಿ ವಿಶ್ವವಿದ್ಯಾಲಯದಿಂದ ಉಚ್ಛಾಟಿಸಲಾಯಿತು. ಯುರೋಪಿನ ಇತರ ದೇಶಗಳಿಗೆ ಹೋಗಿ ಶಿಕ್ಷಣ ಮುಂದುವರಿಸಬೇಕೆಂದು ನಿಕೊಲಾಸ್ ರೊಸೆನ್ಫೆಲ್ಡ್ ಕೈ ಕೆಳಗೆ ಸಂಖ್ಯಾಕಲನಶಾಸ್ತ್ರ (Statistica) , ದ್ಯುತಿವೈದ್ಯುತ್ ಪತ್ತೆಕಾರಕ (Photoelectric Detector) , ಬ್ರೌನಿಯನ್ ಚಲನೆಗಳ ಅಧ್ಯಯನ ಮಾಡಿದನು. 1943ರಲ್ಲಿ ನಾಝಿಗಳು ಊಟ್ರೆಸ್ಟ್ ವಿಶ್ವವಿದ್ಯಾಲಯವನ್ನು ಮುಚ್ಚುವುದಕ್ಕಿಂತ ಸ್ವಲ್ಪ ಮುಂಚೆ ನಿಕೊಲಾಸ್ಗೆ ಸ್ನಾತಕೋತ್ತರ ಪದವಿ ದಕ್ಕಿತು. ಮುಂದಿನ ಎರಡು ವರ್ಷ ನಾಝಿಗಳ ಕಣ್ಣಿಗೆ ಬೀಳದಂತೆ ಗೆಡ್ಡೆ ಗೆಣಸುಗಳನ್ನು ತಿಂದು ನಿಕೊಲಾಸ್, ದುಸ್ಥಿತಿಯಲ್ಲಿ ಜೀವನ ನಡೆಸಿದನು. ಈ ಅಜ್ಞಾತವಾಸ ಕಾಲದಲ್ಲಿ ಕ್ರ್ಯಾಮರ್ನ ಕ್ವಾಂಟಂ ಥಿಯರಿ ಡೆ ಎಲೆಕ್ಟ್ರಾನ್ ಎಂಡ್ ಡೆರ್ ಸ್ಟ್ರಾಹ್ಲಂಗ್, ಪುಸ್ತಕವನ್ನು ರಾತ್ರಿ ವೇಳೆ ಎಣ್ಣೆಯ ಬುಡ್ಡಿ ದೀಪದ ಕೆಳಗೆ ಓದಿ, ಕರತಲಾಮಲಕ ಮಾಡಿಕೊಂಡನು. ನಾಝಿ ಆಕ್ರಮಿತ ದೇಶದಲ್ಲಿ ದೀಪಕ್ಕೆ ಬೇಕಾದ ಎಣ್ಣೆಯೂ ದುರ್ಲಭವಾಗಿದ್ದರಿಂದ ವಾಹನಗಳಲ್ಲಿ ಬಳಸಿ ಚೆಲ್ಲಿದ ಉಳಿಕೆ ತೈಲಕ್ಕೆ ನಿಕೊಲಾಸ್ ಮೊರೆ ಹೋಗಿದ್ದನು. ನೆದರ್ಲ್ಯಾಂಡ್ಸ್ನಿಂದ ಹೊರಗೆ ಹೋಗಿ ಡಾಕ್ಟರೇಟ್ ಗಳಿಸುವ ಉತ್ಕಟೇಚ್ಛೆ ನಿಕೊಲಾಸ್ನಲ್ಲಿ ಮನೆಮಾಡಿದ್ದಿತು. ಇಡೀ ಯುರೋಪ್ ಯುದ್ದದಿಂದ ಜರ್ಝರಿತವಾದುದರಿಂದ, ಇದರಿಂದ ಬಹು ದೂರವಿದ್ದ ಅಸಂಸಂ ನಿಕೊಲಾಸ್ನ ಗಮನ ಸೆಳೆಯಿತು. ಈ ದಿಶೆಯಲ್ಲಿ ನಡೆಸಿದ ಪ್ರಯತ್ನಗಳ ಫಲವಾಗಿ ಅಸಂಸಂಗಳ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ವ್ಯಾಸಂಗ ಮಾಡುವ ಅವಕಾಶ ನಿಕೊಲಾಸ್ಗೆ ಬಂದೊದಗಿತು. ನಿಕೊಲಾಸ್ ಹಾರ್ವರ್ಡ್ಗೆ ಸೇರುವ ಆರು ವಾರ ಮೊದಲು ಪಾರ್ಸೆಲ್, ಟಾರಿ ಹಾಗೂ ಪೌಂಡ್ ಬೈಜಿಕ ಕಾಂತೀಯ ಅನುರಣನವನ್ನು (NMR-Nuclear Magnetic Resonance) ಆವಿಷ್ಕರಿಸಿದ್ದರು. ಇವರೆಲ್ಲರೂ ಎಂಐಟಿಯ ವಿಕಿರಣ ಪ್ರಯೋಗಾಲಯಕ್ಕೆ ಬೇಕಾದ ಸೂಕ್ಷ್ಮ ತರಂಗಗಳನ್ನು ಕುರಿತಾಗಿ, ವಿಷಯ ಸಂಗ್ರಹಣೆ ಹಾಗೂ ಪರಿಷ್ಕರಣೆಯಲ್ಲಿ ಕ್ರಿಯಾಶೀಲರಾಗಿದ್ದರು. ಇದರಿಂದಾಗಿ, ಬೈಜಿಕ ಕಾಂತೀಯ ಅನುರಣನ ಸಾಧನೆಯ ಕಾರ್ಯದಲ್ಲಿ ನೆರವಾಗಲು ಹಲವಾರು ವಿದ್ಯಾರ್ಥಿಗಳನ್ನು ಆರಿಸಿಕೊಂಡರು. ಅಂತಹ ಗುಂಪಿನಲ್ಲಿ ನಿಕೊಲಾಸ್ ಸೇರಿದನು. ಈ ಅವಧಿಯಲ್ಲಿ ಜೆ. ಷ್ವೈಂಜರ್ , ಜೆ.ಎಚ್ ವ್ಯಾನ್ವ್ಲೆಕ್, ಇ.ಸಿ. ಕೆಂಬ್ಲ್ನಂತಹ ಶ್ರೇಷ್ಟ ಪ್ರಾಧ್ಯಾಪಕರ ಪ್ರವಚನ ಕೇಳುವ ಅವಕಾಶ ನಿಕೊಲಾಸ್ಗೆ ಲಭ್ಯವಾಯಿತು. ಇದರ ಫಲವಾಗಿ, ಸಾಕಷ್ಟು ಅಜ್ಞಾತವಾಗಿದ್ದ ಘನ, ದ್ರವ, ಅನಿಲಗಳಲ್ಲಿನ ಬೈಜಿಕ ಕಾಂತೀಯ ಅನುರಣನ ಸುಳಿವುಗಳು ನಿಕೊಲಾಸ್ಗೆ ದಕ್ಕಿದವು. ಹಾರ್ವರ್ಡ್ಗೆ ಸಂದರ್ಶಕ ಪ್ರಾಧ್ಯಾಪಕನಾಗಿದ್ದ ನೆದರ್ಲ್ಯಾಂಡ್ಸ್ನ ಸಿ.ಜೆ. ಗಾರ್ಟರ್ ಆಹ್ವಾನದ ಮೇರೆಗೆ ತಾಯ್ನಾಡಿಗೆ ಮರಳಿದ ನಿಕೊಲಾಸ್, ಕ್ಯಾಮರ್ಲಿಂಗ್ ಒನ್ನೆಸ್ ಪ್ರಯೋಗಾಲಯ ಸೇರಿ ಬೈಜಿಕ ಅನುರಣನ ವಿಶ್ರಾಂತ ಸ್ಥಿತಿಯನ್ನು ಕುರಿತಾಗಿ ಸಂಪ್ರಂಬಂಧ ಮಂಡಿಸಿ, 1948ರಲ್ಲಿ ಡಾಕ್ಟರೇಟ್ ಗಳಿಸಿದನು. ಈ ಸಂಪ್ರಬಂಧದಲ್ಲಿ ಲೋಹಗಳಲ್ಲಿ ಸಂವಹನ ಎಲೆಕ್ಟ್ರಾನ್ಗಳಿಂದಲೂ, ಅಯಾನಿಕ ಸ್ಪಟಿಕಗಳಲ್ಲಿ ಅನುಕಾಂತೀಯ ಕಲ್ಮಷಗಳಿಂದಲೂ (Paramagnetic Dopes) ಬೈಜಿಕ ಗಿರಕಿ (Nuclear Spin) ಸಡಿಲಗೊಳ್ಳುವ ಸ್ವರೂಪವನ್ನು ವಿವರಿಸಿದನು. 1940ರಿಂದ 1951 ರವರೆಗೆ ಜೂನಿಯರ್ ಫೆಲೋ, 1951ರಿಂದ 1957 ರವರೆಗೆ, ಸಹಾಯಕ ಪ್ರಾಧ್ಯಾಪಕನಾಗಿ, 1957ರಿಂದ 1980 ರವರೆಗೆ ಗೋರ್ಡಾನ್ ಮೆಕೆನ್ಸಿ ಪ್ರಾಧ್ಯಾಪಕನಾಗಿ , 1974 ರಿಂದ 1980 ರವರೆಗೆ ಭೌತಶಾಸ್ತ್ರದ ರಮ್ಫೋರ್ಡ್ ಪ್ರಾಧ್ಯಾಪಕನಾಗಿ ನಿಕೊಲಾಸ್ ಸೇವೆ ಸಲ್ಲಿಸಿದನು. ಹಾರ್ವರ್ಡ್ ಸೈಕ್ಲೋಟ್ರಾನ್ ಕೇಂದ್ರದಲ್ಲಿ ಸೂಕ್ಷ್ಮ ತರಂಗ ರೋಹಿತಶಾಸ್ತ್ರದಲ್ಲಿ ಪ್ರಾಯೋಗಿಕ ಅನುಭವಗಳಿಸಿದನು. 1951ರಲ್ಲಿ ನಿಕೊಲಾಸ್ ಹಾಗೂ ಸಂಗಡಿಗರು ಬೈಜಿಕ ಕಾಂತೀಯ ಅನುರಣನ ವಿಭಾಗದಲ್ಲಿ ನಡೆಸಿದ ಪ್ರಯೋಗಗಳಿಂದ, ಅಪರಿಪೂರ್ಣ ಅಯಾನಿಕ ಸ್ಪಟಿಕ ಹಾಗೂ ಮಿಶ್ರ ಲೋಹಗಳಲ್ಲಿ ಚತುಧೃವ ಅಂತಕ್ರಿಯೆಗಳ (Quadrapolar Interaction) ಅಧ್ಯಯನ ನಡೆಸಿದರು. ಇದರ ಫಲವಾಗಿ ಲೋಹ, ವಾಹಕ, ಅವಾಹಕ, ಸ್ಪಟಿಕಗಳಲ್ಲಿ ಹಲವಾರು ವಿಧದಲ್ಲಿ ವಿಶ್ರಾಂತ ಸ್ಥಿತಿಯೇರ್ಪಡುವುದು ತಿಳಿದು ಬಂದಿತು. 1958ರಲ್ಲಿ ಷಾಲೋ ಹಾಗೂ ಟೌನೆಸ್ ಮೇಸರ್ ಉತ್ಪಾದಿಸುವ ಪ್ರಸ್ತಾವನೆ ನೀಡಿದರು. ಆಗ ನಿಕೊಲಾಸ್ ಇದು ಪ್ರಯೋಗಶಾಲೆಯ ಮಟ್ಟದಲ್ಲಿ ಸಾಧ್ಯವಾಗದೆ, ಬೃಹತ್ ಕೈಗಾರಿಕಾ ಮಟ್ಟದಲ್ಲಿ ಸಾಧ್ಯವೆಂದು ಹೇಳಿದನು. 1957ರಲ್ಲಿ ಫ್ರಾನ್ಸಿನ ಎಕೊಲೆ ನಾರ್ಮಲೆಯಲ್ಲಿ, 1964ರಿಂದ 1965ರವರೆಗೆ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯಕ್ಕೆ ,1973ರಲ್ಲಿ ಲೀಡೆನ್ಗೂ ಸಂದರ್ಶಕ ಪ್ರಾಧ್ಯಾಪಕನಾಗಿ ನಿಕೊಲಾಸ್ ಸೇವೆ ಸಲ್ಲಿಸಿದನು. 1979ರಲಿ ್ಲಬೆಂಗಳೂರಿಗೂ ಸಂದರ್ಶಕ ಪ್ರಾಧ್ಯಾಪಕನಾಗಿ ಭಾರತೀಯ ವಿಜ್ಞಾನ ಮಂದಿರಕ್ಕೆ ನಿಕೊಲಾಸ್ ಭೇಟಿ ಇತ್ತಿದ್ದನು. ಬೈಜಿಕ ಕಾಂತೀಯ ಅನುರಣನ ಹಾಗೂ ವಿಶ್ರಾಂತ ಸ್ಥಿತಿಗಳಲ್ಲಿ ನಡೆಸಿದ ಸಂಶೋಧನೆಗಳಿಗಾಗಿ ನಿಕೊಲಾಸ್ 1981ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಷೋಲೋ, ಆರ್ಥರ್ (ಲಿಯೋನಾರ್ಡ್)—(1921--) 1981 Schawiow , Arthur ( Leonard )
ಅಸಂಸಂ-ಭೌತಶಾಸ್ತ್ರ-ಲೇಸರ್’ ಸಹ ಉಪಜ್ಞೆಕಾರ.
ಷೋಲೋ ಡಾಕ್ಟರೇಟ್ ಪಡೆದ ನಂತರ ಟೋರೋಂಟೋದಲ್ಲಿ ವೃತ್ತಿ ಜೀವನ ಪ್ರಾರಂಭಿಸಿದನು. ನಂತರ ಕೊಲಂಬಿಯಾದಲ್ಲಿ ಟೌನೆಸ್ ಜೊತೆಗೆ ಸಂಶೋಧನೆ ಪ್ರಾರಂಭಿಸಿದನು. ಷೋಲೋ, ಟೌನೆಸನ್ ಸಹೋದರಿಯನ್ನು ವಿವಾಹವಾಗುವುದರೊಂದಿಗೆ ಇವರಿಬ್ಬರ ಸ್ನೇಹ ಸಂಬಂಧಕ್ಕೆ ತಿರುಗಿತು. 10 ವರ್ಷಗಳ ಕಾಲ ಬೆಲ್ ಲ್ಯಾಬೋರೇಟರಿಯಲ್ಲಿದ್ದ ಈತ, 1961ರಲ್ಲಿ ಸ್ಟ್ಯಾನ್’ಫೋರ್ಡ್ನಲ್ಲಿ ಪ್ರಾಧ್ಯಾಪಕನಾದನು. ಟೌನೆಸ್ ಹಾಗೂ ಷೋಲೋ ಮೇಸರ್ ತತ್ತ್ವ ಬಳಸಿ ಲೇಸರ್ನ್ನು ನಿರ್ಮಿಸಿದರು. 1970ರಿಂದ ಷೋಲೋ, ಪರಮಾಣುರೋಹಿತ, ಭೌತ ಸ್ಥಿರಗಳ ಮೌಲ್ಯ ನಿರ್ಧರಿಸಲು ಲೇಸರ್ ಬಳಸಿದನು. 1981ರಲ್ಲಿ ಷೋಲೋ ಲೇಸರ್ ರೋಹಿತ ದರ್ಶಕಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ವಿಲ್ಸನ್, ಕೆನ್ನೆತ್ ಗೆಡ್ಡೆಸ್ (1936--) 1982 Wilson , Kenneth Geddes
ಭೌತ ವ್ಯವಸ್ಥೆಗಳು ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಸಾಗುವುದನ್ನು ಸೈದ್ಧಾಂತಿಕವಾಗಿ ಸಾಕಷ್ಟು ಸರಳವಾಗಿ ವಿಶ್ಲೇಷಿಸಬಹುದು. ಆದರೆ ಎರಡು ಅವಸ್ಥೆಗಳ ಮಧ್ಯದ ಸ್ಥಿತ್ಯಂತರದ ವಿಶ್ಲೇಷಣೆ ಅಸಾಧ್ಯ ಎನ್ನುವಷ್ಟು ಜಟಿಲವಾದುದು. ಭೌತಿಕ ಕ್ರಿಯೆಗಳು ಜರುಗುವ ಅವಧಿಗಳು ಶೀಘ್ರವಾಗಿ ಬದಲಾಗುವುದೇ ಈ ಕ್ಲಿಷ್ಟತೆಗೆ ಮೂಲ ಕಾರಣ . 1974ರಲ್ಲಿ ವಿಲ್ಸನ್ ಇವುಗಳನ್ನು ವಿಶ್ಲೇಷಿಸುವ, ವಿವರಿಸುವ ತಂತ್ರ ನೀಡಿದನು. ಉದಾಹರಣೆಗೆ ಅನುಕಾಂತೀಯ (Paramagnetism) ವಸ್ತುವೊಂದನ್ನು ಕಾಂತಗೊಳಿಸುವಾಗ, ಪರಮಾಣುಗಳು ಪಂಜ್ತೀಕರಣಗೊಳ್ಳುತ್ತವೆ (Align).ಆಗ ಈ ಪ್ರಭಾವ ಒಂದು ಪರಮಾಣುವಿನಿಂದ ಪರಮಾಣುವಿಗೆ ಒಂದು ಅಣುವಿನಿಂದ ಇನ್ನೊಂದು ಅಣುವಿಗೆ ಅತ್ಯಲ್ಪ ಕಾಲಾವಧಿಯಲ್ಲಿ ವರ್ಗಾಂತರವಾಗುತ್ತದೆ. ಎಲ್. ಕಡನಾಫ್ಇಂತಹ ಪರಮಾಣುಗಳ ಗಿರಕಿಯನ್ನು ವರ್ಧಿಸಿ ಸ್ಥಿತ್ಯಂತರವನ್ನು ಅಳೆಯಬಹುದೆಂದು ಹೇಳಿದ್ದನು. ವಿಲ್ಸನ್ ಈ ತತ್ವದ ಹಿನ್ನೆಲೆಯಲ್ಲಿ ಕಾಂತ ವಸ್ತುಗಳು, ಮಿಶ್ರಲೋಹದ ಬದಲಾವಣೆ, ದ್ರವದಿಂದ ಅನಿಲ ರೂಪಾಂತರಿಕೆಯ ಸ್ಥಿತ್ಯಂತರಗಳನ್ನು ಅಳೆದನು. ಇದಕ್ಕಾಗಿ ವಿಲ್ಸನ್ 1982ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
1910 ಅಕ್ಟೋಬರ್ 10 ರಂದು ಲಾಹೋರ್ನಲ್ಲಿ ಚಂದ್ರಶೇಖರ್ ಜನನವಾಯಿತು. 18ನೇ ವಯಸ್ಸಿನಲ್ಲಿರುವಾಗ 1928ರಲ್ಲಿ ಪ್ರೊಸೀಡಿಂಗ್ಸ್ ಆಫ್ ರಾಯಲ್ ಸೊಸೈಟಿಯ ಪತ್ರಿಕೆಯಲ್ಲಿ ಕಾಂಪ್ಟನ್ ಪರಿಣಾಮ ಕುರಿತಾದ ತನ್ನ ಮೊದಲ ಸಂಶೋಧನಾ ಲೇಖನ ಪ್ರಕಟಿಸಿದನು. ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿಎಸ್ಸಿ ಆನರ್ಸ್ ಪದವಿ ಪಡೆದು ನಚಿತರ ಸರ್ಕಾರದ ವಿದ್ಯಾರ್ಥಿವೇತನ ಪಡೆದು ಕೇಂಬ್ರಿಜ್ಗೆ ಹೋದನು. ಇಲ್ಲಿ ಆರ್ ಎಚ್. ಫೆಲರ್ ಮತ್ತು ಡಿರಾಕ್ರ ಮಾರ್ಗದರ್ಶನದಲ್ಲಿ 1933ರಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದಲಿ ಪಿಎಚ್ಡಿ ಗಳಿಸಿದನು. ನಂತರ 1936ರಿಂದ ಅಸಂಸಂಗಳಲ್ಲಿ ನೆಲೆಸಿದನು. ಚಂದ್ರಶೇಖರ ನಕ್ಷತ್ರಗಳ ವಿಕಸನದ ಅಂತಿಮ ಹಂತಗಳಲ್ಲಿ ಆಸಕ್ತನಾಗಿದ್ದನು. ತಾರೆಯಲ್ಲಿನ ಬೈಜಿಕ ಇಂಧನ ಮುಗಿದ ನಂತರ , ಗುರುತ್ವದಿಂದಾಗಿ ಅದು ಅದರ ಕೇಂದ್ರಮುಖಿಯಾಗಿ ಒಳ ಕುಸಿಯತೊಡಗುತ್ತದೆ. ಆದರೆ ಒಂದು ಸ್ಥಿತಿಯ ನಂತರ ಬಹು ಒತ್ತಡಕ್ಕೆ ಒಳಗಾದ ಅನಿಲದಿಂದಾಗಿ ಕುಸಿತ ನಿಲುಗಡೆ ಹೊಂದುತ್ತದೆ. ಇಂತಹ ಸ್ಥಿತಿಯಲ್ಲಿ ನಕ್ಷತ್ರ ಅತ್ಯಂತ ಸಾಂದ್ರ ಬಿಳಿ ಕುಜ್ಬವಾಗುತ್ತದೆಯೆಂದುದು ಸೂಚಿಸಿದನು. ದ್ರವ್ಯರಾಶಿ ಅಧಿಕವಾದಷ್ಟು ಚಿಕ್ಕಗಾತ್ರದ್ದಾಗುವ ವೈಲಕ್ಷಣ ಶ್ವೇತ ಕುಬ್ಜದ್ದಾಗಿರುತ್ತದೆ. ಯಾವುದೇ ತಾರೆ ಶ್ವೇತ ಕುಬ್ಜವಾಗಲೂ ಅದರ ದ್ರವ್ಯರಾಶಿ ಕನಿಷ್ಟವೆಂದರೆ ಸೂರ್ಯನ ದ್ರವ್ಯರಾಶಿಯ 1.4ರಷ್ಟಿರಬೇಕು . ಈ ಮಿತಿ ‘ಚಂದ್ರಶೇಖರ ಮಿತಿ’ ಗುರುತಿಸಲ್ಪಟ್ಟಿದೆ. ಈವರೆಗೆ ವೀಕ್ಷಿಸಲಾದ ಎಲ್ಲಾ ತಾರೆಗಳೂ ಈ ಮಿತಿಯ ನಿಯಮದಲ್ಲಿವೆ. ಚಂದ್ರಶೇಖರ 1983ರ ನೊಬೆಲ್ ಪ್ರಶಸ್ತಿ ಪಡೆದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ವಿಲಿಯಂ, ಆಲ್ಫ್ರೆಡ್ ಫೌಲರ್-(1911--) 1983 William , Alfred Fowler
ವಿಲಿಯ್ಂನ ತಾತ ಸ್ಕಾಟ್ಲ್ಯಾಂಡ್ನವನಾಗಿದ್ದು ಕಲ್ಲಿದ್ದಲಿನ ಗಣಿಯಲ್ಲಿ ಕೆಲಸ ಮಾಡಿ, 1880ರ ಸುಮಾರಿಗೆ ಅಸಂಸಂಗಳಿಗೆ ಬಂದು ನೆಲೆಸಿದ್ದನು. ಪೆನ್ಸಿಲ್ವೇನಿಯಾದ ಪಿಟ್ಸ್ಬರ್ಗ್ನಲ್ಲಿ ವಿಲಿಯಂನ ಜನನವಾಯಿತು. ವಿಲಿಯಂ, ಎರಡು ವರ್ಷದವನಿದ್ದಾಗ ಲೆಕ್ಕಿಗನಾಗಿದ್ದ ಆತನ ತಂದೆ, ಓಹಿಯೋ ರಾಜ್ಯದ ಲಿಮಾ ಪಟ್ಟಣಕ್ಕೆ ವರ್ಗಾವಣೆಗೊಂಡನು. ಲಿಮಾ ಪಟ್ಟಣ ರೈಲ್ವೇ ಕೇಂದ್ರವಾಗಿದ್ದರಿಂದ, ಬಾಲ್ಯದಿಂದಲೇ ವಿಲಿಯಂ ರೈಲುಗಳತ್ತ ಆಕರ್ಷಿತನಾದನು. ಉಗಿ ಇಂಜಿನ್, ರೈಲುಗಾಡಿಗಳು ವಿಲಿಯಂನಲ್ಲಿ ಆಪ್ತತೆ ಹಾಗೂ ಅನನ್ಯತೆಯನ್ನು ಪ್ರೇರೇಪಿಸುತ್ತಿದ್ದವು. ಆದುದರಿಂದ ಖ್ಯಾತ ವಿಜ್ಞಾನಿಯಾದ ನಂತರವೂ ವಿಲಿಯಂ 1973ರಲ್ಲಿ ರಷ್ಯಾದಲ್ಲಿದ್ದ ಉಗಿ ಇಂಜಿನ್ ಚಾಲಿತ ಇಂಜಿನ್ನಲ್ಲಿ ಖರೋವ್ಸ್ ಹಾಗೂ ಚೈಲಾ ಮಧ್ಯೆ ಸುಮಾರು 500 ಕಿ,ಮೀ. ಪ್ರಯಾಣ ಕೈಗೊಂಡನು. ವಿಲಿಯಂನ ಅರವತ್ತನೇ ವಾರ್ಷಿಕೋತ್ಸವಕ್ಕೆ ಆತನ ಶಿಷ್ಯರೂ ಹಾಗೂ ಹಿತೈಷಿಗಳು ರೈಲ್ವೇ ಇಂಜಿನ್ ಮಾದರಿಯನ್ನು ನೆನಪಿನ ಕಾಣಿಕೆಯಾಗಿ ನೀಡಿದರು. ಹೋರೆಸ್ಮನ್ ಶಾಲೆ, ಹಾಗೂ ಲಿಮಾದ ಸೆಂಟ್ರಲ್ ಹೈ ಸ್ಕೂಲ್ನಲ್ಲಿ ವಿಲಿಯಂನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಜರುಗಿತು. ಇಲ್ಲಿಯ ಅಧ್ಯಾಪಕರು ವಿಲಿಯಂಗೆ ಇಂಜಿನಿಯರಿಂಗ್ನಲ್ಲಿದ್ದ ಆಸಕ್ತಿಗೆ ನೀರೆರೆದು ಪೋಷಿಸಿದರು. ಪಿಂಗಾಣಿ ಇಂಜಿನಿಯರಿಂಗ್ನಲ್ಲಿ ಪದವಿ ಗಳಿಸಲು ಕೊಲಂಬಸ್ನಲ್ಲಿರುವ ಓಹಿಯೋ ರಾಜ್ಯದ ವಿಶ್ವವಿದ್ಯಾಲಯ ಸೇರಿದನು. ಪದವಿ ವಿದ್ಯಾರ್ಥಿಯಾಗಿರುವಾಗಲೇ ಪೋರ್ಟ್ಲ್ಯಾಂಡ್ ಸಿಮೆಂಟ್ ತಯಾರಿಕೆಯ ಬಗೆಗೆ ಲೇಖನ ಬರೆದು ಪ್ರಶಸ್ತಿ ಗಳಿಸಿದನು. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದಲ್ಲಿ ವಿಶೇಷ ಪರಿಣಿತಿ ಗಳಿಸುವ ಅವಕಾಶಗಳಿದ್ದವು. ಇದನ್ನು ಬಳಸಿಕೊಂಡು ವಿಲಿಯಂ ಹಾಗೂ ಮುಂದೆ ಜಗತ್ಪ್ರಸಿದ್ದ ಸೈದ್ಧಾಂತಿಕ ಭೌತಶಾಸ್ತ್ರಜ್ಞನಾದ ಲಿಯೊನಾರ್ಡ್ ಐ ಷೀಫ್ನ ಭೌತಶಾಸ್ತ್ರದ ವಿಭಾಗ ಸೇರಿದರು. ಮುಂದೆ ಇವರಿಬ್ಬರೂ ಜೀವನವಿಡೀ ಆತ್ಮೀಯ ಗೆಳೆಯರಾಗಿದ್ದರು. ಪದವಿಯಲ್ಲಿರುವಾಗ ಆರ್ಥಿಕ ದುಸ್ಥಿತಿಯಿಂದ ಕಂಗೆಟ್ಟ ವಿಲಿಯಂ, ಅದರ ಪರಿಹಾರಕ್ಕಾಗಿ ಹೋಟೆಲ್ಗಳಲ್ಲಿ, ಮಾರುಕಟ್ಟೆಗಳಲ್ಲಿ ಬಿಡುವಿನ ವೇಳೆಯಲ್ಲಿ ಕೆಲಸ ಮಾಡಿದನು. ಸಾಯಂಕಾಲ ಹಾಗೂ ರಾತ್ರಿ ವೇಳೆ, ದೈಹಿಕ ಪರಿಶ್ರಮದ ಕೂಲಿ ಕೆಲಸ ಸಹ ಮಾಡಿದನು. ವಿಲಿಯಂಗೆ ಅಧ್ಯಯನದಲ್ಲಿದ್ದ ಆಸಕ್ತಿಯನ್ನು ಗಮನಿಸಿ ಆತನ ಪ್ರಾಧ್ಯಾಪಕ ವಿಲ್ಲಾರ್ಡ್ ಬೆನ್ನಟ್, ಪದವಿಯಲ್ಲಿರುವಾಗಲೇ ಎಲೆಕ್ಟ್ರಾನ್ ದೂಲಗಳ ನಾಭೀಕರಣ (Electron Beam Focusing)ಕುರಿತಾಗಿ ಪ್ರಯೋಗ ನಡೆಸಲು ಲೇಖನ ಪ್ರಕಟಿಸಲು ಅನುಮತಿ ನೀಡಿದನು. ಎಲೆಕ್ಟ್ರಾನಿಕ್ಸ್ ಹಾಗೂ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥನಾಗಿದ್ದ ಜಾನ್ಬೈರ್, ಶಾಲೆಯ ಅವಧಿಯ ನಂತರ ಹೆಚ್ಚಿನ ಪ್ರಯೋಗಗಳನ್ನು ನಡೆಸಲು ವಿಲಿಯಂಗೆ ಅನುಮತಿ ನೀಡಿದನು. ಇದರಿಂದ ಇಂಜಿನಿಯರಿಂಗ್ನ ಅನ್ವಯಿಕತೆ, ವಿಜ್ಞಾನದ ಸೈದ್ಧಾಂತಿಕತೆ, ಪ್ರಯೋಗಶೀಲತೆಗಳು ವಿಲಿಯಂನಲ್ಲಿ ಮುಪ್ಪುರಿಗೊಂಡವು. ಪದವಿ ಮುಗಿಸಿದ ನಂತರ ಡಬ್ಲ್ಯು.ಕೆ.ಕೆಲ್ಲಾಗ್ ರೇಡಿಯೇಷನ್ ಲ್ಯಾಬೋರೇಟರಿ ಸೇರಿದ ವಿಲಿಯಂಗೆ ಚಾಲ್ರ್ಸ್ ಕ್ರಿಶ್ಚಿಯನ್ ಲೌರಿಟ್ಸೆನ್ನ ಮಾರ್ಗದರ್ಶನ ದಕ್ಕಿತು. ಈತ ಇಂಜಿನಿಯರ್, ಭೌತಶಾಸ್ತ್ರಜ್ಞ, ವಾಸ್ತುಶಿಲ್ಪಿ ಹಾಗೂ ಉತ್ತಮ ಸಂಗೀತಗಾರನಿಗೆ ಹೆಸರು ವಾಸಿಯಾಗಿದ್ದನು. ಅಸಂಸಂ ಮೆಕ್ಕೆಜೋಳದ ಕಾರ್ನ್ ಫೆ್ಲೀಕ್ನ ಉದ್ಯಮಿ ಆ್ಯಂಡ್ಯ್ರೂ ಮಿಲಿಕನ್ ಈ ಪ್ರಯೋಗಾಲಯ ಸ್ಥಾಪಿಸಿದ್ದನು. ಚಾಲ್ರ್ಸ್ ಕ್ರಿಶ್ಚಿಯನ್ ಲೌರಿಟ್ಸೆನ್ ಮಾರ್ಗದರ್ಶನದಲ್ಲಿ ವಿಲಿಯಂ ಅಲ್ಪ ಅಣು ಸಂಖ್ಯೆಯ ಧಾತುಗಳ ವಿಕಿರಣಶೀಲತೆಯನ್ನು ಕುರಿತಾಗಿ ಸಂಪ್ರಂಬಂಧ ಮಂಡಿಸಿ, ಡಾಕ್ಟರೇಟ್ ಗಳಿಸಿದನು. ಈ ಸಂಪ್ರಂಬಂಧದಲ್ಲಿ ಆವಿಷ್ಟಿತ ಕಣಗಳ ಕೂಲಂಬ್ ಬಲಗಳನ್ನು ಬಹಿಷ್ಕರಣಗೊಳಿಸಿದಾಗ, ಬೈಜಿಕ ಬಲಗಳು, ಎರಡು ಪ್ರೋಟಾನ್ ಅಥವಾ ಎರಡು ನ್ಯೂಟ್ರಾನ್ಗಳ ಮಧ್ಯೆ ಒಂದೇ ರೀತಿಯಾಗಿದ್ದು, ಆವಿಷ್ಟ ಸಮಾಂಗೀಯವಾಗಿರುವುವೆಂದು ಹೇಳಿದನು. ಇಲ್ಲಿರುವಾಗಲೇ ಓಪೆನ್ ಹೀಮರ್ನಿಂದ ಪ್ರಯೋಗದ ಫಲಿತಾಂಶಗಳು ಸೈದ್ಧಾಂತಿಕವಾಗಿ ಹೇಗೆ ವಿವೇಚಿಸಲ್ಪಡುತ್ತವೆಯೆಂದು ನಿರ್ಧರಿಸುವ ಮಾರ್ಗವನ್ನು ವಿಲಿಯಂ ಕಲಿತನು. ವಿಲಿಯಂ ಹಾಗೂ ಸಂಗಡಿಗರು ಕೆಲ್ಲಾಗ್ಸ್ ಪ್ರಯೋಗಾಲಯದಲ್ಲಿ ಪೆÇ್ರೀಟಾನ್ಗಳು, ಇಂಗಾಲ ಹಾಗೂ ಸಾರಜನಕ ಅಯಾನ್ಗಳೊಂದಿಗೆ ಹೇಗೆ ಬೈಜಿಕವಾಗಿ ಪ್ರತಿಕ್ರಿಯೆಗೊಳಗಾಗುತ್ತವೆಯೆಂದು ಅಧ್ಯಯನ ನಡೆಸುತ್ತಿದ್ದರು. ಇದೇ ವೇಳೆಗೆ 1939ರಲ್ಲಿ ಹ್ಯಾನ್ಸ್ ಬೆಥೆ ಇಂಗಾಲ ಸಾರಜನಕ ಚಕ್ರವನ್ನು ವಿವರಿಸಿದನು. ಇದು ಇವರ ಪ್ರಯೋಗಗಳ ಮೇಲೆ ಭಾರಿ ಪರಿಣಾಮ ಬೀರಿತು. ಈ ವೇಳೆಗೆ ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ ಕೆಲ್ಲಾಗ್ಸ್ ಪ್ರಯೋಗಾಲಯದಲ್ಲಿ ಯುದ್ದ ಸಂಬಂಧಿ ಸಂಶೋಧನೆಗಳು ಪ್ರಾಧಾನ್ಯತೆ ಗಳಿಸಿದವು. 1944ರಲ್ಲಿ ವಿಲಿಯಂ ಮಿಲಿಟರಿಗೆ ನೆರವು ನೀಡುವ ಕಾರ್ಯಕ್ಕೆ ನಿಯೋಜಿಸಲ್ಪಟ್ಟನು. ಯುದ್ದದ ನಂತರ ಚಾಲ್ರ್ಸ್ ಲೌರಿಟ್ಸೆನ್ ಆತನ ಮಗ ಟಾಮಿ ಲೌರಿಟ್ಸನ್ ಹಾಗೂ ವಿಲಿಯಂ ಕೆಲ್ಲಾಗ್ ಸಂಶೋಧಾನಾಲಯವನ್ನು ಪುನರುಜ್ಜೀವನಗೊಳಿಸಿ, ತಾರೆಗಳ ಗರ್ಭದಲ್ಲಿ ಜರುಗುವ ಬೈಜಿಕ ಕ್ರಿಯೆಗಳ ಅಧ್ಯಯನ ಕೇಂದ್ರವಾಗಿಸಿದರು. ಎರಡನೇ ಜಾಗತಿಕ ಯುದ್ದಕ್ಕಿಂತ ಸ್ವಲ್ಪ ಮೊದಲು ಹ್ಯಾನ್ಸ್ ಸ್ಕಾಬ್ ಹಾಗೂ ವಿಲಿಯಂ ಸ್ಟೀಫೆನ್ಸ್, 5ರ ದ್ರವ್ಯರಾಶಿಯ ನಂತರ ಪರಮಾಣುವಿನ ಬೀಜ ಸ್ಥಿರವಾಗಿರುವುದಿಲ್ಲವೆಂದು ಹೇಳಿದ್ದರು. ಇದರ ಅಧ್ಯಯನ ಮುಂದುವರೆಸಿದ ವಿಲಿಯಂ , ಟಾಮಿ ಲೌರಿಟ್ಸನ್ ಹಾಗೂ ಆಲ್ಬಿನ್ ಟೂಲೆಸ್ಪ್ರಟ್ ದ್ರವ್ಯ 8ರಲ್ಲೂ ಸ್ಥಿರ ಬೀಜವಿರಲಾರದೆಂದು ತೋರಿಸಿದರು. ಈ ಮೊದಲು ಜಾರ್ಜ್ ಗ್ಯಾಮೋವ್ ದ್ರವ್ಯ 4 ಹೊಂದಿರುವ ಹೀಲಿಯಂಗೆ ನ್ಯೂಟ್ರಾನ್ಗಳನ್ನು ಸೇರಿಸುತ್ತಾ ಹೋಗಿ ಉಳಿದೆಲ್ಲಾ ಧಾತುಗಳನ್ನು ಪಡೆಯಬಹುದೆಂದು ಮಹಾ ಬಾಜಣೆಯಾದಾಗ ಹಾಗಾಗಿರುವುದೆಂದು ಸಾರಿದ್ದನು. ಹ್ಯಾನ್ ಸ್ಟಾಬ್, ಹಾಗೂ ವಿಲಿಯಂ ಸಂಗಡಿಗರ ಈ ಹೊಸ ತೀರ್ಮಾನ ಗ್ಯಾವೋವ್ನ ಸಿದ್ಧಾಂತಕ್ಕೆ ತೆರೆಯೆಳೆಯಿತು. 1951ರಲ್ಲಿ ವಿಲಿಯಂ ಹಾಗೂ ಸಂಗಡಿಗರೊಂದಿಗೆ ಕೆಲಸ ಮಾಡಲು ಕೆಲ್ಲಾಗ್ ಪ್ರಯೋಗಾಲಯಕ್ಕೆ ಬಂದ ಎಡ್ವಿನ್ ಸಾಲ್ ಪೀಟರ್, ಕೆಂಪು ದ್ರವ್ಯ ಸ್ಥಿತಿಯಲ್ಲಿರುವ ತಾರೆಗಳಲ್ಲಿ ಹೀಲಿಯಂ ಸೇರಿ ಇಂಗಾಲವಾಗುವ ಸಾಧ್ಯತೆಗಳಿರುವುದೇ ಹೊರತು, ಮಹಾ ಬಾಜಣೆಯಲ್ಲಿ ಅಲ್ಲವೆಂದು ತೋರಿಸಿದರು. 1953ರಲ್ಲಿ ಕೆಲ್ಲಾಗ್ ಪ್ರಯೋಗಾಲಯದಿಂದ ಹೊಯ್ಲ್, ಷ್ವಾಷ್ವ್ರ್ಸ್ಷಿಲ್ಟ್ ಹಾಗೂ ಅ್ಯಲನ್ ಸ್ಯಾಂಡೇಜ್ ನಡೆಸಿದ ಸಂಶೋಧನೆಗಳು ಇದು ಸರಿಯೆಂದು ತೋರಿಸಿದವು. 1954 ರಲ್ಲಿ ಕೇಂಬ್ರಿಜ್ಗೆ ಹೋದ ವಿಲಿಯಂ ಫುಲ್ಬ್ರೈಟ್ ಸ್ಕಾಲರ್ಷಿಫ್ನಲ್ಲಿ ಕೇಂಬ್ರಿಜ್ಗೆ ಹೋಗಿ ಹೊಯ್ಲ್ನೊಂದಿಗೆ ಕೆಲಸ ಮಾಡಿದನು. ಈತನೊಂದಿಗೆ ಜೆಫ್ರಿ ಹಾಗೂ ಮಾರ್ಗರೆಟ್ ಬುರ್ಬಿಜ್ ಸಹ ಸೇರಿದರು. ಇವರೆಲ್ಲರ ಸಂಘಟಿತ ಅಧ್ಯಯನದ ಫಲವಾಗಿ 1956ರಲ್ಲಿ ತಾರೆಗಳಲ್ಲಿರುವ ಧಾತು ಸಂಶ್ಲೇಷಣೆಯ (Element Synthesis)ಸಿದ್ಧಾಂತ ಹೊರ ಬಂದಿತು. ಈ ಸಿದ್ಧಾಂತನ್ವಯ ಮಹಾ ಬಾಜಣೆಯಿಂದಾಗಿ ವಿಶ್ವ ಉಗಮಗೊಂಡಾಗ ಸೃಜಿತವಾದ ಹೀಲಿಯಂ ಹಾಗೂ ಜಲಜನಕಗಳು ತಾರೆಗಳಲ್ಲಿ, ಸಂಶ್ಲೇಷಣಿತಗೊಂಡು ಇಂಗಾಲದಿಂದ ಯುರೇನಿಯಂವರೆಗಿನ ಧಾತುಗಳು ಉಗಮಗೊಳ್ಳುತ್ತವೆ. ಇದೇ ಕಾಲಕ್ಕೆ ಏಕಾಂಗಿಯಾಗಿ ಜೆ.ಡಬ್ಲ್ಯೂ ಕ್ಯಾಮೆರಾನ್ ಇಂತಹುದೇ ತೀರ್ಮಾನಗಳಿಗೆ ಬಂದಿದ್ದನು. ತಾರೆಗಳಲ್ಲಿನ ಬೈಜಿಕ ಸಂಶ್ಲೇಷಣಾ ಸಿದ್ಧಾಂತಕ್ಕಾಗಿ ವಿಲಿಯಂ, ಚಂದ್ರಶೇಖರ್ ಸುಬ್ರಹ್ಯಣ್ಯಂ ನೊಂದಿಗೆ 1983ರ ನೊಬೆಲ್ ಪ್ರಶಸ್ತಿ ಪಡೆದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಕಾರ್ಲೋ, ರುಬ್ಬಿಯಾ (1934--) 1984 Carlo, Rubbia
ಇಟಲಿ-ಭೌತಶಾಸ್ತ್ರ-ಕಣ ಸಂಶೋಧನೆಯ ಮುಂದಾಳು ರುಬ್ಬಿಯಾನ ತಂದೆ, ದೂರವಾಣಿ ಇಲಾಖೆಯಲ್ಲಿ ವೈದ್ಯುತ್ ಇಂಜಿನಿಯರ್ ಆಗಿದ್ದು ಗೊರಿಝಿಯಾ ಎಂಬ ಪಟ್ಟಣದಲ್ಲಿದ್ದನು. ಇಲ್ಲಿಯೇ 31 ಮಾರ್ಚ್ 1934 ರಂದು ರುಬ್ಬಿಯಾ ಜನಿಸಿದನು. ಎರಡನೇ ಜಾಗತಿಕ ಯುದ್ದದ ಕೊನೆಗೆ, ಗೊರಿಝಿಯಾ ಯುಗೋಸ್ಲೋವಿಯಾದ ವಶವಾದಾಗ, ರುಬ್ಬಿಯಾನ ಕುಟುಂಬ ವೆನಿಸ್ಗೂ ನಂತರ ಎಡಿನ್ಗೂ ವಲಸೆ ಹೋಯಿತು. ಬಾಲ್ಯದಿಂದಲೇ ರುಬ್ಬಿಯಾಗೆ ಇಂಜಿನಿಯರಿಂಗ್ನಲ್ಲಿ ಅತ್ಯಾಸಕ್ತಿಯಿದ್ದಿತು. ರುಬ್ಬಿಯಾ ಪ್ರೌಢಶಿಕ್ಷಣ ಮುಗಿಸಿ, ಪೀಸಾದ ಸ್ಕೂಲ್ ನಾರ್ಮಲೆಗೆ ಸೇರಿ ಹೆಚ್ಚಿನ ವಿಧ್ಯಾಭ್ಯಾಸ ಗಳಿಸಲು ಯತ್ನಿಸಿದನು. ಯುದ್ದ ಕಾಲದಲ್ಲಿನ ಪ್ರಕ್ಷುಬ್ದ , ಭಯ ಭೀತ ವಾತಾವರಣದಲ್ಲಿ ಸಮರ್ಪಕವಾಗಿ, ಓದದೇ ಇದ್ದುದರಿಂದ, ರುಬ್ಬಿಯಾ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣನಾದನು. ಇದಕ್ಕೆ ಬದಲಾಗಿ ಮಿಲಾನ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರಿದನು. ಸ್ಕೂಲ್ ನಾರ್ಮಲೆಗೆ ಪ್ರವೇಶ ಪಡೆದಿದ್ದ ಅಭ್ಯರ್ಥಿ ಬೇರೆಡೆಗೆ ತೆರಳಿದುದರಿಂದ, ರುಬ್ಬಿಯಾ ಅದೇ ಕಾಲೇಜಿಗೆ ಸೇರುವ ಅವಕಾಶ ಒದಗಿ ಬಂದಿತು. ಈ ಅಲ್ಪ ಘಟನೆ ರುಬ್ಬಿಯಾನ ಜೀವನವನ್ನೇ ಬದಲಿಸಿತು. ಹಿಂದಿನ ತರಗತಿಗಳಲ್ಲಿ ಓದಿದ್ದೆಲ್ಲವನ್ನು ಮರೆತಿದ್ದ ರುಬ್ಬಿಯಾ, ಬಹು ಪರಿಶ್ರಮದಿಂದ ಅಧ್ಯಯನ ಮಾಡಿ ಉಳಿದ ವಿಧ್ಯಾರ್ಥಿಗಳಿಗೆ ಸಮನಾದ ಸ್ಥಾನಕ್ಕೆ ಬಂದು ನಿಂತನು. ವಿಶ್ವ ಕಿರಣಗಳ ಬಗೆಗೆ ಪ್ರಬಂಧ ಬರೆದು 1954ರಲ್ಲಿ ಪದವಿ ಗಳಿಸಿದನು. 1958ರಲ್ಲಿ ಅಸಂಸಂಗಳಿಗೆ ಹೋಗಿ ಕಣ ವೇಗೋತ್ಕರ್ಷಕಗಳ (Particle Accelerator) ಬಗೆಗೆ, ಅರಿತುಕೊಳ್ಳಲು ರುಬ್ಬಿಯಾ ಯತ್ನಿಸಿದನು. ಇಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಡಬ್ಲ್ಯೂ,ಬೇಕರ್ ಜೊತೆಗೆ, ಸಿಂಕ್ರೋಸೈಕ್ಲೋಟ್ರಾನ್ನಲ್ಲಿ ಧೃವೀಕೃತ ಮ್ಯೂಯಾನ್ಗಳ ಸೆರೆ ಹಿಡಿತದಲ್ಲಿರುವ ಕೋನೀಯ ಅಸಮಾಂಗೀಯತೆಯನ್ನು (Angular Nonsymmetry)ಅಧ್ಯಯನ ನಡೆಸಿದನು. ಇದರಲ್ಲಿ ಸಾಮ್ಯತೆ ಭಂಗವಿರುವುದು ತಿಳಿದು ಬಂದಿತು. ಇಲ್ಲಿಂದ ಮುಂದೆ ಬೈಜಿಕ ಕ್ಷೀಣ ಬಲಗಳ ಅಧ್ಯಯನ ರುಬ್ಬಿಯಾನ ಜೀವನದ ಗುರಿಯಾಯಿತು. 1960ರಲ್ಲಿ ಯುರೋಪಿಗೆ ಹೋದ ರುಬ್ಬಿಯಾ ಸಿ.ಇ.ಅರ್.ಎನ್ನಲ್ಲಿ ಕ್ಷೀಣ ಬೈಜಿಕ ಬಲಗಳ ಅಧ್ಯಯನ ಮುಂದುವರೆಸಿ, ಧನಾತ್ಮಕ ಪೈಯಾನ್ನ ಬೀಟಾ ಶೈಥಿಲ್ಯ (Beta Decay) , ಮುಕ್ತ ಜಲಜನಕದಿಂದ ಮ್ಯೂಯಾನ್ನ ಸೆರೆಯಂತಹ ವಿದ್ಯಾಮನಗಳನ್ನು ಮೊದಲಿಗೆ ಬೆಳಕಿಗೆ ತಂದನು. 1973ರಲ್ಲಿ ಅಸಂಸಂಗಳ ಫರ್ಮಿ ಪ್ರಯೋಗಾಲಯದಲ್ಲಿ ರುಬ್ಬಿಯಾ ಹಾಗೂ ಸಂಗಡಿಗರು ನ್ಯೂಟ್ರಾನ್ ಅಂತಕ್ರಿಯೆಗಳಲ್ಲಿ ಎಲಾ ಬಗೆಯ ಮ್ಯೂಯಾನ್ ಘಟನೆಗಳನ್ನು ದಾಖಲಿಸಿದರು. ಇದರ ಮುಂದುವರಿಕೆಯಿಂದ ಪೈ/ಜೆ ಕಣಗಳು ವೀಕ್ಷಣೆಗೊಂಡವು. ಇದೇ ವೇಳೆಗೆ ಸಿ..ಇ.ಆರ್.ಎನ್ನಲ್ಲಿ ವಿಕ್ ವೀಸ್ಕಾಫ್ ಪರಸ್ಪರ ವಿರುದ್ದ ದಿಶೆಯಲ್ಲಿ ತಿರುಗುತ್ತಾ ಒಂದಕ್ಕೊಂದು ಘಟ್ಟಿಸುವ ಪ್ರೋಟಾನ್ ದೂಲಗಳ ವೇಗೋತ್ಕರ್ಷಕವನ್ನು (Proton Beam Accelerator) ನಿರ್ಮಿಸಿದರು. ಈ ಸಾಧನ ಬಳಸಿ ನೂರಾರು ಪ್ರಯೋಗ ನಡೆಸಿದ ರುಬ್ಬಿಯಾ ಹಾಗೂ ಇತರರು ಮಧ್ಯಂತರ ಬೋಸಾನ್ಗಳನ್ನು ಆವಿಷ್ಕರಿಸಿದರು. ಪ್ರೋಟಾನ್, ಪ್ರತಿಪ್ರೋಟಾನ್ಗಳನ್ನು ಘಟ್ಟಿಸಿ, ನಾನಾ ಬಗೆಯ ಹೊಸ ಕಣಗಳ ಅಧ್ಯಯನ ನಡೆಸಿದರು. ಇಂತಹ ಸುಕ್ಲಿಷ್ಟ, ಸಂಕೀರ್ಣ ಪ್ರಯೋಗಗಳಲ್ಲಿ ಜಗತ್ತಿನ ವಿವಿಧ ದೇಶಗಳ ಪರಿಣಿತರು ಪಾಲ್ಗೊಂಡಿದ್ದರು. ಮೂಲ ಕಣಗಳ ಸಂಶೋಧನೆಗಾಗಿ ರುಬ್ಬಿಯಾ ಹಾಗೂ ಸೈಮನ್ ವ್ಯಾನ್ ಡರ್ ಮೀರ್ 1984ರ ನೊಬೆಲ್ ಪ್ರಶಸ್ತಿ ಪಡೆದರು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು ಸೈಮನ್, ವ್ಯಾಂಡರ್ ಮೀರ್ 1984 Simon , Van der Meer
ಸೈಮನ್ ನೆದರ್’ಲ್ಯಾಂಡ್’ನ ಹೇಗ್ನಲ್ಲಿ ಜನಿಸಿದನು. ಶಿಕ್ಷಕರಾಗಿದ್ದ ತಂದೆ ತಾಯಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅಪಾರ ಮನ್ನಣೆಯಿತ್ತಿದ್ದರು. 1943 ರಲ್ಲಿ ಪ್ರೌಢಶಿಕ್ಷಣವನ್ನು ಸೈಮನ್ ಮುಗಿಸಿದನಾದರೂ , ಹಾಲೆಂಡ್ ಜರ್ಮನ್ ವಶದಲ್ಲಿದ್ದುದರಿಂದ ಕಾಲೇಜುಗಳು ಮುಚ್ಚಿದ್ದವು. ಆದ್ದರಿಂದ ಎರಡು ವರ್ಷಗಳ ಕಾಲ ಸೈಮನ್ ಕಲಾವಿದ್ಯಾರ್ಥಿಯಾಗಿದ್ದನು. 1945ರಲ್ಲಿ ಕಾಲೇಜುಗಳು ಪುನರಾರಂಭವಾದಾಗ ಡೆಲ್ಫ್ಟ್ನಲ್ಲಿನ್ ಟೆಕ್ನಿಕಲ್ ವಿಶ್ವವಿದ್ಯಾಲಯವನ್ನು ಸೈಮನ್ ಸೇರಿದನು. 1952ರಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿ ಫಿಲೆಪ್ಸ್ ಸಂಶೋಧನಾ ಸಂಸ್ಥೆ ಸೇರಿ ಅಧಿಕ ವಿಭವದ ವೈದ್ಯುತ್ ವಲಯದ ಬಗೆಗೆ ಸಂಶೋಧನೆ ನಡೆಸಿದನು. 1956ರಲ್ಲಿ ಜಿನಿವಾದಲ್ಲಿನ ಅಇಖಓ ಸಂಸ್ಥೆ ಸೇರಿದನು. ಇಲ್ಲಿ ಬೈಜಿಕ ಸಂಶೋಧನೆಗಳಿಗೆ ಬೇಕಾದ ಸಲಕರಣೆಗಳನ್ನು ನಿರ್ಮಿಸುವಲ್ಲಿ ಪರಿಶ್ರಮಿಸಿದನು. ಈ ನಿಟ್ಟಿನಲ್ಲಿ ಪರಿಚಯಿಸಿದ ಹೊಸ ತಂತ್ರಗಳಿಗಾಗಿ ಸೈಮನ್ 1984ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಕ್ಲಿಟ್ಝಿಂಗ್, ಕ್ಲೌಸ್ ವಾನ್ (1943--) 1985 Klitzing , Klaus von
ಜರ್ಮನಿ-ಭೌತಶಾಸ್ತ್ರ –ಕ್ವಾಂಟಂ ಹಾಲ್ ಪರಿಣಾಮ ಅನಾವರಣಗೊಳಿಸಿದಾತ.
ಕ್ಲಿಟ್ಝಿಂಗ್ ಪೊಸೆನ್ನಲ್ಲಿ ಜನಿಸಿದನು. ಬ್ರೌನ್ಷ್ವಿಗ್ ಹಾಗೂ ವುರ್ಜ್ಬರ್ಗ್ಗಳಲ್ಲಿ ಅವನ ಶಿಕ್ಷಣ ಸಾಗಿತು. 1980ರಲ್ಲಿ ಮ್ಯೂನಿಕ್ನಲ್ಲಿ ಪ್ರಾಧ್ಯಾಪಕನಾದ ಕ್ಲಿಟ್ಝಿಂಗ್ 1985ರಲ್ಲಿ ಮ್ಯಾಕ್ಸ್ಪ್ಲಾಂಕ್ ಸಂಸ್ಥೆಯ ನಿರ್ದೇಶಕನಾದನು. ತೆಳುವಾದ ಅರೆವಾಹಕದ ಪದರವನ್ನು ತಳಹದಿಯಾಗಿ ಬಳಸಿ, ಇದರ ಮೇಲ್ಮೈಗೆ ಲಗತ್ತಾಗಿರುವಂತೆ ಸೀಮಿತವಾದ ಎಲೆಕ್ಟ್ರಾನಿಕ್ ಅನಿಲವನ್ನು ವಿಶೇಷ ತಂತ್ರದಿಂದ ಪಡೆಯಬಹುದು. ಇವುಗಳನ್ನು ಕಾಂತಕ್ಷೇತ್ರಗಳಿಗೆ ಒಡ್ಡಿದಾಗ, ಈ ಕ್ಷೇತ್ರದಲ್ಲಿರುವ ಎಲೆಕ್ಟ್ರಾನ್ಗಳು ನಿರ್ದಿಷ್ಟ ಚೈತನ್ಯದ ಸ್ಥಿತಿಗಳಲ್ಲಿ ವೃತ್ತಿಯ ಕಕ್ಷೆಗಳಲ್ಲಿ ಸುತ್ತುತ್ತವೆ. ಒಂದು ಸ್ಥಿತಿಯಲ್ಲಿ ಇವುಗಳ ವಾಹಕತೆ ಮತ್ತು ರೋಧತೆ ಶೂನ್ಯವಾಗುತ್ತವೆ. ಇದನ್ನು ಕ್ವಾಂಟಂ ಹಾಲ್ ಪರಿಣಾಮವೆನ್ನುತ್ತಾರೆ. ಕ್ಲಿಟ್ಝಿಂಗ್ನ ಈ ಅನಾವರಣಕ್ಕೆ ಹಲವಾರು ಜನ ಸೈದ್ಧಾಂತಿಕ ವಿವರಣೆ ನೀಡಿದರು. ಈ ವಿದ್ಯಾಮಾನ ಅನಾವರಣಗೊಳಿಸಿದ್ದಕ್ಕಾಗಿ 1985ರ ನೊಬೆಲ್ ಪ್ರಶಸ್ತಿ ಕ್ಲಿಟ್ಝಿಂಗ್ಗೆ ದಕ್ಕಿತು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಗರ್ಡ್, ಬಿನ್ನಿಂಗ್ (1947--) 1986 Gerd , Binning
ಜರ್ಮನಿ-
ಬಿನ್ನಿಂಗ್ 1947ರಲ್ಲಿ ಫ್ರಾಂಕ್’ಫರ್ಟ್ನಲ್ಲಿ ಜನಿಸಿದನು. ಎರಡನೇ ಜಾಗತಿಕ ಯುದ್ದದ ಪರಿಣಾಮಗಳು ಬಿನ್ನಿಂಗ್ನನ್ನು ಬಾಲ್ಯದಲ್ಲಿಯೇ ಕಾಡಿ, ಅವನ ಜೀವನವನ್ನು ರೂಪಿಸಿದವು. ಫ್ರಾಂಕ್’ಫರ್ಟ್ ಹಾಗೂ ಬಫೆನ್ ಬಖ್ಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿದನು. ಬಾಲ್ಯದಿಂದಲೇ ದೊಡ್ಡ ವಿಜ್ಞಾನಿಯಾಗಬೇಕೆಂದು ಆಶೆ ಅವನಲ್ಲಿ ಮನೆಮಾಡಿದ್ದಿತಾದರೂ ಬೆಳೆದು ದೊಡ್ಡವಾನಾದಂತೆ ಸೈದ್ಧಾಂತಿಕ ಭೌತಶಾಸ್ತ್ರ ಬಹು ತಾಂತ್ರಿಕವೂ, ತಾತ್ತ್ವಿಕತೆವೂ ಹಾಗೂ ಕಲ್ಪನಾತೀತವೂ ಆಗಿರುವಂತೆ ಬಿನ್ನಿಂಗ್ಗೆ ಭಾಸವಾಗತೊಡಗಿತು. ಇದು ಬಿನ್ನಿಂಗ್ ಸಂಗೀತದತ್ತ ಹೊರಳಿ, ಅತ್ಯುತ್ತಮ ವಯೋಲಿನ್ ವಾದಕನಾಗುವಂತೆ ಮಾಡಿತು. ಡಾ|| ಮಾರ್ಟಿಯೆನ್ಸನ್ ಹಾಗೂ ಇ,ಹೊಯ್ನಿಗ್ ಮಾರ್ಗದರ್ಶನದಲ್ಲಿ, ಡಿಪ್ಲಮೋ ಕಾಲೇಜಿಗೆ ಸೇರಿದಾಗ, ಭೌತಶಾಸ್ತ್ರವನ್ನು ಓದುವದಕ್ಕಿಂತ, ಅದರಲ್ಲಿ ಕಾರ್ಯಶೀಲನಾಗುವುದು ಉತ್ತಮವೆಂದು ಕಂಡುಕೊಂಡ, ಬಿನ್ನಿಂಗ್ ಕ್ರಮೇಣವಾಗಿ ಭೌತಶಾಸ್ತ್ರದತ್ತ ಆಕರ್ಷಿತನಾದನು. 1978ರಲ್ಲಿ ಝೂರಿಕ್ನಲ್ಲಿದ್ದ ಐ.ಬಿ.ಎಂನ ಸಂಶೋಧನಾ ಪ್ರಯೋಗಾಲಯದಿಂದ, ಭೌತಶಾಸ್ತ್ರಜ್ಞ ಹುದ್ದೆಗೆ ಅಹ್ವಾನ ಬಂದಿತು. ಇಲ್ಲಿ ಹೀನ್ರಿಕ್ ರೋಹ್ರರ್ನ ಸಾಂಗತ್ಯ ದಕ್ಕಿತು. ಕ್ರಿಸ್ಟೋಫ್ಗೆರ್ಬರ್, ಎಡ್ಮಂಡ್ ವೀಬಲ್ನಂತಹ ಖ್ಯಾತ ಭೌತಶಾಸ್ತ್ರಜ್ಞರೊಂದಿಗಿನ ಕೆಲಸದಲ್ಲಿ ಬಿನ್ನಿಂಗ್ ತಲ್ಲೀನನಾದನು. ಇವರೆಲ್ಲರೊಂದಿಗೆ ಬಿನ್ನಿಂಗ್ ಸಹ ಜರ್ಮನಿಯ ಭೌತಶಾಸ್ತ್ರದ ಪ್ರಶಸ್ತಿ, ಒಟ್ಟೋ ಕ್ಲುಂಗ್ ಪ್ರಶಸ್ತಿ , ಹೆವೆಲ್ಟ್ ಪ್ಯಾಕರ್ಡ್ ಪ್ರಶಸ್ತಿಗಳು ದಕ್ಕಿದವು. 1986ರಲ್ಲಿ ಬಿನ್ನಿಂಗ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ರೋಹ್ರೆರ್, ಹೀನ್ರಿಖ್ (1933--) 1986 Rohrer , Heinrich
ಸ್ವಿಟ್ಸಲ್ಯಾಂಡ್-ಭೌತಶಾಸ್ತ್ರ –ಕ್ರಮಕ್ಷೇಪನ ಸುರಂಗ (Scanning Tunnel) ಸೂಕ್ಷ್ಮ ದರ್ಶಕದ ಉಪಜ್ಞೆಕಾರ.
ರೋಹ್ರೆರ್ 1963ರಲ್ಲಿ ಜೂರಿಕ್ನಲ್ಲಿನ ಐಬಿಎಂ ಶಾಖೆಯಲ್ಲಿ ವೃತ್ತಿಗೆ ಸೇರಿದನು. 1978ರಲ್ಲಿ ಗೆರ್ಡ್ ಬಿನ್ನಿಂಗ್ ಸಹ ಇಲ್ಲಿಗೆ ಸೇರ್ಪಡೆಗೊಂಡನು. ವಾಷಿಂಗ್ಟನ್ನ ನ್ಯಾಷನಲ್ ಬ್ಯುರೋ ಆಫ್ ಸ್ಟ್ಯಾಂಡರ್ಡ್ನಲ್ಲಿ, ರಸೆಲ್ ಯಂಗ್ ವಿಶಿಷ್ಟ ಬಗೆಯ ಸೂಕ್ಷ್ಮ ದರ್ಶಕದ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದನು. ಇದನ್ನು ರೋಹ್ರೆರ್ ಹಾಗೂ ಬಿನ್ನಿಂಗ್ ಮುಂದುವರೆಸಿದರು. 1981ರ ವೇಳೆಗೆ ಇವರು ನಿರ್ಮಿಸಿದ ಹೊಸ ಬಗೆಯ ಸೂಕ್ಷ್ಮದರ್ಶಕ ಒಂಟಿ ಪರಮಾಣುವಿನ ಮೂವತ್ತನೇ ಒಂದು ಭಾಗವನ್ನು ಗುರುತಿಸುವಷ್ಟು ಪ್ರಬಲವಾಗಿದ್ದಿತು. ಈ ಹೊಸ ಸೂಕ್ಷ್ಮ ದರ್ಶಕದಿಂದ ಅರೆ ವಾಹಕಗಳ ಮೇಲ್ಮೈ ಸ್ಥಿತಿ , ರಾಸಾಯನಿಕ ಕ್ರಿಯೆಗಳ ಅಧ್ಯಯನ ಜೀವ ರಾಸಾಯನಿಕ ಶಾಸ್ತ್ರದಲ್ಲಿ ಅಣುಗಳ ಸಂರಚನೆ ತಿಳಿಯಲು ಸಾಧ್ಯ. ಹೊಸದಾಗಿ ಹೊರ ಹೊಮ್ಮುತ್ತಿರುವ ವಿಜ್ಞಾನ ಹಾಗೂ ತಂತ್ರಜ್ಞಾನ ರಂಗಗಳಲ್ಲಿ ಈ ಸೂಕ್ಷ್ಮ ದರ್ಶಕ ವ್ಯಾಪಕವಾಗಿ ಬಳಕೆಯ ಸ್ಥಾನ ಗಿಟ್ಟಿಸುತ್ತಿದೆ. ರೋಹರ್, ಬಿನ್ನಿಂಗ್ ಹಾಗೂ ರಸ್ಕ್ 1986ರ ನೊಬೆಲ್ ಪ್ರಶಸ್ತಿ ಪುರಸ್ಕೃತರಾದರು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು ರಸ್ಕ್ , ಎರ್ನ್ಸ್ಟ್ ,ಆಗಸ್ಟ್ ಫ್ರೆಡೆರಿಕ್ (1906-1988) 1986 Ruska , Ernst August Friedrich
ಜರ್ಮನಿ-ಭೌತಶಾಸ್ತ್ರ- ಪಾರಗಮನ ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕದ ಮುಂಚೂಣಿಗ.
ಸೂಕ್ಷ್ಮದರ್ಶಕ, ದೂರದರ್ಶಕಗಳು ಅಭಿಜಾತ ವಿಜ್ಜಾನಕ್ಕೆ ತಂದಂತಹ ಕ್ರಾಂತಿಕಾರಕ ಬದಲಾವಣೆಗಳನ್ನು ರಸ್ಕ್’ನ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಆಧುನಿಕ ತಂದಿದೆ. ಇದನ್ನು ಮೊದಲಿಗೆ ಉಪಜ್ಞಿಸಿದವರು ಯಾರೆಂಬ ಬಗ್ಗೆ ವಾದ ವಿವಾದಗಳಿವೆಯಾದರೂ, ರಸ್ಕ್ ಇದಕ್ಕಾಗಿ 1986ರನೊಬೆಲ್ ಪ್ರಶಸ್ತಿ ಪಡೆದನು. ರಸ್ಕ್ ಮ್ಯೂನಿಕ್ ಹಾಗೂ ಬರ್ಲಿನ್ಗಳಲ್ಲಿ ಅಧಿಕ ವಿಭವದಲ್ಲಿನ ನಿರ್ವಾತದ ಪರಿಣಾಮಗಳನ್ನು ಕುರಿತು ಅಧ್ಯಯನ ಮಾಡಿದನು. 1920ರವೇಳೆಗೆ ಎಲೆಕ್ಟ್ರಾನ್ಗಳು ಕಣಗಳಂತೆ ಮಾತ್ರವಲ್ಲದೆ ಅನುಗುಣವಾದ ಸನ್ನಿವೇಶಗಳಲ್ಲಿ ಅಲೆಗಳಂತೆಯೂ ವರ್ತಿಸುವುವೆಂದು ಖಚಿತಗೊಂಡಿದ್ದಿತು. ಎಚ್.ಬುಷ್ ಪೀನಮಸೂರ ಬೆಳಕನ್ನು ಕೇಂದ್ರೀಕರಿಸುವಂತೆ, ಕಾಂತೀಯ ಸುರುಳಿಯಲ್ಲಿ ಎಲೆಕ್ಟ್ರಾನ್ಗಳನ್ನು ನಾಭೀಕರಿಸಬಹುದೆಂದು ತೋರಿಸಿದ್ದನು. ಇದರ ಆಧಾರದ ಮೇಲೆ ಆಗ ಬರ್ಲಿನ್ನಲ್ಲಿ ವಿದ್ಯಾರ್ಥಿಗಳಾಗಿದ್ದ ರಸ್ಕ್ ಹಾಗೂ ಎಂ. ಕ್ರೂಲ್ 17ಪಟ್ಟು ಸಾಮಥ್ರ್ಯದ ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕದ ನಿರ್ಮಿಸಿದರು. 1933ರಲ್ಲಿ ರಸ್ಕ್ ಇದನ್ನು ಸುಧಾರಿಸಿ, 12000 ಪಟ್ಟು ಹಿಗ್ಗಿಸಿ ತೋರಿಸಬಲ್ಲ ಸಾಮಥ್ರ್ಯದ ಸೂಕ್ಷ್ಮ ದರ್ಶಕ ತಯಾರಿಸಿದನು. ಇದನ್ನು 1938ರಲ್ಲಿ ವಾಣಿಜ್ಯ ಬಳಕೆಗಾಗಿ ಬಿಡುಗಡೆಗೊಳಿಸಿದನು. ಜಿ. ಆರ್ ರುಡೆನ್ ಬರ್ಗ್ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಏಕಸ್ವಾಮ್ಯ ಪಡೆದಿದ್ದನು. ಹಾಗಾಗಿ ರಸ್ಕ್ನ ಉತ್ಪನ್ನಗಳಿಗೆ ವಿರುದ್ಧವಾಗಿ ನ್ಯಾಯಾಲಯದ ತೀರ್ಮಾನಗಳು ಹೊರಬಂದವಾದರೂ, ಜರ್ಮನಿಯಲ್ಲಿ ರಸ್ಕ್ನ ಆದ್ಯತೆಗಳಿಗೆ ಧಕ್ಕೆ ಬರಲಿಲ್ಲ. ಫಿûೀಮನ್ ಹಾಗೂ ಹಲ್ಸ್ಕೆ ಕಂಪನಿಗಳು ರಸ್ಕ್ಗೆ ಬೆಂಬಲ ನೀಡಿದವು. ಮಾರ್ಪಾಡಾದ ಬೇಕರಿಯೊಂದರಲ್ಲಿ ಹೆಚ್ಚಿನ ಸಂಶೋಧನೆ ಮುಂದುವರೆಸಿದವು. ಎರಡನೇ ಜಾಗತಿಕ ಯುದ್ದದಲ್ಲಿ, ಜರ್ಮನಿ ಸೋಲುಂಡು, ರಷ್ಯಾದ ವಶವಾದಾಗ ರಷ್ಯಾದ ಸೇನೆ ಇದನ್ನು ಕೊಳ್ಳೆ ಹೊಡೆಯಿತು. ಸಾಧಾರಣ ಸೂಕ್ಷ್ಮ ದರ್ಶಕದ ಸಾಮಥ್ರ್ಯ 2000ಪಟ್ಟು ಇದ್ದರೆ, ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕದ ಸಾಮಥ್ರ್ಯ 100000 ಪಟ್ಟಿರುತ್ತದೆ. ರಸ್ಕ್ , ರೋಹ್ರರ್, ಜಿ ಬಿನ್ನಿಂಗ್ ಜೊತೆಗೆ 1978ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಿಂದ ಅಣುಗಳ ಮಟ್ಟದ ವೀಕ್ಷಣೆ ಸಾಧ್ಯ.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು ಅಲೆಕ್ಸ್ ,ಮುಲ್ಲರ್ ಕೆ. –(1927--)1987 ALEX muller K
ಆಸ್ಟ್ರಿಯಾ-ಭೌತಶಾಸ್ತ್ರ -ಪಿಂಗಾಣಿ ವಸ್ತುಗಳಲ್ಲಿನ ಅತಿವಾಹಕತೆ ಅನಾವರಣಗೊಳಿಸಿದಾತ. ಅಲೆಕ್ಸ್ 20 ಏಪ್ರಿಲ್ 1927ರಂದು ಸ್ವಿಟ್ಸಲ್ರ್ಯಾಂಡಿನ ಬೇಸಲ್ನಲ್ಲಿ ಜನಿಸಿದನು. ಬೇಸಲ್ನಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿದನು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ ಇಡೀ ಯುರೋಪ್ ಯುದ್ದದ ಸುಳಿಯಲ್ಲಿ ಸಿಲುಕಿದ್ದರೆ, ತಟಸ್ಥ ನೀತಿ ಅನುಸರಿಸಿದ ಸ್ವಿಟ್ಸಲ್ರ್ಯಾಂಡ್ ಯುದ್ದ ಸಂಬಂಧಿ ತಾಕಲಾಟಗಳಿಂದ ದೂರವಾಗಿ ಶಾಂತಸ್ಥಿತಿಯಲ್ಲಿದ್ದಿತು. ಹತ್ತೊಂಬತ್ತನೇ ವಯಸ್ಸಿನಲ್ಲಿ ಮಿಲಿಟರಿ ಶಿಕ್ಷಣಕ್ಕೆ ದಾಖಲಾಗಿ, ನಂತರ ಝೂರಿಕ್ನಲ್ಲಿರುವ ಸರ್ಕಾರದ ತಾಂತ್ರಿಕ ಕಾಲೇಜಿನ ಭೌತಶಾಸ್ತ್ರ ಹಾಗೂ ಗಣಿತ ವಿಭಾಗದಲ್ಲಿ ವಿದ್ಯಾಭ್ಯಾಸ ಮುಂದುವರೆಸಿದನು. ಇಲ್ಲಿ ಭೌತಶಾಸ್ತ್ರದ ಅಧ್ಯಯನಕ್ಕೆ ಅಂತಹ ಉತ್ತಮ ಭವಿಷ್ಯ ಕಾಣದಿದ್ದುದರಿಂದ ಅಲೆಕ್ಸಾ ವೈದ್ಯುತ್ ಇಂಜಿನಿಯರಿಂಗ್ಗೆ ವರ್ಗಾವಣೆಗೊಳ್ಳಲು ಯತ್ನಿಸಿದನು. ಆದರೆ ಪ್ರಾಧ್ಯಾಪಕನೊಬ್ಬನ ಸಲಹೆಯ ಮೇರೆಗೆ ಭೌತಶಾಸ್ತ್ರ ಅಧ್ಯಯನ ಮುಂದುವರಿಸಿದನು. 1955ರಲ್ಲಿ ಶಿಕ್ಷಣ ಪೂರೈಸಿದ ಅಲೆಕ್ಸಾ ಜಿನೇವಾದ ಬ್ಯಾಟೆಲ್ಲೆ ಮೆಮೋರಿಯಲ್ ಇನ್ಸ್ಟಿಟ್ಯೂಟ್ನಲ್ಲಿ ಬೋಧಕ ಸಿಬ್ಬಂದಿಯಾಗಿ ಜೀವನ ಪ್ರಾರಂಭಿಸಿದನು. 1963ರಲ್ಲಿ ಐಬಿಎಂ ಸಂಶೋಧನಾ ಪ್ರಯೋಗಾಲಯ ಸೇರಿ ಸಂಯುಕ್ತಗಳ ದ್ಯುತಿವರ್ಣಗಳ ಕುರಿತಾಗಿ ಪ್ರಯೋಗಗಳನ್ನು ಹಮ್ಮಿಕೊಂಡನು. ಅಲೆಕ್ಸಾನಿಂದ ವಿಸ್ತೃತವಾಗಿ ಜರುಗಿದ ಅಧ್ಯಯನ ಹಾಗೂ ಪ್ರಯೋಗಗಳಿಂದ ಪಿಂಗಾಣಿ ವಸ್ತುಗಳಲ್ಲಿನ ಅತಿವಾಹಕತೆ ಅನಾವರಣಗೊಂಡಿತು. ಇದಕ್ಕಾಗಿ ಅಲೆಕ್ಸ್ 1987ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಜಾರ್ಜ್, ಬೆಡ್ನೋರ್ಜ್ (1950--) 1987 George , Bednorz
ಜರ್ಮನಿ -ಭೌತಶಾಸ್ತ್ರ-ಪಿಂಗಾಣಿಗಳಲ್ಲಿನ ಅತಿವಾಹಕತೆಯನ್ನು ಕುರಿತಾಗಿ ಸಂಶೋಧಿಸಿದಾತ.
ಜಾರ್ಜ್, 16 ಮೇ 1950ರಂದು ಜನಿಸಿದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಜಾರ್ಜ್ನ ತಂದೆ ತಾಯಿಗಳು ಪರಸ್ಪರ ಸಂಪರ್ಕವಿರದಂತೆ ಕಣ್ಮರೆಯಾಗಿದ್ದರು. ಜಾರ್ಜ್ನ ತಾಯಿ ಮಗನನ್ನು ಉತ್ತಮ ಸಂಗೀತಗಾರನನ್ನಾಗಿ ರೂಪಿಸಲು ಯತ್ನಿಸಿದಳಾದರೂ, ಜಾರ್ಜ್ಗೆ ಬಾಲ್ಯದಿಂದಲೂ , ಯಂತ್ರ ದುರಸ್ತಿಗಳಲ್ಲೇ ಅಧಿಕ ಉತ್ಸಾಹವಿದ್ದಿತು. ರಸಾಯನಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದ ಜಾರ್ಜ್ 1968ರಲ್ಲಿ ಮುನ್ಸ್ಟರ್ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣಕ್ಕೆ ನೊಂದಾಯಿತನಾದನು. ರಸಾಯನಶಾಸ್ತ್ರದಲ್ಲಿ ಭಾರಿ ಸಂಖ್ಯೆಯ ವಿದ್ಯಾರ್ಥಿಗಳು ಇದ್ದುದರಿಂದ ಭೌತ ಹಾಗೂ ರಸಾಯನಶಾಸ್ತ್ರಗಳೆರಡಕ್ಕೂ ಬೆಸುಗೆಯಂತಿದ್ದ ಸ್ಪಟಿಕಾಲೇಖಶಾಸ್ತ್ರಕ್ಕೆ ವರ್ಗಾವಣೆಗೊಂಡನು. 1972ರಲ್ಲಿ ತನ್ನ ಪ್ರಾಧ್ಯಾಪಕನಾದ ವೂಲ್ಫ್ಗ್ಯಾಂಗ್ ಹೌಫ್’ಮನ್ಮತ್ತು ಹೊರ್ಸಾಟ್ ಬೊಹ್ಮ್ ನೆರವಿನಿಂದ ಐಬಿಎಂ ಝೂರಿಕ್ ಸಂಶೋಧನಾ ಪ್ರಯೋಗಾಲಯ ಸೇರಿದನು. ಇಲ್ಲಿ ಸ್ಪಟಿಕಗಳ ಬೆಳವಣಿಗೆ ಗುಣ ಲಕ್ಷಣಗಳ ಬಗೆಗೆ ಅಧ್ಯಯನ ನಡೆಸಿದನು. 1977ರಲ್ಲಿ ಸ್ವಿಸ್ ಫೆಡೆರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಘನಸ್ಥಿತಿ ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಸಂಶೋಧಕನಾಗಿ ಸೇರಿದನು. ಪರ್ವೊಸ್ಕೈಟ್ ರೀತಿಯ ಘನ ದ್ರಾವಣಗಳ ರಾಚನಿಕ, ಪಾರವೈದ್ಯುತ್ (Diaelectric) , ಫೆರೋವೈದ್ಯುತ್ ಗುಣಗಳ ಬಗೆಗೆ ಸಂಶೋಧನೆ ನಡೆಸಿ ಡಾಕ್ಟರೇಟ್ ಗಳಿಸಿದನು. ಕ್ಯಾಮರ್ಲಿಂಗ್ ಒನ್ನೆಸ್ 1911ರಲ್ಲಿ ಕೆಲವು ಲೋಹಗಳು 00 K ತಾಪಮಾನದಲ್ಲಿ ವಿದ್ಯುತ್ ಹರಿವಿಗೆ ಯಾವುದೇ ಪ್ರತಿರೋಧ ಒಡ್ಡದಿರುವುದನ್ನು ಗಮನಿಸಿದ್ದನು. ಹಾಗೂ ಈ ವಿದ್ಯಾಮಾನವನ್ನುಕುರಿತಾಗಿ ಬಾರ್ಡಿನ್ ಹಾಗೂ ಸಹ ಸಂಶೋಧಕರು ಬಿ.ಸಿ.ಎಸ್. ಸಿದ್ಧಾಂತವನ್ನು 1957ರಲ್ಲಿ ಮಂಡಿಸಿದ್ದರು. ಲೋಹಗಳಲ್ಲಿ ಅತಿವಾಹಕತೆ 00 K ಬದಲಾಗಿ , ದ್ರವ ಸಾರಜನಿಕ ಕುದಿಯುವ 770 K ಯಲ್ಲಿ ಸಾಧ್ಯವಾಗುವುದಾದರೆ, ಎಲೆಕ್ಟಾನಿಕ್ ಉಪಕರಣಗಳ ದಕ್ಷತೆ ಹಾಗೂ ಸಾಮರ್ಥ್ಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಸಾಧ್ಯತೆ ವಿಜ್ಞಾನಿಗಳ ಸಮುದಾಯಕ್ಕೆ ವೇದ್ಯವಾಗಿದ್ದಿತು. 1986ರಲ್ಲಿ ಬೆಡ್ನಾಟ್ರ್ಸ್ ಹಾಗೂ ಮೂಲರ್ ಲ್ಯಾಂಥನಂ ಬೇರಿಯಂ ಹಾಗೂ ತಾಮ್ರಗಳ ಆಕ್ಸೈಡ್ಗಳ ಮಿಶ್ರ ಲೋಹ 3060K ತಾಪಮಾನದಲ್ಲಿ ಅತಿವಾಹಕವಾಗಿರುವುದಾಗಿ ಸಾಧಿಸಿ ತೋರಿಸಿದರು. ಸಂಶೋಧನೆ ಪ್ರಕಟವಾದ ಕೆಲವು ದಶಕಗಳ ನಂತರವೇ ನೊಬೆಲ್ ಪ್ರಶಸ್ತಿ ದಕ್ಕುವುದು ಸಂಪ್ರದಾಯವೇನೋ ಎನ್ನುವಷ್ಟು ಸಹಜವಾಗಿದೆ ಇದಕ್ಕೆ ಅಪವಾದವೆಂಬಂತೆ ಸಂಶೋಧನೆ ಪ್ರಕಟವಾದ ಒಂದೇ ವರ್ಷದಲ್ಲಿ ನೊಬೆಲ್ ಇತಿಹಾಸದಲ್ಲೇ ಆಶ್ಚರ್ಯವೆನಿಸುವಂತೆ ಬೆಡೆನಾಟ್ರ್ಸ್ ಹಾಗೂ ಮೂಲರ್ ಪ್ರಶಸ್ತಿ ಪಡೆದರು. 1987ರಲ್ಲಿ ಅಮೆರಿಕನ್ ಫಿಸಿಕಲ್ ಸೊಸೈಟಿ ನ್ಯೂಯಾರ್ಕ್ನಲ್ಲಿ ಅತಿವಾಹಕಗಳ ಮೇಲೆ ವಿಶೇಷ ಸಮಾವೇಶವೊಂದನ್ನು ಕರೆದಾಗ ವಿರಳ ಭೂಧಾತುಗಳು (Rare Earth Elements) ಲ್ಯಾಂಥನಂ, ಓರಿಟ್ರಿಂ ಬೇರಿಯಂ, ತಾಮ್ರ ಹಾಗೂ ಇವುಗಳ ಆಕ್ಸೈಡ್ಗಳ ಬಗೆಯ ಮಿಶ್ರಲೋಹಗಳು 900ಏ ತಾಪಮಾನದಲ್ಲಿ ಅತಿವಾಹಕವಾಗಿರುವವೆಂದು ಘೋಷಿಸಲಾಯಿತು. 1976ರಲ್ಲಿ ಐಬಿಎಂ ಜೂರಿಕ್ನ್ನು ಸೇರಿದ ಬೆಡ್ನಾಟ್ರ್ಸ್ , ಮೂಲರ್ ಮಾರ್ಗದರ್ಶನದಲ್ಲಿ 1976ರಲ್ಲಿ ಪದವಿಗಳಿಸಿ, 1982ರಿಂದ ಶಿಕ್ಷಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಲಿಯೋನ್, ಎಂ.ಲೆಡರ್’ಮನ್ (1922--) 1988 Leon , Lederman
ಅಸಂಸಂ-ಭೌತಶಾಸ್ತ್ರ- ಅತಿವಾಹಕ ಸಿಂಕ್ರೋಟ್ರಾನ್ ನಿರ್ಮಾಣದಲ್ಲಿ ಶ್ರಮಿಸಿದಾತ.
ನ್ಯೂಯಾರ್ಕ್ನಲ್ಲಿದ್ದ ಅಗಸನ ಎರಡನೇ ಮಗನಾಗಿ ಲೆಡರ್ಮನ್ 15 ಜುಲೈ 1922ರಲ್ಲಿ ನ್ಯೂಯಾರ್ಕ್ನಲ್ಲಿ ಜನಿಸಿದನು. ನ್ಯೂಯಾರ್ಕ್ನ ಸಾರ್ವಜನಿಕ ಶಾಲೆಗಳಲ್ಲಿ ಶಿಕ್ಷಣ ಪಡೆದನು. ಲೆಡರ್ಮನ್, ಪದವಿಯಲ್ಲಿ ರಸಾಯನಶಾಸ್ತ್ರವನ್ನು ಪ್ರಮುಖ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದನಾದರೂ, ಸ್ನೇಹಿತರಾದ ಐಸಾಕ್ ಹಾಲ್ಪರ್ನ್ ಮತ್ತು ಮಾರ್ಟಿನ್ ಜೆ.ಕ್ಲೀನ್ರ ಸಹವಾಸದಿಂದ ಭೌತಶಾಸ್ತ್ರದಲ್ಲಿ ಅಸಕ್ತಿ ತಳೆದನು. 1943ರಲ್ಲಿ ಪದವಿ ಮುಗಿಸಿ ಮುಂದೆ ಮೂರು ವರ್ಷಗಳ ಕಾಲ ಅಮೆರಿಕೆಯ ಸೇನೆಗೆ ಸೇರಿ, 2ನೇ ಲೆಪ್ಟಿನೆಂಟ್ ಹುದ್ದೆಗೇರಿದನು. 1946ರಲ್ಲಿ, ಕೊಲಂಬಿಯಾದ ಭೌತಶಾಸ್ತ್ರ ಪದವಿ ಶಾಲೆ ಸೇರಿದನು. ಇಲ್ಲಿ ಖ್ಯಾತ ಭೌತಶಾಸ್ತ್ರಜ್ಞ ರಬಿ ಕಾರ್ಯದರ್ಶಿಯಾಗಿದ್ದನು.ಈ ಶಾಲೆ, ಇರ್ವಿಂಗ್ಟನ್ ಅನ್ ದಿ ಹಡ್ಸನ್ನಲ್ಲಿ ನೌಕಾದಳ ಸಂಶೋಧನಾಲಯದ (ಎನ್ಇವಿಐಎಸ್) ನೆರವಿನೊಂದಿಗೆ ಸಿಂಕ್ರೋಸೈಕ್ಲೋಟ್ರಾನ್ ಪ್ರಯೋಗಾಲಯದ ನಿರ್ಮಾಣವನ್ನು ಪ್ರಾರಂಭಿಸಿದ್ದಿತು. 1948ರಲ್ಲಿ ಲೆಡರ್ಮನ್ ಈ ಯೋಜನೆಯಲ್ಲಿ ಸೇರಿದನು. ಇಲ್ಲಿ ಸೈಕ್ಲೋಟ್ರಾನ್ ಯೋಜನೆಯ ನಿರ್ದೇಶಕನಾಗಿದ್ದ ಯುಜಿನ್ ಟಿ. ಬೂತ್ನ ಕೈಕೆಳಗೆ ದುಡಿಯುವ ಅವಕಾಶ ದಕ್ಕಿತು. ಇಲ್ಲಿ ವಿಲ್ಸನ್ ಮೇಘ ಕೋಠಿಯನ್ನು (Cloud Chamber) ಕುರಿತಾಗಿ ಸಂಪ್ರಂಬಂಧ ಮಂಡಿಸುವಂತೆ ಲೆಡರ್ಮನ್ಗೆ ಹೇಳಲಾಯಿತು. ರಬಿ, ಜಗದ್ವಿಖ್ಯಾತರಾಗಿದ್ದ ಹಲವಾರು ಜನ ಭೌತವಿಜ್ಞಾನಿಗಳನ್ನು ಸಿಂಕ್ರೋ ಸೈಕ್ಲೋಟ್ರಾನ್ ಯೋಜನೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದನು ರೋಮ್ನಲ್ಲಿದ್ದ ಪ್ರಾಧ್ಯಾಪಕ ಗಿಲ್ಬರ್ಟೋ ಬರ್ನಾರ್ಡಿನಿ, ಎಂಐಟಿಯ ಜಾನ್ ಟಿನ್ಲೊಟ್ ಬಕ್ರ್ಲೆಯ ಜಾಕ್ ಸ್ವೀನ್ಬರ್ಜರ್ ಇವರಲ್ಲಿ ಪ್ರಮುಖರು. 1951ರಲ್ಲಿ ಲೆಡೆರ್ಮ್ನ್ ಡಾಕ್ಟರೇಟ್ ಗಳಿಸಿದ ಮೇಲೆ, ಇವರಿಗೆ ಸಹಾಯಕನಾಗಿ ಮುಂದುವರೆಯುವ ಅಹ್ವಾನ ಬಂದಿತು. 1958ರಲ್ಲಿ ಪ್ರ್ರಾಧ್ಯಾಪಕನಾಗಿ ಬಡ್ತಿ ಹೊಂದಿದ ಲೆಡರ್ಮನ್ ಎಲ್ಇಅರ್ಎನ ಪಡೆಗೆ ಸೇರಿಕೊಂಡನು 1961 ರಿಂದ 1978ರವರೆಗೆ ನೆವೀಸ್ ಪ್ರಯೋಗಾಲಯದ ನಿರ್ದೇಶಕನಾಗಿದ್ದನು. ಬ್ರೂಕ್ ಹ್ಯಾವೆನ್, ಸಿಇಆರ್ಎನ್ ಹಾಗೂಫರ್ಮಿ ಪ್ರಯೋಗಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕನಾಗಿದ್ದನು. 1979ರಲ್ಲಿಫರ್ಮಿ ನ್ಯಾಷನಲ್ ಆ್ಯಕ್ಸಲೇಟರ್ ಲ್ಯಾಬೋರೇಟರಿಯ ನಿರ್ದೇಶಕನಾಗಿ, ಜಗತ್ತಿನ ಮೊಟ್ಟ ಮೊದಲ ಅತಿವಾಹಕ ಸಿಂಕ್ರೋಟ್ರಾನ್ ನಿರ್ಮಾಣಗೊಳಿಸಿದನು. ಕಣ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ಲೆಡರ್ಮನ್ ಮೆಲ್ವಿನ್ ಷಾಷತ್ ಹಾಗೂ ಜಾಕ್ ಸ್ಟೀನ್ಬರ್ಜರ್ ರೊಂದಿಗೆ ಲೆಡೆರ್ಮನ್ 1988ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದರು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಮೆಲ್ವಿನ್, ಷಾರ್ಷ್ (1932--) 1988 Melvin , Schwartz
ಅಸಂಸಂ -ಭೌತಶಾಸ್ತ್ರ –ಪೈಯಾನ್, ಮ್ಯುಯಾನ್ ಕಣಗಳ ಕ್ರಿಯಾ ಅದ್ಯಯನ ಪ್ರಾರಂಭಿಸಿದಾತ.
ಅಸಂಸಂ ತೀವ್ರ ಆರ್ಥಿಕ ಖಿನ್ನತೆಯಲ್ಲಿ ನರಳುತ್ತಿದ್ದ ಕಾಲದಲ್ಲಿ ಮೆಲ್ವಿನ್ ಜನನವಾಯಿತು. ಇದರಿಂದಾಗಿ ಈತನ ಕುಟುಂಬ ಕಡು ಕಷ್ಟದಲ್ಲಿದ್ದಿತು. ಮೆಲ್ವಿನ್ ನೆನಪುಗಳು ಬಾಲ್ಯದ ಬಡತನದ ನೆನಪಿನಿಂದ ತೋಯ್ದು ಹೋಗಿವೆ. ಮಹಾನ್ ಅಶಾವಾದಿಯಾಗಿದ್ದ ಮೆಲ್ವಿನ್ ತಂದೆ ಮುಂದೆ ಒಳ್ಳೆ ದಿನಗಳು ಬಂದೇ ಬರುವವೆಂಬ ನಂಬುಗೆಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪರಿಶ್ರಮಿಸಿದನು. ಮೆಲ್ವಿನ್ ಹನ್ನೆರಡನೇ ವಯಸ್ಸಿನಲ್ಲಿ ನ್ಯೂಯಾರ್ಕ್ನ ಬ್ರಾಂಕ್ಸ್ ಹೈಸ್ಕೂಲ್ ಆಫ್ ಸೈನ್ಸ್ ಸೇರಿದನು. ಈ ಪ್ರೌಢಶಾಲೆಯಲ್ಲಿ ಓದಿದ ನಾಲ್ಕು ಜನರು ಮುಂದೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತರಾದುದೊಂದು ವಿಶೇಷ. ಪದವಿಗಾಗಿ ಕೊಲಂಬಿಯಾ ವಿಶ್ವ ವಿದ್ಯಾಲಯ ಸೇರಿದ ಮೆಲ್ವಿನ್ಗೆ ಐ.ಐ.ರಬಿಯ ಮಾರ್ಗದರ್ಶನ ದಕ್ಕಿತು. ಮೆಲ್ವಿನ್ 1958ರಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ವೃತ್ತಿ ಜೀವನ ಆರಂಭಿಸಿದನು. ಜಾಕ್ ಸ್ಟೀನ್ಬರ್ಜರ್, ಟಿ.ಡಿ ಲೀಯವರ ಬೆಂಬಲ ಹಾಗೂ ಮಾರ್ಗದರ್ಶನ ಮೆಲ್ವಿನ್ಗೆ ದಕ್ಕಿದವು. 1966ರಲ್ಲಿ ಸ್ಟ್ಯಾನ್’ಫೋರ್ಡ್’ ವಿಶ್ವವಿದ್ಯಾಲಯಕ್ಕೆ ಹೋದ ಮೆಲ್ವಿನ್ ಇಲ್ಲಿ ಹೊಸದಾಗಿ ನಿರ್ಮಾಣಗೊಂಡಿದ್ದ ಕಣ ವೇಗೋತ್ಕರ್ಷಕಗಳಲ್ಲಿ (Particla Accelerators) ಪ್ರಾರಂಭವಾಗಿದ್ದ ಸಂಶೋಧನೆಗಳಲ್ಲಿ ಭಾಗಿಯಾದನು. ಬಹು ದೀರ್ಘಾವಧಿ ಅಸ್ತಿತ್ವ ಹೊಂದಿರುವ ತಟಸ್ಥ ಕವೊನ್ ಶೈಥಿಲ್ಯದ (Decay) ಅಸಮಾಂಗೀಯತೆಯ ( Nonsymmetry) ಅಧ್ಯಯನ ನಡೆಸಿದನು. ಮೆಲ್ವಿನ್ನಿಂದ ಮುಂದುವರೆದ ಸಂಶೋಧನೆಗಳಿಂದ ಜಲಜನಕ ಹೋಲುವ ಪೈಯಾನ್ ಹಾಗೂ ಮ್ಯೂಯಾನ್ಗಳಿಂದಾದ ಹೊಸ ಬಗೆಯ ಪರಮಾಣುಗಳ ಉತ್ಪನ್ನ ಹಾಗೂ ಶೋಧನೆಗಳು ಸಾಧ್ಯವಾದವು. ಇದಕ್ಕಾಗಿ ಮೆಲ್ವಿನ್ 1988ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. 1970ರ ನಂತರ ಸಂವಹನ ಹಾಗೂ ಗಣಕ ಕ್ರಾಂತಿಯ ಭವಿಷ್ಯವನ್ನು ಮೆಲ್ವಿನ್ ಮನಗಂಡನು. ಈ ಹೊಸ ರಂಗದಲ್ಲಿ ಕ್ರಿಯಾಶೀಲನಾಗಬೇಕೆಂದು ಹಂಬಲಿಸಿ ಡಿಜಿಟಲ್ ಪಾಥ್ವೇ ಇನ್ಕ್ ಕಂಪನಿ ಸೇರಿದನು. ಮುಂದೆ ಇದರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾದನು. 1991ರಲ್ಲಿ ಬ್ರೂಕ್ ಹೇವೆನ್ ನ್ಯಾಷನಲ್ ಲ್ಯಾಬೋರೇಟರಿಯ ಸಹ ನಿರ್ದೇಶಕನಾದನು. ಮೆಲ್ವಿನ್ ಈಗಲೂ ಇದೇ ವೃತ್ತಿಯಲ್ಲಿದ್ದಾನೆ.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಸ್ಟೀನ್’ಬರ್ಜರ್, ಜಾಕ್ (1921--) 1988 Steinberger , Jack
ಅಸಂಸಂ-ಬೈಜಿಕ ಭೌತಶಾಸ್ತ್ರ-ಕಣ ಭೌತಶಾಸ್ತ್ರದಲ್ಲಿ ಶಿಷ್ಟ ಮಾದರಿ ಸಿದ್ಧಾಂತ ಸೃಜಿಸಿದಾತ.
ಸ್ಟೀನ್’ಬರ್ಜರ್, 1934ರಲ್ಲಿ ಅಸಂಸಂಗಳಿಗೆ ವಲಸೆ ಹೋದನು. ಚಿಕಾಗೋದಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಕಿರಣ ಅಧ್ಯಯನ ಪ್ರಯೋಗಾಲಯದಲ್ಲಿ ಕೆಲಸ ಮಾಡಿದನು. ನಂತರ ವಿಶ್ವ ಕಿರಣಗಳಲ್ಲಿನ ಮ್ಯುಯಾನ್ ಕಣಗಳ ಬಗೆಗೆ ಸಂಪ್ರಬಂಧ ಮಂಡಿಸಿ, ಡಾಕ್ಟರೇಟ್ ಗಳಿಸಿದನು. ಮ್ಯುಯಾನ್ ಶೈಥಿಲ್ಯ (Decay) ಹೊಂದಿ, ಒಂದು ಎಲೆಕ್ಟ್ರಾನ್ ಹಾಗೂ ಎರಡು ನ್ಯೂಟ್ರಾನ್ಗಳಿಗೆ ಕಾರಣವಾಗುವುದೆಂದು ತೋರಿಸಿದನು. ಮೆಲ್ವಿನ್ ಷ್ಟಾಟ್ರ್ಸ್, ಎಲ್.ಲೆಡೆರ್ಮನ್ ಜೊತೆಗೆ ಈ ದಿಶೆಯಲ್ಲಿ ಸಂಶೋಧನೆ ಮುಂದುವರೆಸಿದ ಸ್ಟೀಯ್ನ್ಬರ್ಜರ್ ನ್ಯೂಟ್ರಿನೋಗಳಲ್ಲಿ ಎಲೆಕ್ಟ್ರಾನ್ ನ್ಯೂಟ್ರಿನೋ ಹಾಗೂ ಮ್ಯುಯಾನ್ ನ್ಯೂಟ್ರಿನೋಗಳೆಂದು ಎರಡು ಬಗೆಯಲ್ಲಿ ಇರಬೇಕೆಂದು ವಾದ ಮಂಡಿಸಿದನು. 1960ರಲ್ಲಿ ಬ್ರೂಕ್ಹೇವನ್ ನ್ಯಾಷನಲ್ ಲ್ಯಾಬೋರೇಟರಿಯ ಪ್ರಯೋಗಗಳಲ್ಲಿ ಈ ನ್ಯೂಟ್ರಿನೋಗಳು ಪತ್ತೆಯಾದವು. 1968 ರಿಂದ ಜಿನೀವಾದಲ್ಲಿರುವ ಯು.ಎನ್.ಎ. ಪ್ರಯೋಗಾಲಯದಲ್ಲಿ ಸ್ಟೀಯ್ನ್ಬರ್ಜರ್, ನ್ಯೂಟ್ರಿನೋ, ಬೈಜಿಕ ಬಲಗಳ ಅಧ್ಯಯನ ಮುಂದುವರೆಸಿದನು. ಇಲ್ಲಿಯೇ ದ್ರವ್ಯಗಳ ನಿರ್ಮಾಣಕ್ಕೆ ಕಾರಣವಾದ ಶಿಷ್ಟ ಮಾದರಿಯನ್ನು ಮಂಡಿಸಿದನು. ಈ ಮಾದರಿಯಲ್ಲಿ ಕ್ವಾರ್ಕ್ ಹಾಗೂ ಲೆಪ್ಟಾನ್ ದ್ರವ್ಯದ ಮೂಲ ಕಣಗಳು. ಆರು ಬಗೆಯ ಕ್ವಾರ್ಕಗಳಿದ್ದು ಇವುಗಳಲ್ಲಿ ಮೂರಕ್ಕೆ, 2/3 ,1/3 ವಿದ್ಯುದಾವಿಷ್ಟವಿದ್ದರೆ, ಇನ್ನುಳಿದ ಮೂರಕ್ಕೆ –1/3 ಪ್ರೋಟಾನ್ ಆವಿಷ್ಟವಿರುತ್ತದೆ, ಇವುಗಳು ವಿಶಿಷ್ಟ ರಂಜನೆ (Charm) ಹಾಗೂ ಗಿರಕಿಯನ್ನು ಹೊಂದಿರುತ್ತವೆ. ಇವು ಯಾವುವು ಎಲ್ಲೂ ಮುಕ್ತವಾಗಿರದೆ, ಬೀಜದಲ್ಲಿ ಬಂಧಿಸಲ್ಪಟ್ಟಿರುತ್ತವೆ. ಲೆಪ್ಟಾನ್ಗಳು, ಹಗುರುವಾಗಿರುವ ಕಣಗಳಾಗಿದ್ದು ಇವು ಸಹ ಆರು ಬಗೆಯಲ್ಲಿರುತ್ತವೆ. ನ್ಯೂಟ್ರಿನೋಗಳು ದುರ್ಬಲ ಬೈಜಿಕ ಬಲಗಳ ಮೂಲಕ ಅಂತರ್ಕ್ರಿಯೆ ಹೊಂದಿವೆ. ಮ್ಯೂಯಾನ್ ಹಾಗೂ ಟೌ ಕಣಗಳ ಆಯುಷ್ಯ ಅಲ್ಪಾವಾದುದು. ಸ್ಟೀನ್’ಬರ್ಜರ್’ನ ಈ ಮಾದರಿ ಈಗ ಚಾಲ್ತಿಯಲ್ಲಿದೆಯಾದರೂ, ಮುಂದೆ ಇದು ಬದಲಾಗುವುದೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಸ್ಟೀಯ್ನ್ಬರ್ಜರ್ 1988ರಲ್ಲಿ ಲಿಯಾನ್ ಲೆಡರ್ಮನ್ ಹಾಗೂ ಮೆಲ್ವಿನ್ ಷ್ಟಾಟ್ಸ್’ರೊಂದಿಗೆ ನೊಬೆಲ್ ಪ್ರಶಸ್ತಿ ಪಡೆದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಹ್ಯಾನ್ಸ್, ಡೆಹ್ಮೆಲ್ಟ್ (1923--) 1989 Hans , Dehmelt
ಡೆಹ್ಮೆಲ್ಟ್ನ ತಂದೆ ಬರ್ಲಿನ್ ವಿಶ್ವವಿದ್ಯಾಲಯದಿಂದ ಕಾನೂನಿನ ಪದವಿ ಪಡೆದು. ಸೇನೆಯಲ್ಲಿ ಕೆಲಕಾಲ ಅಧಿಕಾರಿಯಾಗಿದ್ದನು. ಮೊದಲನೆ ಜಾಗತಿಕ ಯುದ್ದದಿಂದ ಜರ್ಝರಿತವಾಗಿದ್ದ ಜರ್ಮನಿಯಲ್ಲಿ ಜೀವನ ಬಹು ದುಸ್ತರವಾಗಿದ್ದಿತು. 1933ರಲ್ಲಿ ಹತ್ತನೇ ವರ್ಷದವನಿರುವಾಗ ಡೆಹ್ಮೆಲ್ಟ್ ,ತಾಯಿಯ ಪ್ರಯತ್ನದಿಂದಾಗಿ ಬರ್ಲಿನ್ನ ಅತ್ಯಂತ ಹಳೆಯ ಶಾಲೆಯೆಂದು ಖ್ಯಾತಿ ಹೊಂದಿದ್ದ ಜಿಮ್ನಾಷಿಯಂ ಝಮ್ ಗ್ರಾಯೆನ್ ಕ್ಲಾಸ್ಟರ್ಗೆ ಸೇರಿಸಿದನು. ಜರ್ಮನಿಯನ್ನು ಒಗ್ಗೂಡಿಸಿದ ಅಟ್ಟೋವಾನ್ ಬಿಸ್ಮಾರ್ಕ್ ಸಹ ಇಲ್ಲಿಯೇ ಓದಿದ್ದನು. ಬಿಡುವಿನ ವೇಳೆಯಲ್ಲಿ ವಿಜ್ಞಾನದ ಪುಸ್ತಕಗಳನ್ನೋದಿದ ಡೆಹ್ಮೆಲ್ಟ್ಗೆ ಭೌತಶಾಸ್ತ್ರದಲ್ಲಿ ಅಭಿರುಚಿ ಮೊಳೆಯತೊಡಗಿತು. ಶಾಲೆಯಲ್ಲಿಯೂ ಅತ್ಯುತ್ತಮ ಉಪಾಧ್ಯಾಯರಿದ್ದರು. 1940ರಲ್ಲಿ ಪ್ರೌಢಶಿಕ್ಷಣ ಮುಗಿಸಿ, ಯುದ್ದ ವಿಮಾನ ವಿರೋಧಿ ದಳಕ್ಕೆ ಸೇರಿದನು. ಸ್ಟ್ಯಾಲಿನ್ಗ್ರಾಡ್ಗೆ ಮುತ್ತಿಗೆ ಹಾಕಿದ ಜರ್ಮನಿ ಸೇನೆ ಅಪಾಯಕಾರಿ ಪರಿಸ್ಥಿತಿಗೆ ಸಿಲುಕಿತು. ಇವರನ್ನು ಬಿಡುಗಡೆಗೊಳಿಸಲು ಡೆಹ್ಮೆಲ್ಟ್ ಸೇವೆಯಲ್ಲಿದ್ದ ತುಕಡಿಯನ್ನು ಕಳಿಸಲಾಯಿತು. ಆದರೆ ಕೂದಲೆಯ ಅಂತರದಿಂದ ಈ ತುಕಡಿ, ರಷ್ಯಾ ಸೈನಿಕರಿಂದ ತಪ್ಪಿಸಿಕೊಂಡು ಹಿಂದಕ್ಕೆ ಬಂದಿತು. ಇದಾದ ಅಲ್ಪ ಕಾಲದಲ್ಲೇ 1943ರಲ್ಲಿ ಸೇನೆಯ ತನ್ನ ಕಾರ್ಯಕ್ರಮದಡಿ ಬ್ರೆಸ್ಲೌ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪದವಿ ಗಳಿಸಲು ಡೆಹ್ಮೆಲ್ಟನನ್ನು ಕಳಿಸಿತು. ಪದವಿಯ ಮೊದಲ ಒಂದು ವರ್ಷ ಪೂರ್ಣಗೊಂಡಾಗ, ಸೇನೆಯಿಂದ ಬಂದ ಕರೆಗೆ ಓಗೊಟ್ಟು ಡೆಹ್ಮೆಲ್ಟ್ ಬಲ್ಫ್ ಕದನದಲ್ಲಿ ಭಾಗಿಯಾಗಿ ಸೆರೆಯಾಳಾದನು. ಫ್ರಾನ್ಸ್’ನಲ್ಲಿ, ಯುದ್ದ ಕೈದಿಯಾಗಿ ಸೆರೆಮನೆ ವಾಸ ಅನುಭವಿಸಿ, 1946ರಲ್ಲಿ ಬಿಡುಗಡೆಗೊಂಡನು. ಇದಾದ ನಂತರ, ಬರ್ಲಿನ್ಗೆ ಹಿಂದುರುಗಿ, ರೇಡಿಯೋ ದುರಸ್ತಿಗಾರನಾಗಿ ಜೀವನ ಪ್ರಾರಂಭಿಸಿ, ಗಟ್ಟಿಂಜೆನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪದವಿ ಅಧ್ಯಯನ ಮುಂದುವರಿಸಿದನು. ಇಲ್ಲಿ ಜಗದ್ವಿಖ್ಯಾತ ಭೌತಶಾಸ್ತ್ರಜ್ಞರ ಬೋಧನೆ ಕೇಳುವ ಅವಕಾಶಗಳು ದಕ್ಕಿದವು. ವುಲ್ಪ್ಗ್ಯಾಂಗ್ ಪೌಲ್ನ ಮಾರ್ಗದರ್ಶನದಲ್ಲಿ ಭೌತಶಾಸ್ತ್ರದ ಪ್ರಯೋಗಗಳಲ್ಲಿ ಡೆಹ್ಮೆಲ್ಟ್ ನೈಪುಣ್ಯ ಸಾಧಿಸಿದನು. 1948ರಲ್ಲಿ ಕೊಫ್ ಫರ್ಮನ್ಸ್ ಸಂಸ್ಥೆಯಲ್ಲಿ ಪೀಟರ್ ಬ್ರಿಕ್ಸ್ನ ಕೈಕೆಳಗೆ ದ್ರವ್ಯ ರೋಹಿತಶಾಸ್ತ್ರದಲ್ಲಿ (Mass Spectroscopy) ಸಂಶೋಧನೆ ಮಾಡಿ ಸ್ನಾತಕೋತ್ತರ ಪದವಿ ಪಡೆದನು. ಇದಾದ ನಂತರ ಹರ್ಬರ್ಟ್ ಕ್ರುಗೆರ್ ಮಾರ್ಗದರ್ಶನದಲ್ಲಿ ಬೈಜಿಕ ಕಾಂತೀಯ ಅನುರಣನ (Nuclear Magnetic Resonance)ಕುರಿತಾಗಿ ಸಂಪ್ರಂಬಂಧ ಮಂಡಿಸಿ ಡಾಕ್ಟರೇಟ್ ಗಳಿಸಿದನು. 1949ರಲ್ಲಿ ಡೆಹ್ಮೆಲ್ಟ್ ಹಾಗೂ ಸಂಗಡಿಗರು ಬೈಜಿಕ ಚತುರ್ಧೃವ ಅನುರಣನ (Nuclear Quadrapole Resonance) ವಿದ್ಯಾಮಾನವನ್ನು ಆವಿಷ್ಕರಿಸಿದರು. ಈ ಸಾಧನೆಯಿಂದಾಗಿ ಡ್ಯೂಕ್ ವಿಶ್ವವಿದ್ಯಾಲಯದ ಸೂಕ್ಷ್ಮ ತರಂಗ ಪ್ರಯೋಗಾಲಯ ಸೇರಿದ ಡೆಹ್ಮೆಲ್ಟ್ ಜೇಮ್ಸ್ಫ್ರಾಂಕ್, ಫ್ರಿಟ್ಸ್,, ಲಂಡನ್ ಹಾಗೂ ಲೋಥರ್ ನಾರ್ಡ್ಹೀಮ್ರೊಂದಿಗೆ ಸಂಶೋಧನೆಯಲ್ಲಿ ನಿರತನಾದನು. ಡೆಹ್ಮೆಲ್ಟ್ 1955ರಲ್ಲಿ ಬ್ರಿಟೀಷ್ ಕೊಲಂಬೋ ವಿಶ್ವವಿದ್ಯಾಲಯದ ಜಾರ್ಜ್ ವೋಲ್ಕೋಪ್ಶ್ ಪ್ರಯೋಗಾಲಯದಲ್ಲಿ ಸ್ವತಂತ್ರವಾಗಿ ಎಲೆಕ್ಟ್ರಾನ್ ಸಂಘಟ್ಟನೆಯ ಸಾಧನ ನಿರ್ಮಿಸಿದನು. 1959ರಲ್ಲಿ ಜೇಕ್ ಜಾನ್ಸನ್ ನೆರವಿನೊಂದಿಗೆ ಮೊದಲ ಬಾರಿಗೆ ಅಧಿಕ ನಿರ್ವಾತದ ಕಾಂತೀಯ ಸೆರೆ ಸಾಧನ (Trap Device) ನಿರ್ಮಿಸಿದ ಡೆಹ್ಮೆಲ್ಟ್, ಅದರಲ್ಲಿ ಹತ್ತು ಸೆಕೆಂಡ್ಗಳಿಗೂ ಅಧಿಕ ಕಾಲ ಎಲೆಕ್ಟ್ರಾನ್ನ್ನು ಸೆರೆಹಿಡಿದು, ಅದರ ಅನುರಣಗಳನ್ನು ಅಳೆಯುವಲ್ಲಿ ಯಶಸ್ವಿಯಾದನು. 1966ರಲ್ಲಿ ಫಾರ್ಟ್ಸನ್ ಹಾಗೂ ಮೇಜರ್ರೊಂದಿಗೆ ಡೆಹ್ಮೆಲ್ಟ್ ಹೀಗೆ ಸೆರೆಹಿಡಿಯಲ್ಪಟ್ಟ ಅಯಾನ್ಗಳನ್ನು ಬಳಸಿ ಲೇಸರ್ ಪಡೆಯುವ ವಿಧಾನ ಸೂಚಿಸಿದನು. 1989ರಲ್ಲಿ ಎಲೆಕ್ಟ್ರಾನ್ ತ್ರಿಜ್ಯವನ್ನು ನಿಖರವಾಗಿ ನಿರ್ಧರಿಸುವ ಮಾರ್ಗ ಹಾಗೂ ಪ್ರಯೋಗ ವಿಧಾನಗಳನ್ನು ಡೆಹ್ಮೆಲ್ಟ್ ವಿವರಿಸಿದನು. ಪ್ರಯೋಗಶೀಲ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ಡೆಹ್ಮೆಲ್ಟ್ , ವೂಲ್ವ್ಗ್ಯಾಂಗ್ ಪೌಲಿ ಹಾಗೂ ನಾರ್ಮನ್ ರ್ಯಾಮ್ಸೆಯೊಂದಿಗೆ 1989ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ನಾರ್ಮನ್, ಎಫ್. ರಾಮ್ಸೆ (1915--) 1989 Norman , F.Ramsay
ಸ್ಕಾಟ್ಲೆಂಡ್ ಮೂಲದ ತಂದೆ, ಜರ್ಮನ್ ಮೂಲದ ತಾಯಿಯ ಮಗನಾದ ನಾರ್ಮನ್ 27 ಆಗಸ್ಟ್ 1915 ರಂದು ಜನಿಸಿದನು. ರ್ಯಾಮ್ಸೆಯ ತಂದೆ ಸೇನೆಯಲ್ಲಿದ್ದು, ಆಗಾಗ್ಗೆ ವರ್ಗಾವಣೆಗೊಳ್ಳುತ್ತಿದ್ದುದರಿಂದ, ಇವರ ಕುಟುಂಬ ವಾಷಿಂಗ್ಟನ್, ಟೊಪೆಕಾ, ಕ್ಯಾನ್ಸಾಸ್, ಪ್ಯಾರಿಸ್, ಡೊವೆರ್ಗಳಲ್ಲಿ ನೆಲೆಸಿದ್ದಿತು. ಇದರಿಂದಾಗಿ ರ್ಯಾಮ್ಸೆಯ ವಿದ್ಯಾಭ್ಯಾಸ ಹಲವಾರು ಊರುಗಳಲ್ಲಿ ಜರುಗಿತು. 15 ನೇ ವಯಸ್ಸಿಗೆ ರ್ಯಾಮ್ಸೆ ಪ್ರೌಢಶಿಕ್ಷಣ ಮುಗಿಸಿದನು. ಈ ಆವಧಿಯಲ್ಲಿ ಕ್ವಾಂಟಂ ಬಲ ವಿಜ್ಞಾನ ಕುರಿತಾದ ಲೇಖನ ಓದಿದ ರ್ಯಾಮ್ಸೆ ತಾನೂ ಒಬ್ಬ ಭೌತಶಾಸ್ತ್ರಜ್ಞನಾಗ ಬಯಸಿದನು. ಆದರೆ ಮಗ ಪದವಿ ಮುಗಿಸಿ, ಸೇನೆಗೆ ಸೇರಬೇಕೆಂದು ರ್ಯಾಮ್ಸೆಯ ತಂದೆ ತಾಯಿಯರ ಅಶೆಯಾಗಿದ್ದಿತು. 1931ರಲ್ಲಿ ಕೊಲಂಬಿಯಾದಲ್ಲಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೇರಿದನು. ಆದರೆ ಪ್ರಕೃತಿಯ ರಹಸ್ಯಗಳನ್ನು ಆಳವಾಗಿ ಅರಿಯಬೇಕೆಂದು ರ್ಯಾಮ್ಸೆಯ ಆಕಾಂಕ್ಷೆ ಆತ ಇಂಜಿನಿಯರಿಂಗ್ ತೊರೆದು ಗಣಿತವನ್ನು ಆರಿಸಿ ಕೊಳ್ಳುವಂತೆ ಮಾಡಿತು. 1935 ರಲ್ಲಿ ಪದವಿ ಮುಗಿಸಿದ ರ್ಯಾಮ್ಸೆ ಭೌತಶಾಸ್ತ್ರದಲ್ಲಿ ವೃತ್ತಿ ಜೀವನ ಮುಂದುವರಿಸಲು ಯತ್ನಿಸಿದನು. ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಕೆಲ್ಲೆಟ್ ಫೆಲೋಷಿಫ್ಗಳಿಸಿದ ರ್ಯಾಮ್ಸೆ ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪದವಿಗೆ ನೊಂದಾಯಿಸಿಕೊಂಡನು. ಆ ಕಾಲದಲ್ಲಿ ಈ ವಿಶ್ವವಿದ್ಯಾಲಯದ ಕ್ಯಾವೆಂಡಿಷ್ ಪ್ರಯೋಗಾಲಯ ಜೆ.ಜೆ.ಥಾಮ್ಸನ್, ರುದರ್ಫೋರ್ಡ್, ಚಾಡ್ವಿಕ್, ಕಾಕ್ರಾಪ್ಟ್, ಎಡಿಂಗ್ಟನ್, ಆ್ಯಪಲ್ಟನ್ , ಬಾರ್ನ್, ಫೌಲರ್,ಬುಲ್ಲಾರ್ಡ್, ಮೌರಿಸ್, ಗೋಲ್ಡಹೇಬರ್, ಹಾಗೂ ಡಿರಾಕ್ರನ್ನೊಳಗೊಂಡ ಜಗತ್ಪ್ರಸಿದ್ದವಾದ ಭೌತಶಾಸ್ತ್ರದ ಗಣಿಯೆನಿಸಿದ್ದಿತು. ರ್ಯಾಮ್ಸೆ ಮೌರಿಸ್, ಗೋಲ್ಡ್ ಹೇಬರ್ ಕೈಕೆಳಗೆ ಅಣ್ವಯಿಕ ದೂಲಗಳನ್ನು ಕುರಿತಾಗಿ ಲೇಖನ ಪ್ರಕಟಿಸಿ ಎರಡನೇ ಪದವಿ ಗಳಿಸಿದನು. ಇದಾದ ನಂತರ ಕೊಲಂಬಿಯಾಗೆ ಮರಳಿ, ರಬಿಯ ಮಾರ್ಗದರ್ಶನದಲ್ಲಿ ಡಾಕ್ಟರೇಟ್ಗೆ ನೊಂದಾಯಿಸಿಕೊಂಡನು. ಇದಾದ ಅಲ್ಪ ಕಾಲದಲ್ಲೇ ರಬಿ ಅಣ್ವಯಿಕ ದೂಲ ಕಾಂತೀಯ ಅನುರಣನ ವಿಧಾನವನ್ನು ರೂಪಿಸಿ, ಕಣ ಭೌತಶಾಸ್ತ್ರದಲ್ಲಿನ ಅಧ್ಯಯನಗಳಿಗೆ ಹೊಸ ಸಾಧ್ಯತೆಗಳನ್ನು ತೆರೆದಿದ್ದನು. ಕಾಂತೀಯ ಅನುರಣನ ವಿಧಾನದಲ್ಲಿ ಕಾರ್ಯ ಪ್ರಾರಂಭಿಸಿದ ಬೆರಳೆಣಿಕೆಯ ಜನರಾದ ರಬಿ, ಜಕಾರಿಯಾಸ್, ಕೆಲ್ಲೋಗ್ ಮಿಲನ್ ಹಾಗೂ ಕುಷರ್ ಗುಂಪಿಗೆ ರ್ಯಾಮ್ಸೆ ಸೇರ್ಪಡೆಯಾದನು. ಈ ತಂಡ ಡ್ಯುಟೆರಾನ್ನ ಚತುರ್ ಧೃವ ಅನುರಣನೆ (Nuclear Quadrapole Resonance) ಆವಿಷ್ಕಾರ ಮಾಡಿತು. ರಬಿಯ ಕೆಳಗಿನ ಸಂಶೋಧನೆಯಿಂದ ಡಾಕ್ಟರೇಟ್ ಗಳಿಸಿದ ರ್ಯಾಮ್ಸೆ ವಾಷಿಂಗ್ಟನ್ ಡಿ.ಸಿಗೆ ಹೋಗಿ, ಅಲ್ಲಿ ಕಾರ್ನೆಗಿ ಸಂಸ್ಥೆಯ ಫೆಲೋ ಆದನು. ಈ ಸಂಸ್ಥೆಯಲ್ಲಿ ನ್ಯೂಟ್ರಾನ್ ಪ್ರೋಟಾನ್, ಪ್ರೋಟಾನ್ ಹೀಲಿಯಂ ಚದುರಿಕೆಯನ್ನು ಕುರಿತಾಗಿ ಅಧ್ಯಯನ ನಡೆಸಿದನು. 1940ರಲ್ಲಿ ವಿವಾಹವಾದ ರ್ಯಾಮ್ಸೆ ಮುಂದಿನ ವೃತ್ತಿ ಜೀವನವನ್ನು ಇಲಿನಾಯ್ ವಿಶ್ವವಿದ್ಯಾಲಯದಲ್ಲಿ ಕಳೆಯಲು ನಿರ್ಧರಿಸಿ, ಅಲ್ಲಿನ ಸಿಬ್ಬಂದಿಯಾದನು. ಆದರೆ ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ, ರ್ಯಾಮ್ಸೆ ಎಂಐಟಿಯ ವಿಕಿರಣ ಪ್ರಯೋಗಾಲಯಕ್ಕೆ ಸೇರಬೇಕಾದ ಅನಿವಾರ್ಯತೆ ಬಂದೊದಗಿತು. ಮುಂದೆ ಎರಡು ವರ್ಷಗಳ ಕಾಲ 3 ಸೆಂಮೀ ತರಂಗಾಂತರ (Wave Length) ರಡಾರ್ ಅಭಿವೃದ್ದಿಗೆ ಶ್ರಮಿಸಿದನು ನಂತರ ಅಸಂಸಂ ಯುದ್ದ ಕಾರ್ಯದರ್ಶಿಗೆ ರಡಾರ್ ಸಲಹೆಗಾರನಾಗಿ ನೇಮಕಗೊಂಡನು. 1943ರಲ್ಲಿ ನ್ಯೂ ಮೆಕ್ಸಿಕೋದ ಲಾಸ್ ಅಲ್ಮೋಸ್ನಲ್ಲಿ ಪರಮಾಣು ಅಸ್ತ್ರ ತಯಾರಿಕೆಯ ಮ್ಯಾನ್ಹಟನ್ ಯೋಜನೆಗೆ ನಿಯೋಜಿತನಾದನು. ಯುದ್ದದ ನಂತರ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. ರ್ಯಾಮ್ಸೆ, ರಬಿಯೊಂದಿಗೆ, ಯುದ್ದಕಾಲದಲ್ಲಿ ನಿಲ್ಲಿಸಿದ್ದ, ಅಣ್ವಯಿಕ ದೂಲ (Atomic Beam) ಪ್ರಯೋಗಾಲಯವನ್ನು ಪುನರುಜ್ಜೀವನಗೊಳಿಸಿದನು. ಲಾಂಗ್ ದ್ವೀಪದ, ಬ್ರೂಕ್ ಹ್ಯಾವೆನ್ ನ್ಯಾಷನಲ್ ಲ್ಯಾಬೋರೇಟರಿಯನ್ನು ಸ್ಥಾಪಿಸುವಲ್ಲಿ ರ್ಯಾಮ್ಸೆ ಪ್ರಮುಖ ಪಾತ್ರ ವಹಿಸಿ 1946 ರಲ್ಲಿ ಅಲ್ಲಿ ಭೌತಶಾಸ್ತ್ರದ ವಿಭಾಗದ ಮೊದಲ ಮುಖ್ಯಸ್ಥನಾದನು. 1947ರಲ್ಲಿ ಹಾವರ್ಡ್ ವಿಶ್ವವಿದ್ಯಾಲಯಕ್ಕೆ ಹೋದ ರ್ಯಾಮ್ಸೆ, ಮುಂದಿನ ನಲವತ್ತು ವರ್ಷಗಳ ಕಾಲ ಅಲ್ಲಿಯೇ ಸೇವೆ ಸಲ್ಲಿಸಿದನು. ಜಲಜನಕ ದ್ವ-ಪರಮಾಣುಗಳ (Diatoms) ಮೇಲೆ ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಿದ ರ್ಯಾಮ್ಸೆ ಹಾಗೂ ಆತನ ವಿದ್ಯಾರ್ಥಿಗಳು ಸಿದ್ಧಾಂತ ಹಾಗೂ ವೀಕ್ಷಿತ ಪ್ರಯೋಗ ಫಲಿತಾಂಶಗಳನ್ನು ತಾಳೆ ನೋಡಿದರು. ರ್ಯಾಮ್ಸೆ ಹಾಗೂ ಡೇನಿಯಲ್ ಕ್ಲೆಪ್ನರ್ ಪರಮಾಣ್ವಿಕ ಜಲಜನಕ ಮೇಸರ್ ಉತ್ಪಾದಿಸಿ, ಜಲಜನಕ ಡ್ಯುಟೇರಿಯಂ ಮತ್ತು ಟೈಟ್ರಿಯಂನ ಸೂಕ್ಷ್ಮಾತಿಸೂಕ್ಷ್ಮ ಪ್ರತ್ಯೇಕತೆಗಳನ್ನು ನಿರ್ಧರಿಸಿದರು. ರ್ಯಾಮ್ಸೆ ಹಾರ್ವರ್ಡ್ ವಿಶ್ವವಿದ್ಯಾಲಯದ ಸೈಕ್ಲೋಟ್ರಾನ್ ನಿರ್ಮಾಣ ಹಾಗೂ ಆರಂಭಿಕ ನಿರ್ಮಹಣೆಯನ್ನು ವಹಿಸಿಕೊಂಡಿದ್ದನು. 1986ರಲ್ಲಿ ಹಾರ್ವರ್ಡ್ನಿಂದ ನಿವೃತ್ತನಾದನು. 1989ರಲ್ಲಿ ರ್ಯಾಮ್ಸೆ, ಹ್ಯಾನ್ಸ್ ಡೆಹ್ಲ್ಮೆಲ್ಟ್ ಮತ್ತು ವೂಲ್ಫ್’ಗ್ಯಾಂಗ್ ಪೌಲಿಯವರೊಂದಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತನಾದರು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ವೂಲ್ಫ್’ಗ್ಯಾಂಗ್ , ಪೌಲಿ 1989 Wolfgang , Pauli
ಪೌಲ್ 10 ಆಗಸ್ಟ್ 1913ರಂದು ಲೊರೆಂಜ್ಕಿರ್ಕ್ ಎಂಬ ಸಣ್ಣ ಹಳ್ಳೀಯಲ್ಲಿ ಜನಿಸಿದನು. ಈತನ ತಂದೆ ಮುಂಖೇನ್ನಲ್ಲಿ ಔಷಧಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕನಾಗಿದ್ದನು. ಈತ ನೊಬ್ಲೆ ಪ್ರಶಸ್ತಿ ವಿಜೇತ ವಿಲ್ಹೆಲ್ಮ್ ಓಸ್ಟ್ವಾಲ್ಡ್ನ ಶಿಷ್ಯನಾಗಿದ್ದನು. ಇದರಿಂದ ತಂದೆಯ ಮೂಲಕ ಪೌಲ್ಗೆ ವಿಜ್ಞಾನಿಗಳೆಂದರೆ ಗೌರವ ಅಭಿಮಾನಗಳು ತುಂಬಿದ್ದವು. ಪೌಲ್ನ ತಂದೆಯ ಸಹಪಾಠಿಯಾಗಿದ್ದ ಅರ್ನಾಲ್ಡ್ ಝೊಮರ್ಫೆಲ್ಟ್ ನಿಖರ ಅಳತೆಯ ತಂತ್ರಗಳತ್ತ ಗಮನ ಹರಿಸಬೇಕೆಂದು ಸೂಚಿಸಿದನು. ಪೌಲ್ ವಿದ್ಯಾರ್ಥಿ ಜೀವನದುದ್ದಕ್ಕೂ ಮಹಾನ್ ವಿಜ್ಞಾನಿಗಳ, ಚಿಂತಕರ ಪ್ರಭಾವಕ್ಕೊಳಗಾದನು. ಪದವಿ ಗಳಿ¸ದ ನಂತರ ಪೌಲ್ ಕೀಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. ಬೆರಿಲಿಯಂನ ಬೈಜಿಕ ಭ್ರಾಮ್ಯತೆಯನ್ನು ನಿಖರವಾಗಿ ಅಳೆದು ಪೌಲ್ ಡಾಕ್ಟರೇಟ್ ಗಳಿಸಿದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿನ ನಿರ್ಬಂಧಗಳಿಂದಾಗಿ ಕೆಲ ಕಾಲ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಕಿರಣಗಲ ಪಾತ್ರದ ಅಧ್ಯಯನ ನದೆಸಿದನು. ಪೌಲ್ ಡ್ಯುಟೆರಾನ್ನ ವೈದ್ಯುತ್ ಶ್ಶೆಥಿಲ್ಯ ಹಾಗೂ ಲ್ಯಾಂಬ್ ಪಲ್ಲಟವನ್ನು ಅಳೆದನು. 1952ರಲ್ಲಿ ಬಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಭೌತಶಾಸ್ತ್ರ ಸಂಸ್ಥೆಯ ನಿರ್ದೇಶಕನಾಗಿ ಪೌಲ್ ನೇಮಕಗೊಂಡನು. ದ್ರವ್ಯರೋಹಿತಮಾಪಕ ನಿರ್ಮಾಣದಲ್ಲಿ ಪೌಲ್ ವಹಿಸಿದ ಪಾತ್ರ ಗಮನಾರ್ಹವಾದುದು. ಇದಕ್ಕಾಗಿ ಪೌಲ್ 1989ರಲ್ಲಿನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಈಗ ಪೌಲ್ ನ್ಯೂಟ್ರಾನ್ ಭೌತಶಾಸ್ತ್ರದಲ್ಲಿ ಅದರಲ್ಲೂ ವಿಶೇಷವಾಗಿ ನ್ಯೂಟ್ರಾನ್ಗಳ ಸಂಗ್ರಹಣೆಗಾಗಿ ಕಾಂತತ್ವ ಉಂಗುರ ವಿಧಾನಗಳನ್ನು ಸುಧಾರಿಸುವತ್ತ ಗಮನ ಹರಿಸಿದ್ದನೆ.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಹೆನ್ರಿ , ಕೆಂಡಾಲ್ –(1926-1999) 1990 Henry Kendall
ಅಸಂಸಂ-ಭೌತಶಾಸ್ತ್ರ- ಎಲೆಕ್ಟ್ರಾನ್ಗಳ ಸ್ಥಿತಿಸ್ಥಾಪನಾಹೀನ ಚದುರಿಕೆಯ ಸಂಶೋಧನೆ ನಡೆಸಿದಾತ.
9 ಡಿಸೆಂಬರ್ 1926ರಂದು ಮೆಸಾಚುಸೆಟ್ಸ್ ರಾಜ್ಯದ ಬೋಸ್ಟನ್ನಲ್ಲಿ ಕೆಂಡಾಲ್ ಜನನವಾಯಿತು. ಬಾಲ್ಯದಲ್ಲಿ ಓದುವ ಹಾಗೂ ಸ್ಪಷ್ಟ ಉಚ್ಛಾರದ ತೊಂದರೆಯಿಂದ ಕೆಂಡಾಲ್ ಬಳಲಿದನು. ಪದವಿಪೂರ್ವ ಶಿಕ್ಷಣದವರೆಗೆ, ವಿದ್ಯಾಭ್ಯಾಸದಲ್ಲಿ ಕೆಂಡಾಲ್ ಸಾಧನೆ ಸರಾಸರಿಗಿಂತ ಕೆಳಮಟ್ಟದ್ದು ಹಾಗೂ ಅಸಮರ್ಪಕವಾಗಿದ್ದಿತು. ಆದರೆ ಯಾಂತ್ರಿಕ, ವೈದ್ಯುತ್ ಸಂಬಂಧಿ ವಿಷಯಗಳಲ್ಲಿ ಕೆಂಡಾಲ್ಗೆ ಅಪರಿಮಿತ ಕುತೂಹಲವಿದ್ದಿತು. 1945ರಲ್ಲಿ ಜಪಾನಿನ ಮೇಲೆ ಬೈಜಿಕಾಸ್ತ್ರ (Nuclear Weapon) ಪ್ರಯೋಗವಾದಾಗ ಕೆಂಡಾಲ್ ಯುಎಸ್ ಮಾರ್ಚೆಂಟ್ ಮೆರೈನ್ ಅಕಾಡೆಮಿಯಲ್ಲಿದ್ದನು. ಬೈಜಿಕಾಸ್ತ್ರದ ಪ್ರಯೋಗ ನಿಸರ್ಗದ ಒಂದು ರಹಸ್ಯವನ್ನು ಬೇಧಿಸಿತೆಂದೇ ಕೆಂಡಾಲ್ ಭಾವಿಸಿದ್ದನು. ಆದರೆ ನಂತರ ಅದರ ಪರಿಣಾಮದಿಂದಾಗಿ ಅಪಾರ ಪ್ರಾಣ ಹಾನಿಯ ವಿವರ ತಿಳಿದು ಮರುಗಿದನು. 1950ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಭೌತಸಾಸ್ತ್ರದ ಪದವಿಗೆ ಸೇರಿದನು. ಇಲ್ಲಿಂದ ಡಾಕ್ಟರೇಟ್ ಗಳಿಸಿ ಸ್ಟ್ಯಾನ್’ಫೋರ್ಡ್’ ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ನ್ಯೂಟ್ರಾನ್, ಪ್ರೋಟಾನ್ ರಾಚನಿಕ ಸ್ವರೂಪ ಕುರಿತಾಗಿ ಸಂಶೋಧನೆ ನಡೆಸುತ್ತಿದ್ದ, ಮುಂದೆ ಇದಕ್ಕಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದ ಹಾಫ್ಸ್ಟ್ಯಾಡ್ಟರ್ನ ಮಾರ್ಗದರ್ಶನ ದಕ್ಕಿತು. ಇದೇ ಸಮಯದಲ್ಲಿ ಸ್ಟ್ಯಾನ್’ಫೋರ್ಡ್’ ಸರೇಖೀಯ ವೇಗೋತ್ಕರ್ಷಕ (Linear Accelerator) ನಿರ್ಮಾಣಗೊಂಡಿತು. ಕೆಂಡಾಲ್ ಇಲ್ಲಿ ರಿಚರ್ಡ್ ಟೇಲರ್, ಜೆರೋಮ್ ಫ್ರೀಡ್’ಮನ್ರೊಂದಿಗೆ ಸಂಶೋಧನೆ ನಡೆಸಿದನು. 1970ರಲ್ಲಿ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೇರಿದ ಕೆಂಡಾಲ್ ಕ್ವಾಂಟಂ ವೈದ್ಯುತ್ಗತಿಶಾಸ್ತ್ರ (Quantum Electrodynamics), ಎಲೆಕ್ಟ್ರಾನ್ ಗುಣಗಳಲ್ಲಿ ಸಾಮ್ಯತೆ ಭಂಗ (Non Parity) ಕುರಿತಾದ ಪ್ರಯೋಗಗಳಲ್ಲಿ ನಿರತನಾದನು. 1960ರ ನಂತರ ಬೈಜಿಕಾಸ್ತ್ರ ಅಭಿವೃದ್ಧಿಯಲ್ಲಿ ಸೇನೆಗೆ ಸೇವೆ ಸಲ್ಲಿಸಿದನು. ಇದರಿಂದ ತಂತ್ರಜ್ಞಾನ ಪ್ರೇರಿತ ಅಸ್ತ್ರಗಳ ವಿರಾಟ್ ವಿನಾಶಶಕ್ತಿಯನ್ನು ಮನಗಂಡನು. 1969ರಲ್ಲಿ ಇಂತಹ ಅಸ್ತ್ರಗಳಿಗೆ ಮಿತಿ ಹೇರಬೇಕೆಂದು ಒತ್ತಾಯಿಸುವ ಯೂನಿಯನ್ ಆಫ್ ಕನ್ಸನ್ರ್ಡ್ ಸೈಂಟಿಸ್ಟ್ ಎಂಬ ಸಂಘ ಸ್ಥಾಪಿಸಿದನು. ಜೆರೋಮ್ ಐಸಾಕ್ ಫ್ರೀಡ್’ಮನ್ ಮತ್ತು ರಿಚರ್ಡ್.ಇ.ಟೇಲರ್ ಸಾಂಗತ್ಯದಲ್ಲಿ ಕೆಂಡಾಲ್ ನಡೆಸಿದ ಪ್ರಯೋಗಗಳಿಂದ ಪ್ರೋಟಾನ್ ಹಾಗೂ ಬದ್ಧ ನ್ಯೂಟ್ರಾನ್ಗಳ ಮೇಲೆ ಜರುಗುವ ಎಲೆಕ್ಟ್ರಾನ್ಗಳ ಸ್ಥಿತಿಸ್ಥಾಪನಾಹೀನ ಚದುರಿಕೆಯ ಸ್ವರೂಪ ಸ್ಪಷ್ಟಗೊಂಡಿತು. ಇದು ಕಣ ಭೌತಶಾಸ್ತ್ರದಲ್ಲಿ ಕ್ವಾರ್ಕ್ ಮಾದರಿ ಸಿದ್ಧಾಂತ ರೂಪಿಸಲು ನೆರವಾಯಿತು. ಈ ಸಾಧನೆಗಾಗಿ ಕೆಂಡಾಲ್ 1990ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಕೆಂಡಾಲ್ ಪರ್ವಾತಾರೋಹಿಯೆಂದು ಅತ್ಯುತ್ತಮ ಪರ್ವತಾ ಛಾಯಾಗ್ರಾಹಕನೆಂದೂ ಹೆಸರುವಾಸಿಯಾಗಿದ್ದಾನೆ. 15 ಫೆಬ್ರವರಿ1999ರಂದು ಫ್ಲೋರಿಡಾದ ವಾಕುಲ್ಲ ಸ್ಪ್ರಿಂಗ್ಸ್ ಸ್ಟೇಟ್ ಪಾರ್ಕ್ನಲ್ಲಿ ನೀರಿನಾಳದ ಗುಹೆಗಳ ಛಾಯಾಗ್ರಹಣ ಮಾಡುತ್ತಿದ್ದಾಗ ಕೆಂಡಾಲ್ ಸಾವನ್ನಪ್ಪಿದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಅಸಂಸಂ-ಭೌತಶಾಸ್ತ್ರ-ಮ್ಯೂಯಾನ್ ಶೈಥಿಲ್ಯದಲ್ಲಿನ (Decay)ಸಾಮ್ಯತೆ (Parity) ಭಂಗವನ್ನು ಪತ್ತೆ ಹಚ್ಚಿದಾತ.
ಜೆರೋಮ್ನ ತಂದೆ, ಲಿಲಿಯನ್ ಫ್ರೀಡ್’’ಮನ್ 1913ರಲ್ಲಿ ರಷ್ಯಾದಿಂದ ಅಸಂಸಂಗಳಿಗೆ ವಲಸೆ ಬಂದು, ನೆಲೆಸಿದ್ದನು. ಮೊದಲನೆ ಜಾಗತಿಕ ಯುದ್ದದಲ್ಲಿ ಅಮೆರಿಕಾದ ಫಿರಂಗಿ ದಳದಲ್ಲಿ ಸೇವೆ ಸಲ್ಲಿಸಿದ್ದನು. 28 ಮಾರ್ಚ್ 1930 ರಂದು ಚಿಕಾಗೋದಲ್ಲಿ ಜೆರೋಮ್ನ ಜನನವಾಯಿತು. ಜೆರೋಮ್ ತಂದೆ, ತಾಯಿಗಳಿಗೆ ಹೆಚ್ಚಿನ ಔಪಚಾರಿಕ ಶಿಕ್ಷಣವಿರಲಿಲ್ಲವಾದರೂ ಸ್ವಯಂ ಸಾಮಥ್ರ್ಯದಿಂದ, ರಾಜಕೀಯ , ವಿಜ್ಞಾನಗಳಲ್ಲಿ ಆಸಕ್ತಿ ಗಳಿಸಿದ್ದರಲ್ಲದೆ, ಅತ್ಯುತ್ತಮ ಗ್ರಂಥ ಭಂಡಾರವನ್ನು ಸಹ ಹೊಂದಿದ್ದರು. ತಮ್ಮ ಮಕ್ಕಳು ಉತ್ತಮ ವಿದ್ಯೆ ಪಡೆಯಬೇಕೆಂದು ಹಂಬಲಿಸಿ ಅದಕ್ಕಾಗಿ ಅಪಾರ ಪರಿಶ್ರಮ ಪಟ್ಟರು. ಜೆರೋಮ್ ಪ್ರೌಢಶಾಲೆಯಲ್ಲಿರುವಾಗ ಐನ್ಸ್ಟೀನ್ರ ಸಾಪೇಕ್ಷ ಸಿದ್ಧಾಂತ ಕುರಿತಾದ ಸಣ್ಣದಾದ ಪುಸ್ತಕವನ್ನು ಓದಿ, ಭೌತಶಾಸ್ತ್ರದಲ್ಲಿ ಆಸಕ್ತಿ ತಳೆದನು. ಭೌತಶಾಸ್ತ್ರದ ಪದವಿಗಾಗಿ ಜೆರೋಮ್ ಚಿಕಾಗೋ ವಿಶ್ವವಿದ್ಯಾಲಯ ಸೇರಿದನು. ಇಲ್ಲಿ ಎರ್ನಿಕೊಫರ್ಮಿ ಬೋಧಕನಾಗಿದ್ದನು. 1950ರಲ್ಲಿ ಭೌತಶಾಸ್ತ್ರದ ಪದವಿ 1953ರಲ್ಲಿ ಸ್ನಾತಕೋತ್ತರ ಪದವಿ ಹಾಗೂ 1956ರಲ್ಲಿ ಡಾಕ್ಟರೇಟ್ ಗಳಿಸಿದ ಜೆರೋಮ್ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಎರ್ನಿಕೊ ಫರ್ಮಿಯ ನೇತೃತ್ವದಲ್ಲಿ ಜರುಗುತ್ತಿದ್ದ ಭೌತಶಾಸ್ತ್ರದ ಚಟುವಟಿಕೆಗಳನ್ನು ಕಂಡು ಪುಳಕಿತನಾದನು. ಜೆರೋಮ್ ಎರ್ನಿಕೋಫರ್ಮಿಯ ಮಾರ್ಗದರ್ಶನದಲ್ಲಿ ಪ್ರೋಟಾನ್ ಧೃವೀಕರಣ ಅಧ್ಯಯನ ಪ್ರರಂಭಿಸಿದನು. ಆದರೆ 1954ರಲ್ಲಿ ಫರ್ಮಿ ಮೃತನಾದ ನಂತರ ಜಾನ್ ಮಾರ್ಷಲ್ನ ಕೈ ಕೆಳಗೆ ಸೇರಿದನು. ಡಾಕ್ಟರೇಟ್ ಗಳಿಸಿದ ನಂತರ ಜೆರೋಮ್ ಚಿಕಾಗೋ “ವಿಶ್ವವಿದ್ಯಾಲಯದ ಬೈಜಿಕ ಉತ್ಸರ್ಜನೆ (Nuclear Emmission) ಪ್ರಯೋಗಾಲಯದಲ್ಲಿ ವ್ಯಾಲ್ ಟೆಲೆಗ್ಡ್ಯೊಂದಿಗೆ ಮ್ಯೂಯಾನ್ ಶೈಥಿಲ್ಯದಲ್ಲಿನ ಸಾಮ್ಯತೆ ಭಂಗವನ್ನು ಪತ್ತೆ ಹಚ್ಚಿದನು. ಇದನ್ನು ಈ ಮೊದಲೇ ಟಿ.ಡಿ. ಲೀ ಹಾಗೂ ಸಿ.ಎನ್ ಯಾಂಗ್ ಸೂಚಿಸಿದ್ದನಾದರೂ, ಪ್ರಯೋಗಗಳಿಂದ ಇದನ್ನು ವೀಕ್ಷಿಸಿದ ಮೊದಲಿಗರೆಂಬ ಕೀರ್ತಿ ಜೆರೋಮ್ ಹಾಗೂ ವ್ಯಾಟ್ ಟೆಲೆಗ್ಡ್ಗೆ ದಕ್ಕಿತು. 1957ರಲ್ಲಿ ಜೆರೋಮ್ ಸ್ಟ್ಯಾನ್’ಫೋರ್ಡ್’, ವಿಶ್ವವಿದ್ಯಾಲಯದ ಹೈ ಎನರ್ಜಿ ಫಿಸಿಕ್ಸ್ ಲ್ಯಾಬ್ನಲ್ಲಿ ಸಂಶೋಧನೆ ನಡೆಸುತ್ತಿದ್ದ ಹಾಫ್ಸ್ಟ್ಯಾಡರ್ ತಂಡದ ಸಂಶೋಧಕ ಸಹಾಯಕನಾದನು. ಎಲೆಕ್ಟ್ರಾನ್, ಡ್ಯುಟೆರಾನ್ಗಳ ಚದುರಿಕೆಯಲ್ಲಿನ ರೋಹಿತದ ವಿಕಿರಣಶೀಲ ವ್ಯಾಪ್ತಿಗೆ ಬೇಕಾದ ತಿದ್ದುಪಡಿಯ ವಿಧಾನವನ್ನು ಜೆರೋಮ್ ಸೂಚಿಸಿದನು. ಹೆನ್ರಿ ಕೆಂಡಾಲ್ ಸ್ವತಂತ್ರವಾಗಿ ಇಂತಹುದೆ ಪ್ರಯತ್ನದಲ್ಲಿ, ಇದೇ ಕಾಲದಲ್ಲಿ ಯಶಸ್ವಿಯಾಗಿದ್ದನು. 1960ರಲ್ಲಿ ಎಂ.ಐ.ಟಿಗೆ ಸೇರಿದ ಜೆರೋಮ್, ಡೇವಿಡ್ ರಿಟ್ಸನ್ನ ಸಂಶೋಧನಾ ತಂಡದ ಸದಸ್ಯನಾದನು. 1980ರಲ್ಲಿ ಎಂಐಟಿಯ ಬೈಜಿಕ ವಿಜ್ಞಾನ ವಿಭಾಗದ ನಿರ್ದೇಶಕನಾದ ಜೆರೋಮ್ ಎಲೆಕ್ಟ್ರಾನ್ ನಿರ್ಮೂಲಕಗಳ ನಿರ್ಮಾಣದಲ್ಲಿ ಭಾಗವಹಿಸಿದನು. 1990ರಲ್ಲಿ ಜೆರೋಮ್ ಹೆನ್ರಿ ಕೆಂಡಾಲ್ ಹಾಗೂ ರಿಚರ್ಡ್ ಟೇಲರ್ರೊಂದಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ರಿಚರ್ಡ್ 2 ನವೆಂಬರ್ 1929ರಂದು, ಕೆನಡಾದ ಸಾಸ್ಕಾಷೆಲೆನ್ ನದಿ ತೀರದ ಸೌತ್ ವೆಸ್ಟರ್ನ್ ಆಲ್ಬರ್ಟಾ ಎಂಬ ಪುಟ್ಟ ಪಟ್ಟಣದಲ್ಲಿ ಜನಿಸಿದನು. ಈತನ ತಂದೆ ಐರ್ಲೆಂಡ್ ಮೂಲದವರಾಗಿದ್ದರೆ, ತಾಯಿಯ ಪೂರ್ವಜರು ನಾರ್ವೆಯಿಂದ ಅಸಂಸಂಗಳಲ್ಲಿದ್ದು ಅಲ್ಲಿಂದ ಕೆನಡಾಕ್ಕೆ ವಲಸೆ ಬಂದಿದ್ದರು, ರಿಚರ್ಡ್ ವಿದ್ಯಾರ್ಥಿ ಜೀವನದಲ್ಲಿ ಸಾಧಾರಣ ಬುದ್ಧಿವಂತನಾಗಿದ್ದು ಪ್ರೌಢಶಾಲೆಗೆ ಬರುವ ವೇಳೆಗೆ, ಗಣಿತ ಹಾಗೂ ವಿಜ್ಞಾನದಲ್ಲಿ ಸುಧಾರಿಸಿದನು. ಎರಡನೇ ಜಾಗತಿಕ ಯುದ್ದ ಪ್ರಾರಂಭವಾದಾಗ ರಿಚರ್ಡ್ ನೆಲೆಸಿದ್ದ ಪಟ್ಟಣ ತೀವ್ರ ಸೇನಾ ಚಟುವಟಿಕೆಗಳ ಕೇಂದ್ರವಾಗಿದ್ದಿತು. ಇದರಿಂದ ಸಿಡಿಮದ್ದು, ಅಸ್ತ್ರಗಳ ಬಗೆಗೆ ಬಾಲಕನಾಗಿದ್ದ ರಿಚರ್ಡ್ಗೆ ಅತ್ಯಾಸಕ್ತಿ ಮೂಡಿತು. ಜಾಗತಿಕ ಯುದ್ದದ ಅಂತ್ಯದಲ್ಲಿ ಹಿರೋಷಿಮಾ ನಾಗಸಾಕಿಗಳ ಮೇಲೆ ಹಾಕಿದ ಬೈಜಿಕಾಸ್ತ್ರ ಅದರಿಂದಾದ ಪರಿಣಾಮಗಳಿಂದ ರಿಚಡ್ರ್ಸ್ಗೆ ಭೌತಶಾಸ್ತ್ರದ ದಿಗಂತಗಳು ಗೋಚರಿಸತೊಡಗಿದವು. ಪ್ರೌಢಶಾಲೆಯಲ್ಲಿ ಕೆಲವು ವಿಷಯಗಳಲ್ಲಿ ಬಹು ಸಾಧಾರಣ ಅಂಕಗಳನ್ನು ಗಳಿಸಿದ್ದರಿಂದ ರಿಚರ್ಡ್ ಬಹು ಪ್ರಯಾಸದಿಂದ ಎಡ್ಮಂಟನ್ನಲ್ಲಿರುವ ಆಲ್ಬರ್ಟಾ ವಿಶ್ವವಿದ್ಯಾಲಯ ಸೇರಿದನು. ಪದವಿ ವ್ಯಾಸಂಗದಲ್ಲಿರುವಾಗ ಪ್ರಯೋಗ ಭೌತಶಾಸ್ತ್ರದಲ್ಲಿ ಪರಿಣಿತಿ ಗಳಿಸಿ ನಂತರ ಸ್ನಾತಕೋತ್ತರ ಪದವಿಯನ್ನು ಪೂರೈಸಿದನು. ಪದವಿಯ ಕಾಲದಲ್ಲಿ ದಕ್ಕಿದ ರಜಾ ದಿನಗಳನ್ನು ರಕ್ಷಣಾ ಇಲಾಖೆಯ ಪ್ರಯೋಗಾಲಯದಲ್ಲಿ ಕಳೆದನು. ಇಲ್ಲಿ ಮಾರ್ಗದರ್ಶಕನಾಗಿದ್ದ ಇ.ಜೆ.ಹಿಗ್ಗಿನ್ಸ್ ವಿದ್ಯಾಭ್ಯಾಸವನ್ನು ಇನ್ನು ಮುಂದುವರೆಸುವಂತೆ ರಿಚಡ್ರ್ಸ್ನನ್ನು ಪ್ರೋತ್ಸಾಹಿಸಿದನು. ಅಸಂಸಂಗಳಿಗೆ ಹೋಗಿ ಸ್ಟ್ಯಾನ್’ಫೋರ್ಡ್’ ವಿಶ್ವವಿದ್ಯಾಲಯ ಸೇರಿದಾಗ, ಅಲ್ಲಿ ಫೆಲಿಕ್ಸ್ ಬ್ಲಾಖ್, ಲಿಯೋನಾರ್ಡ್ ಷಿಫ್, ವಿಲ್ಲೀಸ್ ಲ್ಯಾಂಬ್ರವರಿಂದ ಕ್ರಿಯಾಶೀಲವಾಗಿದ್ದಿತು. ಇಲ್ಲಿ ರಾಬರ್ಟ್ ಎಫ್ಮೋಝ್ಲೆಯ ಮಾರ್ಗದರ್ಶನದಲ್ಲಿ ಪೈ-ಮೆಸಾನ್ಗಳ ಉತ್ಪಾದನೆಯನ್ನು ಕುರಿತಾಗಿ ರಿಚರ್ಡ್ ಸಂಶೋಧನೆ ಕೈಗೊಂಡನು. 1958ರಲ್ಲಿ ಪ್ಯಾರಿಸ್ನ ಎಕೊಲೆ ನಾರ್ಮಲೆಯಲ್ಲಿ ಸ್ಥಾಪಿಸಿದ್ದ ಸರೇಖೀಯ ವೇಗೋತ್ಕರ್ಷಗಳಲ್ಲಿ ಪ್ರಯೋಗಗಳನ್ನು ನಡೆಸಲು ಬಂದ ಆಹ್ವಾನವನ್ನು ರಿಚಡ್ರ್ಸ್ ಒಪ್ಪಿಕೊಂಡನು. ಇಲ್ಲಿ ಮೂರು ವರ್ಷಗಳ ಕಾಲವಿದ್ದ ರಿಚರ್ಡ್ 1961ರಲ್ಲಿ ಅಸಂಸಂಗಳಿಗೆ ಮರಳಿ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯದ ಲಾರೆನ್ಸ್ ಬಕ್ರ್ಲೆ ಪ್ರಯೋಗಾಲಯ ಸೇರಿದನು. ಮುಂದಿನ ಒಂದು ದಶಕದ ಕಾಲ ರಿಚಡ್ರ್ಸ್ ಹಲವಾರು ಬಗೆಯ ಎಲೆಕ್ಟ್ರಾನ್ ಚದುರಿಕೆಯ ಸಾಧನಗಳ ನಿರ್ಮಾಣದಲ್ಲಿ ಭಾಗಿಯಾದನು. 1971ರಲ್ಲಿ ಗುಗೆನ್ಹೀಮ್ ಫೆಲೋಷಿಫ್ಪಡೆದು ಸಿ.ಇ.ಆರ್.ಎನ್ನಲ್ಲಿ ಕೆಲಸಮಾಡಿದನು. ಇದಕ್ಕೂ ಮೊದಲು ಕೆಲಕಾಲ ವೈದ್ಯುತ್ ಕಾಂತೀಯ ಅಂತ:ಕ್ರಿಯೆಗಳ ಅವ್ಯತ್ಯಸ್ತ ಗುಣ ಲಕ್ಷಣಗಳ (Invariant Characteristics) ಅಧ್ಯಯನ ನಿರತನಾಗಿದ್ದನು. 1981ರಲ್ಲಿ ಅಲೆಕ್ಸಾಂಡರ್ ವಾನ್ಹಮ್ ಬೋಲ್ಡ್ಟ್ ಪ್ರಶಸ್ತಿ ಪಡೆದು ಎರಡು ವರ್ಷ ಹ್ಯಾಂಬರ್ಗ್ನಲ್ಲಿ ಸಂಶೋಧನೆ ಮುಂದುವರೆಸಿದನು. 1975ರಲ್ಲಿ ಧೃವೀಕೃತ ಎಲೆಕ್ಟ್ರಾನ್ ಪಡೆಯುವ ಹೊಸ ವಿಧಾನವನ್ನು ಕೊಲಂಬೋದಲ್ಲಿದ್ದ ಇ.ಎಲ್.ಗಾರ್ವಿನ್ ತಂಡ ರೂಪಿಸಿತು. ಇದನ್ನು ಅನುಸರಿಸಿ, ರಿಚಡ್ರ್ಸ್ ಹಾಗೂ ಸಂಗಡಿಗರು 1978ರಲ್ಲಿ ಕ್ಷೀಣ ಬೈಜಿಕ ಅಂತಕ್ರಿಯೆಗಳ ಸಿದ್ಧಾಂತಗಳು ಮುನ್ಸೂಚನೆ ನೀಡಿದಂತಹ ಸಾಮ್ಯತೆ (Parity)ಭಂಗ ಗಮನಿಸಿದರು. ಪ್ರೋಟಾನ್ ಹಾಗೂ ಬದ್ಧ ನ್ಯೂಟ್ರಾನ್ಗಳ ಮೇಲೆ, ಎಲೆಕ್ಟ್ರಾನ್ಗಳ ಸ್ಥಿತಿಸ್ಥಾಪನಾರಹಿತ ಚದುರಿಕೆ ಕುರಿತಾದಂತೆ ರಿಚರ್ಡ್ ನಡೆಸಿದ ಸಂಶೋಧನೆಗಳಿಗಾಗಿ 1990ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಇದು ಕಣ ಭೌತಶಾಸ್ತ್ರದಲ್ಲಿ ಕ್ವಾರ್ಕ್ ಮಾದರಿ ಅಭಿವೃದ್ದಿಪಡಿಸಲು ನೆರವಾಂiತು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು