ಗ್ಯಾಬೊರ್, ಡೆನ್ನಿಸ್ (1900-1979) 1971 Gabor , Dennis
ಹಂಗರಿ-ಬ್ರಿಟನ್-ಭೌತಶಾಸ್ತ್ರ- ಪೂರ್ಣಬಿಂಬ ಗ್ರಹಣ ತಂತ್ರ (Halography) ಉಪಜ್ಞೆಕಾರ.
ಗ್ಯಾಬೋರ್ನ ತಂದೆ ವ್ಯಾಪಾರಗಾರನಾಗಿದ್ದನು. ಗ್ಯಾಬೋರ್ ಬುಡಾಪೆಸ್ಟ್ ಮತ್ತು ಬರ್ಲಿನ್ನಲ್ಲಿ ವೈದ್ಯುತ್ ಇಂಜಿನಿಯರಿಂಗ್ ಓದಿದನು. ಸೀಮನ್ಸ್ ಮತ್ತು ಹಾಲ್ಸ್ಕೆ ಕಂಪನಿಯಲ್ಲಿ ಸಂಶೋಧಕನಾಗಿ ಕೆಲಸಕ್ಕೆ ಸೇರಿದನು. ನಾಝಿಗಳ ಜನಾಂಗೀಯ ಭೇದ ದೃಷ್ಟಿಗೆ ತುತ್ತಾದ ಗ್ಯಾಬೋರ್, ಜರ್ಮನಿ ತೊರೆದು ಬ್ರಿಟನ್ಗೆ ಹೋಗಿ ನೆಲೆಸಿ , ಮೊದಲಿಗೆ ಥಾಮ್ಸನ್ ಹಾಸ್ಟನ್ ಕಂಪನಿ ಸೇರಿದನು. 1948ರಲ್ಲಿ ಲಂಡನ್ನ ಇಂಪೀರಿಯಲ್ ಕಾಲೇಜಿನಲ್ಲಿ ವೃತ್ತಿ ಮುಂದುವರೆಸಿದನು. 1947-48ರಲ್ಲಿ ಗ್ಯಾಬೋರ್ಗೆ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ಉತ್ತವi ಚಿತ್ರ ಪಡೆಯಲು, ಬೆಳಕಿನ ಅಲೆಯು ತೀವ್ರತೆ (Intensity)ಮತ್ತು ಪ್ರಾವಸ್ಥ ಸ್ಥಿತಿಯನ್ನು (Phased Condition) ಏಕೆ ಬಳಸಬಾರದೆಂಬ ಚಿಂತನೆ ಮೂಡಿತು. ಇದಕ್ಕಾಗಿ ಬೆಳಕನ್ನು ಸಂಲಗ್ನಗೊಳಿಸುವ (Coherence) ಸಾಧ್ಯತೆಗೆ ಯತ್ನಿಸಿದನು. ಸಾಧಾರಣ ಬೆಳಕಿನಲ್ಲಿ ಪ್ರತಿಯೊಂದು ಅಲೆಯೂ ತನ್ನದೇ ಆದ ಅವಸ್ಥೆಯಲ್ಲಿದ್ದರೆ, ಸಂಲಗ್ನಗೊಳಿಸಿದ ಬೆಳಕಿನಲ್ಲಿ ಎಲ್ಲಾ ಅಲೆಗಳು ಒಂದೇ ಸ್ಥಿತಿ ಹಾಗೂ ಪ್ರಾವಸ್ಥೆಯಲ್ಲಿರುತ್ತವೆ. ಇದರಿಂದ ಘನದಲ್ಲಿರುವ ಅಣುಗಳನ್ನು ಅತ್ಯಧಿಕವಾಗಿ ವಿಯೋಜಿಸಿ (Resolution) 3-ಆಯಾಮಗಳಲ್ಲಿ ಸ್ಫುಟವಾದ ಚಿತ್ರಗಳನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ನೋಡುವುದು ಸಾಧ್ಯವಾಯಿತು. ಸಂಲಗ್ನಗೊಂಡ ಬೆಳಕಿಗೆ, ಫಲಕವೊಂದನ್ನು ಒಡ್ಡಿದಾಗ, ಅಲೆಗಳ ವ್ಯತಿಕರಣದಿಂದಾಗಿ (Interference)ಮೂರು ಆಯಾಮದ ಚಿತ್ರಗಳು ಮೂಡಿ ಹಾಲೊಗ್ರಫಿ (Halography) ತಂತ್ರಜ್ಞಾನದ ಉದಯಕ್ಕೆ ನಾಂದಿ ಹಾಡಿತು. ಬೆಳಕಿನ ಕಿರಣಗಳನ್ನು ಸಂಲಗ್ನಗೊಳಿಸುವ ಗ್ಯಾಬೋರ್ನ ಪರಿಕಲ್ಪನೆಯ ಹಿನ್ನೆಲೆಯಲ್ಲಿ 1960ರಲ್ಲಿ ಲೇಸರ್ (LASER) ಉಪಜ್ಞೆಯಾಯಿತು. ಇ.ಲೀಥ್, ಜೆ.ಉಪಟ್ನೀಕ್ಸ್, ಗ್ಯಾಬೋರ್ನ ತಂತ್ರವನ್ನು ಪರಿಷ್ಕರಿಸಿ ಉತ್ತಮಗೊಳಿಸಿದರು. ಗ್ಯಾಬೋರ್ 1971ರ ಭೌತಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿಯಿಂದ ಸನ್ಮಾನಿತನಾದನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಕೂಪರ್, ಲಿಯಾನ್ ನೀಲ್ (1970--) 1972 Cooper , Leon Neil
ಅಸಂಸಂ - ಭೌತಶಾಸ್ತ್ರ - ಅತಿವಾಹಕತೆಯ ¨ಸಿಎಸ್ ಸಿದ್ಧಾಂತಕ್ಕೆ ಕೊಡುಗೆ ನೀಡಿದಾತ.
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಕೂಪರ್ , 1954ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದನು. ಇಲಿನಾಯ್ನಲ್ಲಿ ಬಾರ್ಡಿನ್, ಷ್ರೀಫರ್ ಜೊತೆಗೂಡಿ , ಅತಿವಾಹಕತೆಯ ಸಿದ್ಧಾಂತವನ್ನು ಮಂಡಿಸಿದನು. ಡಾಕ್ಟರೇಟ್ ಗಳಿಸಿದ ಅಲ್ಪಕಾಲದಲ್ಲೇ ಕೂಪರ್ , ನಿಮ್ನ ತಾಪಮಾನಗಳಲ್ಲಿ ಎಲೆಕ್ಟ್ರಾನ್ಗಳ ಬದ್ದ ಜೋಡಿ ಅಸ್ತಿತ್ವವನ್ನು ಸೂಚಿಸಿದನು. ಎರಡು ಒಂದೇ ವಿದ್ಯುದಾವೇಶದ ಎಲೆಕ್ಟ್ರಾನಗಳು ಪರಸ್ಪರ ವಿಕರ್ಷಿಸುವುದು ಸಹಜವಾದರೂ, ಧನಾತ್ಮಕ ಅಯಾನ್ಗಳ ಪದರಗಳಿಂದ ಸುತ್ತುವರೆಯಲ್ಪಟ್ಟ ಸ್ಥಿತಿಯಲ್ಲಿ ಅವು ಬೇರೆಯಾಗಿಯೇ ವರ್ತಿಸುತ್ತವೆ. ಈ ಸ್ಥಿತಿಯಲ್ಲಿ ಒಂದು ಎಲೆಕ್ಟ್ರಾನ್ ಧನಾತ್ಮಕ ಪದರವನ್ನು ತನ್ನೆಡೆಗೆ ಆಕರ್ಷಿಸಿ ವಿರೂಪಗೊಳಿಸುತ್ತಿದ್ದರೆ, ಮತ್ತೊಂದು ಎಲೆಕ್ಟ್ರಾನ್ ಮೊದಲ ಎಲೆಕ್ಟ್ರಾನ್ನಿಂದ ವಿಕರ್ಷಿತಗೊಂಡು ವಿರೂಪವಾಗಿ, ಅಧಿಕ ಸಾಂದ್ರಗೊಂಡ ಧನಾತ್ಮಕ ಪದರದಿಂದ ಆಕರ್ಷಿಸಲ್ಪಡುತ್ತದೆ. ಪರಸ್ಪರ ವಿರುದ್ದ ಇಳಿಜಾರುಗಳಿಂದ, ಒಂದೇ ತಗ್ಗಿನ ಕಡೆ ಉರುಳುತ್ತಿರುವ ಚೆಂಡಿನ ಸ್ಥಿತಿಯಲ್ಲಿ ಈ ಎಲೆಕ್ಟ್ರಾನ್ಗಳಿರುತ್ತವೆ. ಈ ಎಲೆಕ್ಟ್ರಾನ್ಗಳು ನಿಮ್ನ ತಾಪಮಾನಗಳಲ್ಲಿದ್ದಾಗ, ಔಷ್ಣೀಕ ಕಂಪನಗಳು (Thermal Vibrations) ಇರದಿರುವುದರಿದ, ಎಲೆಕ್ಟ್ರಾನ್ಗಳು ಧನಾತ್ಮಕ ಕಣ ಪದರಗಳಿಂದ ಆಕರ್ಷಣೆ ವಿಕರ್ಷಣೆಗಳಿಂದ ಬದ್ದ ಜೋಡಿ ಎಲೆಕ್ಟ್ರಾನಗಳಾಗಿ ರೂಪುಗೊಳ್ಳುತ್ತವೆ. ಇವನ್ನು ಕೂಪರ್ ಜೋಡಿಗಳೆನ್ನುತ್ತಾರೆ. ಹೀಗಿರುವಾಗ, ಈ ಜೋಡಿ ಎಲೆಕ್ಟ್ರಾನ್ಗಳು ಅವುಗಳ ಪದಭ್ರಷ್ಟಗೊಳಿಸುವ, ಯಾವುದೇ ಪರಮಾಣ್ವಿಕ ಕಲ್ಮಶಕ್ಕಿಂತಲೂ ಪ್ರಬಲವಾಗಿದ್ದು, ಸ್ವಲ್ಪವೂ ಚದುರದೆ ಅಣುಪದರಗಳ ಮೂಲಕ ಸಾಗಿ, ಅತಿವಾಹಕತೆಗೆ ಕಾರಣವಾಗುತ್ತವೆಯೆಂದು ಬಿಸಿಎಸ್ ಸಿದ್ಧಾಂತ ವಿವರಿಸುತ್ತದೆ, ಈ ಸಿದ್ಧಾಂತದ ಕೊಡುಗೆಗಳಾಗಿ 1972ರಲಿ ಬಾರ್ಡೀಸ್, ಕೂಪರ್ ಹಾಗೂ ಷೀಫರ್ ನೊಬೆಲ್ ಪ್ರಶಸ್ತಿ ಪಡೆದರು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಜಾನ್ ,ರಾಬರ್ಟ್ ಷ್ರೀಫೆರ್ (1931) 1972 John , Robert Schrieffer
ಅಸಂಸಂ-ಭೌತಶಾಸ್ತ್ರ-ಅತಿವಾಹಕತೆಯನ್ನು ಅನಾವರಣಗೊಳಿಸಿದಾತ.
ಜಾನ್ 31 ಮೇ 1931 ರಂದು ಇಲಿನಾಯ್ ರಾಜ್ಯದ ಓಕ್ ಪಾರ್ಕ್ನಲ್ಲಿ ಜನಿಸಿದನು. 1947ರಲ್ಲಿ ಫ್ಲೋರಿಡಾದ ಯುಸ್ಟಿಸ್ನ ನಗರಕ್ಕೆ ಹೋದನು. 1949ರಲ್ಲಿ ಯುಸ್ಟಿಸ್ ಶಾಲೆಯಿಂದ ಪ್ರೌಢಶಿಕ್ಷಣ ಮುಗಿಸಿ, ಪದವಿಗಾಗಿ ಎಂಐಟಿ ಸೇರಿದನು.ಇಲ್ಲಿ ಮೊದಲೆರಡು ವರ್ಷ ವೈದ್ಯುತ್ ಇಂಜಿನಿಯರಿಂಗ್ ವಿಭಾಗದಲ್ಲಿದ್ದು ನಂತರ ಭೌತಶಾಸ್ತ್ರಕ್ಕೆ ಬದಲಾಯಿಸಿದನು. ಇಲ್ಲಿ ಜಾನ್.ಸಿ.ಸ್ಲೇಟರ್ ಮಾರ್ಗದರ್ಶನದಲ್ಲಿ ಭಾರ ಪರಮಾಣುಗಳ ವಿವಿಧ ಬಗೆಯ ರಚನೆಗಳ ಬಗೆಗೆ ಅಧ್ಯಯನ ಮಾಡಿ ಪದವಿ ಗಳಿಸಿದನು. ಇದಾದ ನಂತರ ಘನಸ್ಥಿತಿ ಭೌತಶಾಸ್ತ್ರದತ್ತ ತನ್ನ ಗಮನ ಹರಿಸಿ ಜಾನ್ ಬಾರ್ಡೀನ್ನ ಮಾರ್ಗದರ್ಶನದಲ್ಲಿ ಇಲಿನಾಯ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮುಂದುವರೆಸಿದನು. ಅರೆವಾಹಕಗಳ ಮೇಲ್ಮೈ ಮೇಲಿನ ವೈದ್ಯುತ್ ಪ್ರವಾಹವನ್ನು ಕುರಿತಾಗಿ ಮೊದಲೆರಡು ವರ್ಷ ಅಧ್ಯಯನಶೀಲನಾದನು. ಮೂರನೇ ವರ್ಷ ಬಾರ್ಡೀನ್ ಹಾಗೂ ಕೂಪರ್ರೊಂದಿಗೆ ಅತಿವಾಹಕತ್ವದಲ್ಲಿ ಕ್ರಿಯಾಶೀಲನಾಗಿ, ಸಂಪ್ರಬಂಧ, ಮಂಡಿಸಿ ಡಾಕ್ಟರೇಟ್ ಗಳಿಸಿದನು. 1957 ಹಾಗೂ 1958ರಲ್ಲಿ ನ್ಯಾಷನಲ್ ಸೈನ್ಸ್ ಫೌಂಡೇಷನ್ ಫೆಲೋ ಆಗಿ ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯ ಹಾಗೂ ಕೊಪೆನ್ಹೇಗ್ನ ಬೊಹ್ರ್ ಸಂಸ್ಥೆಗಳಲ್ಲಿ ಅತಿವಾಹಕತೆಯಲ್ಲಿ ಸಂಶೋಧನೆಯನ್ನು ಮುಂದುವರೆಸಿದನು. ಮುಂದಿನ ವರ್ಷ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. 1959ರಲ್ಲಿ ಇಲ್ಲಿಂದ ಇಲಿನಾಯ್ಗೆ ಹೋಗಿ 1960ರಲ್ಲಿ ಅಲ್ಲಿಯೇ ಬೋಧಕ ಸಿಬ್ಬಂದಿಯಾದನು. ಇದೇ ವರ್ಷದ ಬೇಸಿಗೆಯಲ್ಲಿ ಕೆಲಕಾಲ ಬೋಹ್ರ್ ಸಂಸ್ಥೆಯಲ್ಲಿದ್ದನು. 1962ರಲ್ಲಿ ಷ್ರೀಫೆರ್ ಫಿಲೆಡೆಲ್ಫಿಯಾದ ಪೆನ್ಸಿಲ್ವೇನಿಯಾ “ವಿಶ್ವವಿದ್ಯಾಲಯ ಸೇರಿದನು. 1964ರಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1980ರಲ್ಲಿ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯಕ್ಕೆ ಸೇರಿದನು. 1984 ರಿಂದ 1989ರವರೆಗೆ ಸಂಟಾ ಬಾರ್ಬರಾ ಹಾಗೂ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲಯಗಳನ್ನು ಸೇವೆ ಸಲ್ಲಿಸಿದನು. 1992ರಲ್ಲಿ ಫ್ಲೋರಿಡಾ ರಾಜ್ಯದ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿ ಹಾಗೂ ನ್ಯಾಷನಲ್ ಹೈ ಮ್ಯಾಗ್ನೇಟಿಕ್ ಫೀಲ್ಡ್ ಲ್ಯಾಬೋರೇಟರಿಯ ಮುಖ್ಯಸ್ಥನಾಗಿ ನೇಮಕಗೊಂಡನು. ಮ್ಯೂನಿಕ್ ಜಿನೇವಾ ಫಿಲೆಡೆಲ್ಫಿಯಾ ಇಲಿನಾಯ್ ಸಿನ್ಸಿನಟ್ಟಿ ಟೆಲ್ ಅವಿವ್ ಅಲಬಾಮಾ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ನಿಂದ ಪ್ರಶಸ್ತಿ ಗೌರವಗಳು ಜಾನ್ಗೆ ದಕ್ಕಿವೆ. ಅತಿವಾಹಕತೆಯನ್ನು ಕುರಿತಾದ ಸಂಶೋಧನೆಗಾಗಿ ಜಾನ್, ಬಾರ್ಡೀನ್ ಮತ್ತು ಕೂಪರ್ರೊಂದಿಗೆ 1972ರ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಐವರ್, ಗಯಾಯೆವರ್ (1929--) 1973 Ivar , Giaever
ನಾರ್ವೆ-
ಐವರ್ 5 ಏಪ್ರಿಲ್ 1929ರಂದು ಬರ್ಜೆನ್ ಪಟ್ಟಣದಲ್ಲಿ ಜನಿಸಿದನು. ಈತನ ತಂದೆ ಔಷಧಿ ವ್ಯಾಪಾರಿಯಾಗಿದ್ದನು. ಐವರ್ ಟೊಟೆನ್ ಹಾಗೂ ಹ್ಯಾಮರ್ಗಳಲ್ಲಿ ಶಿಕ್ಷಣ ಗಳಿಸಿದನು. ನಂತರ ಒಂದು ವರ್ಷದ ಕಾಲ ಕೌಫಾನ್ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡಿದನು. ಈ ಮೂಲಕ 1948ರಲ್ಲಿ ನಾರ್ವೆ ತಾಂತ್ರಿಕ ವಿಶ್ವವಿದ್ಯಾಲಯ ಸೇರಿದನು. 1952ರಲ್ಲಿ ಕಾರ್ಪೋರೆಟ್ ಹುದ್ದೆಗೇರಿದನು. ನಂತರ ನಾರ್ವೆ ಸರ್ಕಾರದ ಪೇಟೆಂಟ್ ಇಲಾಖೆಯಲ್ಲಿ ತಾಂತ್ರಿಕ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದನು. 1954ರಲ್ಲಿ ಕೆನಡಾಕ್ಕೆ ಹೋಗಿ ಅಲ್ಲಿ ವಾಸ್ತುಶಿಲ್ಪಿಯೊಬ್ಬನ ಸಹಾಯಕನಾದನು. ಇಲ್ಲಿರುವಾಗ ಕೆನಡಾದ ಜನರಲ್ ಎಲೆಕ್ಟ್ರಿಕ್ ಕಂಪನಿಯಲ್ಲಿ ಇಂಜಿನಿಯರಿಂಗ್ನಲ್ಲಿ ಮುಂದುವರೆದ ಶಿಕ್ಷಣ ಪಡೆದನು. 1956ರಲ್ಲಿ ಅಸಂಸಂಕ್ಕೆ ವಲಸೆ ಹೋಗಿ ಜನರಲ್ ಎಲೆಕ್ಟ್ರಿಕ್ ಕಂಪನಿಯಲ್ಲಿ ಎ,ಬಿ,ಸಿ ಪರೀಕ್ಷೆ ಮುಗಿಸಿದನು. ಹಲವಾರು ಕಡೆ ಉದ್ಯೋಗ ಮಾಡಿ 1958ರಲ್ಲಿ ಜನರಲ್ ಎಲೆಕ್ಟ್ರಿಕ್ ಕಂಪನಿಯ ಸಂಶೋಧನಾ ವಿಭಾಗ ಸೇರಿದನು. ರೆನ್ಸೆಲೇರ್ ಪಾಲಿಟೆಕ್ನಿಕ್ ನಲ್ಲಿ ಭೌತಶಾಸ್ತ್ರದ ಸಂಶೋಧನೆ ಮಾಡಿ 1964ರಲ್ಲಿ ಡಾಕ್ಟರೇಟ್ ಗಳಿಸಿದನು. 1958ರಿಂದ 1969ರ ಅವಧಿಯಲ್ಲಿ ಐವರ್ ತೆಳುಪೊರೆ, ಅತಿವಾಹಕತೆ ಸುರಂಗೀಕರಣಗಳಲ್ಲಿ ಸಂಶೋಧನಾ ನಿರತನಾಗಿದ್ದನು. ಸುರಂಗೀಕರಣ ಹಾಗೂ ಅತಿ ವಾಹಕತೆಗಳಲ್ಲಿ ಸಂಯೋಜಿತ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದನು. ಕೇಂಬ್ರಿಜ್ನಲ್ಲಿ ಕೆಲಕಾಲವಿದ್ದು ಜೀವ ಭೌತಶಾಸ್ತ್ರದಲ್ಲಿ ಶ್ರಮಿಸಿದನು. ಘನ ಮೇಲೈಗಳ ಮೇಲೆ ಪ್ರೋಟೀನ್ಗಳ ನಡವಳಿಕೆಯಲ್ಲಿ ಅಧ್ಯಯನದಲ್ಲಿ ನಿರತನಾಗಿದ್ದನು. ಅತಿವಾಹಕತೆ ಹಾಗೂ ಸುರಂಗ ವಿದ್ಯಾಮಾನಗಳಲ್ಲಿ ನಡೆಸಿದ ಸಂಶೋಧನೆಗಳಿಗಾಗಿ ಐವರ್ 1973ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಜೊಸೆಫ್'ಸನ್ , ಬ್ರಿಯಾನ್ ಡೇವಿಡ್ (1940--) 1973 Josephson , Brian David
ಬ್ರಿಟನ್-ಸೈದ್ಧಾಂತಿಕ ಭೌತಶಾಸ್ತ್ರ- ಅತಿವಾಹಕಗಳ ಮಧ್ಯದ ಸುರಂಗ (Tunneling) ಪರಿಣಾಮ ಅನಾವರಣಗೊಳಿಸಿದಾತ.
ಕೇಂಬ್ರಿಜ್ನಲ್ಲಿ ವಿದ್ಯಾಭ್ಯಾಸ ಮಾಡಿದ ಜೊಸೆಫ್ಸನ್ 1974ರಲ್ಲಿ ಅಲ್ಲಿಯೆೀ ಭೌತಶಾಸ್ತ್ರದ ಪ್ರಾಧ್ಯಾಪಕನಾದನು. 1962ರಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದನು. ಆಗ ಆತ ಜೊಸೆಫ್ಸನ್ ಪರಿಣಾಮ ಕಂಡು ಹಿಡಿದನು. ಒಂದರಿಂದ ಎರಡು ನ್ಯಾನೋಮೀಟರ್ ದೂರದಲ್ಲಿರಿಸಿದ, ಅತಿವಾಹಕ ವಲಯಗಳ ಮಧ್ಯೆ ಯಾವುದೇ ವಿಭವ (Tunneling) ಇಲ್ಲದಿದ್ದಾಗಲೂ ವಿದ್ಯುತ್ ಪ್ರವಾಹ ಹರಿಯುವುದೆಂದು ತೋರಿಸಿದನು. ಇದನ್ನು ಈಗ ಜೋಸೆಫ್’ಸನ್ ಪರಿಣಾಮವೆಂದು ಕರೆಯಲಾಗುತ್ತಿದೆ. ಜೆಲ್ ಪ್ರಯೋಗಾಲಯದ ಜೆ.ಎಂ.ರೊವೆಲ್ ಮತ್ತು ಪಿ.ಡಬ್ಲ್ಯು ಆ್ಯಂಡರ್ಸನ್ ಇದನ್ನು ಪ್ರಯೋಗಳಿಂದ ಖಚಿತಗೊಳಿಸಿದನು. ಜೊಸೆಫ್ಸನ್ ಪರಿಣಾಮವನ್ನು ಗಣಕಗಳಲ್ಲಿ ಬಳಸಿಕೊಳ್ಳಲಾಗುತ್ತದೆ. 1973ರಲ್ಲಿ ನೊಬೆಲ್ ಪ್ರಶಸ್ತಿ ಹಂಚಿಕೊಂಡ ಜೊಸೆಫ್ಸನ್, ಈಗ ಮಾನಸಿಕ ಪ್ರೇರಣೆಯ ವಿದ್ಯಾಮಾನದ ಸಂಶೋಧನೆ ಹಾಗೂ ಸಂಗೀತಗಳಲ್ಲಿ ಆಸಕ್ತನಾಗಿದ್ದಾನೆ.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಲಿಯೊ , ಎಸಾಕಿ 1973 Leo , Esaki
ಎಸಾಕಿ 1925ರಲ್ಲಿ ಒಸಾಕದಲ್ಲಿ ಜನಿಸಿದನು. ಟೋಕಿಯೋ ವಿಶ್ವವಿದ್ಯಾಲಯದಿಂದ 1947ರಲ್ಲಿ ಭೌತಶಾಶ್ತ್ರದ ಪದವಿಯನ್ನು ಮತ್ತು 1959ರಲ್ಲಿ ಡಾಕ್ಟರೇಟ್ನ್ನು ಪದೆದನು. ಐಬಿಎಂ ಫೆಲೋ ಆಗಿ ನೇಮಕಗೊಂಡ ಎಸಾಕಿ 1960ರಿಂದ ನ್ಯೂಯಾರ್ಕ್ನ ಥಾಮಸ್ ಜೆ. ವ್ಯಾಟ್ಸನ್ ಸಂಶೋಧನಾ ಕೇದ್ರದಲ್ಲಿ ಕ್ರಿಯಾಶೀಲನಾಗಿದ್ದಾನೆ. ಇದಕ್ಕೂ ಮೊದಲು ಕೆಲ ಕಾಲ ಸೋನಿ ಸಂಸ್ಥೆಯಲ್ಲಿ ಭಾರಿ ಕಲುಷಿತಗೊಳಿಸಿದ ಅರೆವಾಹಕಗಳನ್ನು ಕುರಿತಾಗಿ ಎಸಾಕಿ ಸಂಶೋಧನೆ ನಡೆಸಿದ್ದನು. ಇದರ ಫಲಿತಾಂಶವಾಗಿ ಎಸಾಕಿ ತನೆಲ್ ಡಯೋಡ್ಗಳನ್ನು ಉಪಜ್ಞಿಸಿದನು. ಇದು ಪ್ರಥಮ ಕ್ವಾಂಟಂ ಎಲೆಕ್ಟ್ರಾನ್ ಸಾಧನವೆಂಬ ಹೆಗ್ಗಳಿಕೆ ಹೊಂದಿದೆ. ಇದು ಮಾನವ ನಿರ್ಮಿತ ಮಹಾಜಾಲಂಧ್ರ ವಾಹಕಗಳನ್ನು ನಿರ್ಮಿಸಲು ಅನುವು ಮಾಡಿ ಅರೆವಾಹಕಳಲ್ಲಿ ಹಾಗೂ ಎಲೆಕ್ಟ್ರಾನ್ ಇಂಜಿನಿಯರಿಂಗನಲ್ಲಿ ಮಹಾನ್ ಕ್ರಾಂತಿಯನ್ನೇ ತಂದಿದೆ. ಎಸಾಕಿಯ ಈ ಸಂಶೋಧನೆ ಮತ್ತು ತಂತ್ರಜ್ಞಾನದ ಕೊದುಗೆಗಳಿಗಾಗಿ 1973ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಹೆವಿಷ್, ಆ್ಯಂಟೊನಿ (1924--) 1974 Hewish , Antony
ಬ್ರಿಟನ್- ರೇಡಿಯೋ ಖಗೋಳಶಾಸ್ತ್ರ-ಪಲ್ಸಾರ್ ಗುರುತಿಸಿದ ಮೊದಲಿಗ.
ಹೆವಿಷ್, ಕೇಂಬ್ರಿಜ್ನಿಂದ ಭೌತಶಾಸ್ತ್ರದ ಪದವಿ ಗಳಿಸಿದನು. ಇಲ್ಲಿ ರೈಲ್ವೆ ಇಲಾಖೆಯೊಂದಿಗೆ ರೇಡಿಯೋ ದೂರದರ್ಶಕ ಬಳಸುವ ಸಂಶೋಧನೆ ನಡೆಸಿದನು. ತಾರೆಗಳು ವಿಭಿನ್ನ ಪ್ರಕಾಶತೆಯಿಂದಾಗಿ ಮಿನುಗುತ್ತವೆ. ಇದರ ಸಾಮ್ಯತೆಯಲ್ಲಿ ಕೆಲವು ತಾರೆಗಳು ರೇಡಿಯೋ ತರಂಗಗಳನ್ನು ಹೊರಹೊಮ್ಮಿಸುತ್ತವೆ. ತಾರಾಂತರ ಅಂತರಿಕ್ಷದಲ್ಲಿನ ಮೇಘ ಮತ್ತು ಸೌರ ವಾಯುಗಳ ವೀಕ್ಷಣೆಯಲ್ಲೂ ಹೆವಿಷ್ ಆಸಕ್ತಿ ಹೊಂದಿದ್ದನು. 1967ರಲ್ಲಿ ಹೆವಿಷ್ ವಿಶಿಷ್ಟ್ ಬಗೆಯ ದೂರದರ್ಶಕವನ್ನು ವಿನ್ಯಾಸಗೊಳಿಸಿದನು. ತನ್ನ ಶಿಷ್ಯ ಜೊಸೆಲಿನ್ ಬೆಲ್ (ಬರ್ನೆಲ್) ಜೊತೆ ಸೇರಿ ಹೆವಿಷ್ ಕ್ಷೀರಪಥ ಬ್ರಹ್ಮಾಂಡದಲ್ಲಿ ಕ್ರಮಬದ್ಧವಾಗಿ ರೇಡಿಯೋ ತರಂಗಗಳನ್ನು ಹೊಮ್ಮಿಸುವ ತಾರೆಯನ್ನು ಗುರುತಿಸಿದನು. ಇವುಗಳನ್ನು ಪಲ್ಸಾರ್ಗಳೆನ್ನುತ್ತಾರೆ. ಇದಾದ ಮೇಲೆ ಇಂತಹ ಹತ್ತಾರು ಪಲ್ಸಾರ್ಗಳನ್ನು ಗುರುತಿಸಲಾಗಿದೆ. ಪಲ್ಸಾರ್ಗಳು ಸರಿ ಸುಮಾರು 15 ರಿಂದ 29 ಕಿ.ಮೀ ಗಾತ್ರದವಾಗಿದ್ದು ಆವರ್ತಿಸುವ ನ್ಯೂಟ್ರಾನ್ ತಾರೆಗಳೆಂದು ಈಗ ಗುರುತಿಸಲಾಗಿದೆ. 1974ರಲ್ಲಿ ಪಲ್ಸಾರ್ ಪತ್ತೆ ಹಚ್ಚಿದ್ದಕ್ಕಾಗಿ ಹೆವಿಷ್ ನೊಬೆಲ್ ಪ್ರಶಸ್ತಿ ಪಡೆದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ರೈಲ್ (ಸರ್) ಮಾರ್ಟಿನ್ –(1918-1984) 1974 Ryle, ( Sir ) Martin
ಬ್ರಿಟನ್-ಖಗೋಳಶಾಸ್ತ್ರ- ರೇಡಿಯೋ ಆಗಸದ ವಿವರವಾದ ನಕಾಶೆ ಪ್ರಕಟಿಸಿದ ಮೊದಲಿಗ.
ಜಾನ್ಸಕಿ ಹಾಗೂ ರೆಬೆರ್ ಅಂತರಿಕ್ಷದ ರೇಡಿಯೋ ಆಕರಗಳನ್ನು ಪತ್ತೆ ಹಚ್ಚಿದ್ದರು. ಎರಡನೇ ಜಾಗತಿಕ ಯುದ್ದದ ನಂತರ ರೈಲ್, 1950ರಲ್ಲಿ ಕೇಂಬ್ರಿಜ್ನಿಂದ ಅಂತರಿಕ್ಷದ ರೇಡಿಯೋ ಆಕರಗಳನ್ನು ಪತ್ತೆ ಹಚ್ಚಲು ಪ್ರಾರಂಭಿಸಿ, 1965ರ ವೇಳೆಗೆ 5000ಕ್ಕೂಅಧಿಕ ತಾಣಗಳನ್ನು ಗುರುತಿಸಿದ್ದನು. ಇವುಗಳ ಸ್ಥಾನ ಸೂಚಿಸುವ ನಕಾಶೆ ತಯಾರಿಸಿದನು. ಇದರಿಂದ ಕ್ಪೆಸಾರ್, ಪಲ್ಸಾರ್ಗಳ ಅಧ್ಯಯನಕ್ಕೆ ನೆರವೊದಗಿತು. ವಿಶ್ವದ ಬಹು ದೂರದ ತಾಣಗಳು, ಸನಿಹದ ತಾಣಗಳಿಂದ ಬೇರೆಯಾಗಿ ಕಾಣುವುವೆಂದು ರೈಲ್ ತೋರಿಸಿದನು. ರೈಲ್ ಪ್ರಯೋಗಗಳು ಮಹಾಬಾಜಣೆ (Big Bang) ಸಿದ್ಧಾಂತಕ್ಕೆ ಬೆಂಬಲವೊದಗಿಸಿ, ಹಲವಾರು ಕಾರಣಗಳಿಂದ ಹೊಯ್ಲ್ ಜೊತೆಗಿನ ವಿವಾದಕ್ಕೆ ಕಾರಣವಾದವು. 1972ರಲ್ಲಿ ಅಸ್ಟ್ರೋನಾಮರ್ ರಾಯಲ್ ಎಂದು ಗೌರವಿತನಾದ ರೈಲ್ 1974ರ ನೊಬೆಲ್ ಪ್ರಶಸ್ತಿ ಪಡೆದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಬೆಂಜಮಿನ್, ರಾಯ್ ಮಾಟೆಲ್ಸನ್ (1926--) 1975 Benjamin , Roy Mottelson
ಅಸಂಸಂ-ಭೌತಶಾಸ್ತ್ರ-ಬೈಜಿಕ ಭೌತಶಾಸ್ತ್ರದ ಮುಂಚೂಣಿಗ.
ಬೆಂಜಮಿನ್, ಇಂಜಿನಿಯರ್’ನ ಮೂರು ಮಕ್ಕಳಲ್ಲಿ ಎರಡನೆಯವನು. ಇಲಿನಾಯ್ ರಾಜ್ಯದ ಲಗ್ರಾಂಜ್ ಹಳ್ಳಿಯಲ್ಲಿ 9 ಜುಲೈ 1926 ರಂದು ಬೆಂಜಮಿನ್ ಜನನವಾಯಿತು. ಲಂಗ್ರಾಂಜ್ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದನು. ಈ ಕಾಲಕ್ಕೆ ಎರಡನೇ ಜಾಗತಿಕ ಯುದ್ದ ಪ್ರಾರಂಭವಾಗಿ ಯುಎಸ್ ನೇವಿಯಡಿಯಲ್ಲಿ ಪಡ್ರ್ಯೂ ವಿಶ್ವವಿದ್ಯಾಲಯಕ್ಕೆ ವಿ 12 ಕಾರ್ಯಕ್ರಮದಡಿಯಲ್ಲಿ ಸೇರಿಸಲ್ಪಟ್ಟನು. 1947ರಲ್ಲಿ ಇಲ್ಲಿಂದ ವಿಜ್ಞಾನದ ಪದವಿಯೊಂದಿಗೆ ಹೊರಬಂದನು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಗಳಿಸಿ ಜೂಲಿಯನ್ ಷ್ವೈಂಜರ್ ಮಾರ್ಗದರ್ಶನದಲ್ಲಿ ಬೈಜಿಕ ಭೌತಶಾಸ್ತ್ರದಲಿ ಡಾಕ್ಟರೇಟ್ ಗಳಿಸಿದನು. ಹಾರ್ವರ್ಡ್ನಿಂದ ಪ್ರವಾಸಿ ಫೆಲೋಷಿಪ್ ಗಳಿಸಿ, 195ರಿಂದ ಒಂದು ವರ್ಷದ ಕಾಲ ಕೊಪೆನ್ಹೇಗ್ನ ಸೈದ್ಧಾಂತಿಕ ಭೌತಶಾಸ್ತ್ರದ ನೀಲ್ಸ್ ಬೋಹ್ರ್ ಸಂಸ್ಥೆಯಲ್ಲಿ ಸಂಶೋಧನೆ ಮುಂದುವರಿಸಿದನು. ಅಸಂಸಂಗಳ ಪರಮಾಣು ಶಕ್ತಿ ವಿಭಾಗದಿಂದ ದೊರೆತ ಫೆಲೋಷಿ¥sóïನಿಂದಾಗಿ, ಇನ್ನೆರಡು ವರ್ಷ ಕೊಪೆನ್ಹೇಗನಲ್ಲಿರುವ ಅವಕಾಶ ಬೆಂಜಮಿನ್ಗೆ ದಕ್ಕಿತು. ಈ ಅವಧಿಯಲ್ಲಿ ಬೈಜಿಕ ಸಂಶೋಧನೆಗೆ ಸ್ಥಾಪಿತವಾಗಿರುವ ಸಿ.ಇ.ಆರ್.ಎನ್.ಸಂಸ್ಥೆಯಲ್ಲಿ ಸಂಶೋಧಕನ ಸ್ಥಾನ ದಕ್ಕಿತು. 1959ರಲ್ಲಿ ಕೊಪೆನ್ಹೇಗ್ನಲ್ಲಿ ಪ್ರಾರಂಭವಾದ ನಾರ್ಡಿಕ್ ಇನ್ಸ್ಟಿಟ್ಯೂಟ್ ಫಾರ್ ಥಿಯೋರೆಟಿಕಲ್ ಅಟಾಮಿಕ್ ಫಿಸಿಕ್ಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕನಾದನು. 1959 ರಿಂದ ಬಕ್ರ್ಲೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾದನು. ಬೋಹ್ರ್ ಸಂಸ್ಥೆಯಲ್ಲಿ ನೀಲ್ಸ್ ಬೋಹ್ರ್ನ ಮಗನಾದ ಆಗೆ ಬೋಹ್ರ್ ಜೊತೆಗೆ ಬೈಜಿಕ ಭೌತಶಾಸ್ತ್ರದಲ್ಲಿ ನಡೆಸಿದ ಸಂಶೋಧನೆಗಳಿಗಾಗಿ ಬೆಂಜಮಿನ್ 1975ರ ನೊಬೆಲ್ ಪ್ರಶಸ್ತಿಗೆ ಪಾತ್ರನಾದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಡೆನ್ಮಾರ್ಕ್-ಭೌತಶಾಸ್ತ್ರ-ಪರಮಾಣುವಿನ ಬೀಜದಲ್ಲಿ ಕಣವೊಂದರ ಚಲನೆ ಹಾಗೂ ಕಣಗಳ ಸಮಷ್ಟಿ ಚಲನೆಯ ಮಧ್ಯದ ಸಂಬಂಧವನ್ನು ನಿರ್ಧರಿಸಿದಾತ.
ಅಗೆ 19 ಜೂನ್ 1922ರಂದು ಕೊಪೆನ್ಹೆಗ್ನಲ್ಲಿ ವಿಶ್ವ ವಿಖ್ಯಾತ ವಿಜ್ಞಾನಿ ನೀಲ್ಸ್ ಬೊಹ್ರ್ನ ಮಗನಾಗಿ ಜನಿಸಿದನು. ಬಾಲ್ಯದಲ್ಲಿ ತಂದೆಯನ್ನು ಕಾಣಲು ಬರುತ್ತಿದ್ದ ಹಿರಿಯ ವಿಜ್ಞಾನಿಗಳ ಅಕ್ಕರೆ ಹಾಗೂ ಬಾಂಧವ್ಯದ ಸವಿ ಅಗೆಗೆ ದಕ್ಕಿತು. 1940ರಲ್ಲಿ ಜರ್ಮನಿ, ಡೆನ್ಮಾರ್ಕ್ನ್ನು ಆಕ್ರಮಿಸಿದ ಕೆಲ ತಿಂಗಳುಗಳಲ್ಲೇ ಅಗೆ ಕೊಪೆನ್ಹೇಗ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪದವಿಗೆ ಸೇರಿದನು. ಈ ಮೊದಲೇ ವೈಜ್ಞಾನಿಕ ಸಂಶೋಧನೆಗಳ ಲೇಖನ ಬರೆಯುವಲ್ಲಿ ಮುದ್ರಿಸುವಲ್ಲಿ ತಂದೆಗೆ ನೆರವಾಗುತ್ತಿದ್ದನು. 1943ರಲ್ಲಿ ನಾಝಿಗಳ ಬಂಧನದಿಂದ ತಪ್ಪಿಸಿಕೊಳ್ಳಲು ಬೊಹ್ರ್ ಕುಟುಂಬ ಸ್ವೀಡನ್ಗೆ ಪಲಾಯನಗೈದಿತು. ಸ್ವೀಡನ್ನಲ್ಲಿ ಇವರಿಗೆ ಬಹು ಆದರದ ಸ್ವಾಗತ ದಕ್ಕಿತು. ನಂತರ ಅಗೆಯ ತಂದೆ ನೀಲ್ಸ್ ಇಂಗ್ಲೇಂಡಿಗೆ ಹೋಗಿ ಪರಮಾಣು ಶಕ್ತಿಯ ಯೋಜನೆಯಲ್ಲಿ ಪಾಲ್ಗೊಂಡನು. ಯುದ್ದ ಮುಗಿದ ನಂತರ 1946ರಲ್ಲಿ ಡೆನ್ಮಾರ್ಕ್ಗೆ ಮರಳಿ, ಅಗೆ ತನ್ನ ಪದವಿ ಪೂರ್ಣಗೊಳಿಸಿದನು. 1948ರಲ್ಲಿ ವೈಜ್ಞಾನಿಕ ತಂಡದ ಸದಸ್ಯನಾಗಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿದ್ದ ವಿಜ್ಞಾನಿ ಐ.ಐ.ರಬಿಯನ್ನು ಭೇಟಿ ಮಾಡಿದನು. ಇದರ ಫಲಿತಾಂಶವಾಗಿ ಒಂದು ವರ್ಷ ಕಾಲ ಇಲ್ಲಿ ಡ್ಯುಟೇರಿಯಂನ ಅತಿ ಸೂಕ್ಷ್ಮವಾದ ರಾಚನಿಕ ಸ್ವರೂಪ ಕುರಿತು ಸಂಶೋಧನೆ ನಡೆಸಿದನು. ನಂತರ ತಾಯ್ನಾಡಿಗೆ ಮರಳಿ ನೀಲ್ಸ್ ಬೊಹ್ರ್ ಸಂಸ್ಥೆಯಲ್ಲಿ ನೆಲೆಸಿದನು. ಭೌತಶಾಸ್ತ್ರದ ಸೈದ್ಧಾಂತಿಕ ಹಾಗೂ ಪ್ರಯೋಗದ ಕ್ಷೇತ್ರಗಳಲ್ಲಿ ಅಗೆ ಮಧ್ಯವರ್ತಿ ಕಾರ್ಯ ನಿರ್ವಹಿಸಿದನು. ಪರಮಾಣುವಿನ ಬೀಜದಲ್ಲಿ ಕಣವೊಂದರ ಚಲನೆ ಹಾಗೂ ಕಣಗಳ ಸಮಷ್ಟಿ ಚಲನೆಯ ಮಧ್ಯದ ಸಂಬಂಧವನ್ನು ನಿರ್ಧರಿಸಿ, ಇದರ ಆಧಾರದ ಮೇಲೆ ಪರಮಾಣುವಿನ ರಚನೆಯನ್ನು ವಿವರಿಸುವ ಸಿದ್ಧಾಂತವನ್ನು ಮಂಡಿಸಿದನು. ಇದಕ್ಕಾಗಿ ಅಗೆ 1974ರಲ್ಲಿ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು ರೇನ್ವಾಟರ್, ಲಿಯೋ ಜೇಮ್ಸ್ (1917-1986) 1975 Rainwater , Leo James
ಅಸಂಸಂ-ಭೌತಶಾಸ್ತ್ರ- ಪರಮಾಣುವಿನ ಎರಡು ವಿಭಿನ್ನ ಸೈದ್ಧಾಂತಿಕ ಮಾದರಿಗಳನ್ನು ಐಕ್ಯಗೊಳಿಸಿದಾತ.
ಕ್ಯಾಲ್ಟೆಕ್ನಲ್ಲಿ ಭೌತಶಾಸ್ತ್ರ ವ್ಯಾಸಂಗ ಮಾಡಿದ ರೇನ್ವಾಟರ್, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸೇರಿ, 1952ರಲ್ಲಿ ಪ್ರಾಧ್ಯಾಪಕನಾದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಅಣ್ವಸ್ತ್ರ ತಯಾರಿಕೆಯ ಮ್ಯಾನ್ಹಟ್ಟನ್ ಯೋಜನೆಯಲ್ಲಿ ಭಾಗವಹಿಸಿದ್ದನು. 1950ರ ಅವಧಿಯಲ್ಲಿ ಪರಮಾಣು ರಚನೆಯನ್ನು ಕುರಿತಾಗಿ ಎರಡು ವಿಭಿನ್ನ ಸಿದ್ಧಾಂತಗಳಿದ್ದವು. ಇವೆರಡಕ್ಕೂ ಪ್ರಾಯೋಗಿಕ ಫಲಿತಾಂಶದ ಬೆಂಬಲವಿದ್ದಿತು. ಒಂದು ಮಾದರಿಯಲ್ಲಿ ಬೈಜಿಕ ಕಣಗಳು ಸಂಕೇಂದ್ರಿತ ಶಲ್ಕಗಳಲ್ಲಿ ಜೋಡಣೆಗೊಂಡಿದ್ದರೆ ಮತ್ತೊಂದು ಮಾದರಿಯಲ್ಲಿ ಅದನ್ನು ದ್ರವದ ಹನಿಗೆ ಸಮಾನವಾಗಿ ಕಾಣಲಾಗಿದ್ದಿತು. ಆದರೆ ಕೆಲವು ಪರಮಾಣು ಬೀಜಗಳಲ್ಲಿ ವೈದ್ಯುತ್ ಕ್ರಿಯಾಶೀಲತೆ ಸಮಾಂಗೀಯವಲ್ಲವೆಂದು ಪ್ರಯೋಗಗಳು ತೋರಿಸಿದ್ದವು. ಪರಮಾಣುವಿನ ಎರಡೂ ಮಾದರಿಗಳು ಇದನ್ನು ವಿವರಿಸುವಲ್ಲಿ ವಿಫಲಗೊಂಡಿದ್ದವು. ರೇನ್ವಾಟರ್, 1950ರಲ್ಲಿ ನೀಲ್ಸ್ ಬೊಹ್ರ್ನ ಮಗನಾದ ಅಗೆ ಬೋಹ್ರ್ ಮತ್ತು ಮಾಲ್ಸನ್ ಜೊತೆಗೂಡಿ ಇವೆರಡರ ಪರಿಕಲ್ಪನೆಗಳನ್ನು ಸಮನ್ವಯಗೊಳಿಸಿದನು. ಇದು ಎಲ್ಲ ಬಗೆಯ ಪ್ರಯೋಗಗಳಫಲಿತಾಂಶಗಳಿಗೂ ಸಮರ್ಪಕವಾಗಿರುವುದನ್ನು ಸಾಬೀತುಗೊಳಿಸಿದ್ದಕ್ಕಾಗಿ ಈ ಮೂವರು 1975ರ ನೊಬೆಲ್ ಪ್ರಶಸ್ತಿ ಪಡೆದರು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಟಿಂಗ್ ಅಸಂಸಂಗಳಲಿ ಜನಿಸಿದನಾದರೂ, ಅವನು ಆರಂಭಿಕ ಶಿಕ್ಷಣ ಪಡೆದದ್ದು ಚೀನಾ ಹಾಗೂ ತೈವಾನ್ಗಳಲ್ಲಿ. ಪದವಿ ಪಡೆದದ್ದು ಮಿಷಿಗನ್ ವಿಶ್ವವಿದ್ಯಾಲಯದಿಂದ ಜೆನೆವಾದಲ್ಲಿನ ಆರ್ಗನೈಸೇಷನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ ಸಂಸ್ಥೆಯಲ್ಲಿ ತನ್ನ ಸಂಶೋಧನಾ ಜೀವನ ಪ್ರಾರಂಭಿಸಿದ ಟಿಂಗ್ 29ನೇ ವಯಸ್ಸಿನಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾದನು. ಹ್ಯಾಂಬರ್ಗ್ನಲ್ಲಿ ಜರ್ಮನಿಯ ಸಿಂಕ್ಲೋಟ್ರಾನ್ ಯೋಜನೆಯ ಮುಂದಾಳತ್ವವನ್ನು ಟಿಂಗ್ ವಹಿಸಿದ್ದನು. 1967 ರಿಂದ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಲಸ ಮಾಡಿದನು. ಬ್ರೂಕ್ಹೆವೆನ್ ನ್ಯಾಷನಲ್ ಲ್ಯಾಬೋರೇಟರಿಯಲ್ಲಿ ಟಿಂಗ್, ಬೆರಿಲಿಯಂ ಲಕ್ಷ್ಯದ ಮೇಲೆ ಪ್ರೋಟಾನ್ಗಳನ್ನು ಹಾಯಿಸಿ, ಆ ಕ್ರಿಯೆಯಲ್ಲಿ ದೀರ್ಘಾವಧಿ ಉಳಿದ ಕಣಗಳ ಅಧ್ಯಯನ ಮಾಡಿದನು. ಆಗ ಪತ್ತೆಯಾದ ಹೊಸ ಕಣವನ್ನು ಜೆ ಕಣವೆಂದು ಕರೆದನು. ಇದೇ ಕಾಲಕ್ಕೆ ಸ್ವತಂತ್ರವಾಗಿ, ಬಿ.ರಿಕ್ಟರ್ , ಸ್ಟ್ಯಾನ್ ಪೋರ್ಡ್ನಲ್ಲಿ ಈ ಕಣಗಳನ್ನು ಗುರುತಿಸಿ ಪೈ ಕಣಗಳೆಂದು ಹೆಸರಿಸಿದ್ದನು. ಈಗ ಇವು ಜೆ/ಪೈ ಕಣಗಳೆಂದು ಕರೆಯಲ್ಪಡುತ್ತವೆ. ಇದಾದ ಅಲ್ಪ ಕಾಲದಲ್ಲೇ ಈ ಕಣಗಳ ಸಂಬಂಧಿಗಳಾದ ಹೊಸ ಕಣಗಳು ದಕ್ಕಿದವು. ಟಿಂಗ್ ಹಾಗೂ ರಿಕ್ಟರ್ 1976ರಲ್ಲಿ ನೊಬೆಲ್ ಪ್ರಶಸ್ತಿ ಪಡೆದರು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ರಿಕ್ಟರ್, ಬರ್ಟನ್ (1931--) 1976 Richter , Burton
ಅಸಂಸಂ-ಭೌತಶಾಸ್ತ್ರ- ಪ್ರಯೋಗಗಳಿಂದ ಚಾರ್ಮ್ ಕ್ವಾರ್ಕ್ಗಳ ಅಸ್ತಿತ್ವವನ್ನು ಪ್ರತಿಪಾದಿಸಿದಾತ.
ರಿಕ್ಟರ್ ಮೆಸಾಚುಸೆಟ್ಸ್ ಇನ್ಸ್ಟಿಟೂಟ್ ಆಫ್ ಟೆಕ್ನಾಲಜಿಯಲ್ಲಿ ಭೌತಶಾಸ್ತ್ರದ ಪದವಿ ಪಡೆದು, ಸ್ಟ್ಯಾನ್’ಫೋರ್ಡ್ ವಿಶ್ವವಿದ್ಯಾಲಯದ ಅಧಿಕ ಚೈತನ್ಯ ಭೌತಶಾಸ್ತ್ರದ ಪ್ರಯೋಗಾಲಯ ಸೇರಿದನು. 1967ರಲ್ಲಿ ಇಲ್ಲಿಯೇ ಪ್ರಾಧ್ಯಾಪಕನಾದನು. ಅಧಿಕ ಚೈತನ್ಯದಲ್ಲಿರುವ ಪಾಸಿಟ್ರಾನ್ ಹಾಗೂ ಎಲೆಕ್ಟ್ರಾನ್ಗಳನ್ನು ಸಂಘಟಿಸಿದಾಗ ಪ್ರಾಥಮಿಕ ಕಣಗಳು ದಕ್ಕುತ್ತವೆ. ಇದಕ್ಕಾಗಿ ರಿಕ್ಟರ್ ಸ್ಟ್ಯಾನ್’ಫೋರ್ಡ್ ಪಾಸಿಟ್ರಾನ್-ಎಲೆಕ್ಟ್ರಾನ್ ಆ್ಯಕ್ಸಿಲೆರೇಟಿಂಗ್ ರಿಂಗ್ ಹೆಸರಿನ ಯಂತ್ರ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದನು. 1974ರಲ್ಲಿ ಈ ಯಂತ್ರ ಬಳಸಿ ರಿಕ್ಟರ್ ನೇತೃತ್ವದ ತಂಡ ಜೆ ಅಥವಾ ಸೈ ಹ್ಯಾಡ್ರಾನ್ಗಳನ್ನು ಪಡೆಯಿತು. ಇದು ಮೊದಲು ಗುರುತಿಸಲಾದ ಉಪಪರಮಾಣವಿಕ ಕಣ (Subatomic Particle). ಇಂತಹ ಕಣಗಳಿಗೆ ಬಹು ಅಪರೂಪದ ಗುಣಗಳಿದ್ದು ಗ್ಲಾಷೋ ಮುನ್ಸೂಚಿಸಿದ ಚಾರ್ಮ್ ಕ್ವಾರ್ಕ್ಗಳ ಅಸ್ತಿತ್ವಕ್ಕೆ ಬೆಂಬಲ ದೊರೆಯಿತು. ಇದಕ್ಕೆ ಸಂಬಂಧಿಸಿದ ಬೇರೆ ಕಣಗಳು ಅಲ್ಪಾವಧಿಯಲ್ಲೇ ಪತ್ತೆಯಾದವು. ಇವು ಕಣ ಭೌತಶಾಸ್ತ್ರದ ಸಿದ್ಧಾಂತಗಳು ಹೊಸ ದೃಷ್ಟಿ ತಳೆಯಬೇಕಾದ ಅನಿವಾರ್ಯತೆಯನ್ನು ತಂದವು. ಬ್ರೂಕ್ಹೇವೆನ್ ಪ್ರಯೋಗಾಲಯದಲ್ಲಿದ್ದ ಸ್ಯಾಮ್ಯುಯೆಲ್ ಟಿಂಗ್ ಇದೇ ಸಮಯದಲ್ಲಿ ಸ್ವತಂತ್ರವಾಗಿ ಜೆ/ಪೈ ಮಸಾನ್ಗಳನ್ನು ಪಡೆದಿದ್ದನು. 1976ರಲ್ಲಿ ರಿಕ್ಟರ್ ಹಾಗೂ ಟಿಂಗ್ ನೊಬೆಲ್ ಪ್ರಶಸ್ತಿ ಪಡೆದರು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಅ್ಯಂಡರ್ಸನ್ ಫಿಲಿಫ್ ವಾರೆನ್ (1923- ) - 1977 Anderson ,Philip Warren
ಅಸಂಸಂ- ಭೌತಶಾಸ್ತ್ರ -ಕಾಂತೀಯ ಹಾಗೂ ಕ್ರಮಭಂಗಿತ ವ್ಯವಸ್ಥೆಗಳ ಎಲೆಕ್ಟ್ರಾನ್ ರಾಚನಿಕ ಸ್ವರೂಪವನ್ನು ಅನಾವರಣಗೊಳಿಸಿದಾತ.
ಅ್ಯಂಡರ್ಸನ್ ಡಾಕ್ಟರೇಟ್ಗಾಗಿ ವ್ಯಾನ್ವ್ಲೆಕ್ ಜೊತೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. 1943-45ರ ಅವಧಿಯಲ್ಲಿ ‘ನೇವಲ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ ಅ್ಯಂಟೆನಾ ಇಂಜಿನಿಯರಿಂಗ್ ಕುರಿತಾದಂತಹ ಸಂಶೋಧನೆಗಳನ್ನು ಕೈಗೊಂಡನು. ಅ್ಯಂಡರ್ಸನ್ ವೃತ್ತಿಪರ ಜೀವನ ಬೆಲ್ ಟೆಲಿಫೆÇೀನ್ ಲ್ಯಾಬೋರೇಟರಿಯೊಂದಿಗೆ ಬಹು ದೀರ್ಘವಾಗಿ ಬೆಸಿದುಕೊಂಡಿದ್ದಿತು. ಆದರೆ 1975ರಲ್ಲಿ ಪ್ರಿನ್ಸ್ಟನ್ನಲ್ಲಿ ಪ್ರಾಧ್ಯಾಪಕನಾಗಿಯೂ ಕೆಲಸ ಮಾಡಿದನು. ಒತ್ತಡದಿಂದಾಗಿ ಅಗಲಗೊಳ್ಳುವ ರೋಹಿತ ರೇಖೆಗಳ ಬಗ್ಗೆ ಅ್ಯಂಡರ್ಸನ್ ಆಸಕ್ತಿ ವಹಿಸಿದ್ದನು. 1958ರಲ್ಲಿ ಕ್ರಮಭಂಗಿತ ಮಾಧ್ಯಮದಲ್ಲಿ ಎಲೆಕ್ಟ್ರಾನ್ ಸ್ಥಿತಿಗಳನ್ನು ಕುರಿತು ಸಂಪ್ರಬಂಧ (Thesis) ಮಂಡಿಸಿದನು. ಇದಎಂದ ಇಂತಹ ವ್ಯವಸ್ಥೆಯಲ್ಲಿ ಎಲೆಕ್ಟ್ರಾನ್ಗಳು ಒಂದು ಮಿತಿಧಾರಕ ವಲಯಕ್ಕೆ ಬದ್ಧವಾಗಿದ್ದು, ಮುಕ್ತ ಚಲನೆಯನ್ನು ಹೊಂದಿರುವುದಿಲ್ಲವೆಂದು ಸಾಧಿಸಿ ತೋರಿಸಿದನು. ಇದು ಈಗ ‘ಆ್ಯಂಡರಸನ್ ಸ್ಥಳೀಕರಣ’ ಎಂದು ಗುರುತಿಸಲ್ಫಟ್ಟಿದೆ. ಮಧ್ಯಸ್ಥಿಕೆ ವಹಿಸುವ ಪರಮಾಣುವಿನ ಉಪಸ್ಥಿತಿಯಲ್ಲಿ ಎರಡು ಕಾಂತೀಯ ಪರಮಾಣುಗಳು ಹೇಗೆ ಪರಸ್ಪರ ಸಂಪರ್ಕ ಸಾಧಿಸುತ್ತವೆಯೆಂದು, ಗಣಿತೀಯ ಮಾದರಿಯ ಮೂಲಕ ವಿವರಿಸಿದನು. 1961ರಲ್ಲಿ ಸಾಮಗ್ರಿಗಳ ಕಾಂತತ್ವಕ್ಕೆ ಕಾರಣವಾದ ಸೂಕ್ಷ್ಮ ಸ್ಥಿತಿಯನ್ನು ಕುರಿತು ಲೇಖನ ಪ್ರಕಟಿಸಿದನು. ಆ್ಯಂಡರ್ಸನ್ನ ಈ ಮಾದರಿ ಕ್ವಾಂಟಂ ಬಲವಿಜ್ಞಾನದ ಮಾದರಿಯಾಗಿರುವುದಲ್ಲದೆ, ಸ್ಥಳೀಕರಣಗೊಂಡ ವಲಯಗಳು ಹಾಗೂ ಈ ವಲಯಗಳು ಮುಕ್ತವಲಯಗಳಾಗಿ ಮಾರ್ಪಾಡಾಗುವ ಸಂದರ್ಭವನ್ನು ವಿಶದೀಕರಿಸುತ್ತದೆ. ಮಾದರಿ ಕಾಂತೀಯ ಸಾಮಾಗ್ರಿಗಳ ಕಲ್ಮಶ, ಅತಿವಾಹಕತೆ, ಅತಿಪ್ರವಾಹಿತತೆ ಸಾಧ್ಯತೆಗಳ ಅಧ್ಯಯನಕ್ಕೆ ಕುರಿತಾದಂತೆ ಅ್ಯಂಡರ್ಸನ್ ಹೀಲಿಯಂ-3ನ್ನು ಆದ್ಯಂತ ಅಧ್ಯಯನ ಮಾಡಿದನು. 1977ರಲ್ಲಿ ಅ್ಯಂಡರ್ಸನ್ ನೆವಿಲ್ ಫ್ರಾನ್ಸಿಸ್ ಮಾಟ್ ಹಾಗೂ ಜೇಮ್ಸ್ ಜೊತೆಗೆ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡನು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಜಾನ್ , (ಹ್ಯಾಸ್ ಬ್ರಾಕ್) ವ್ಯಾನ್ವ್ಲೆಕ್ (1899-1980) 1977 John , (Hasbrak) Van Vleck
ಅಸಂಸಂ ಭೌತಶಾಸ್ತ್ರ -ಕಾಂತ ವ್ಯವಸ್ಥೆಗಳ ಬಗ್ಗೆ ಆಧುನಿಕ ಸಿದ್ಧಾಂತಗಳನ್ನು ನೀಡಿದಾತ.
ವ್ಯಾನ್ವ್ಲೆಕ್ನ ತಂದೆ ಹಾಗೂ ತಾತ, ಉತ್ತಮ ಗಣಿತಶಾಸ್ತ್ರಜ್ಞರಾಗಿದ್ದರು. ವಿಸ್ಕಾನ್ಸಿಸ್, ಹಾರ್ವರ್ಡ್ಗಳಲ್ಲಿ ಶಿಕ್ಷಣ ಪೂರೈಸಿದ ವ್ಯಾನ್ವ್ಲೆಕ್ 1923ರಲ್ಲಿ ಮಿನ್ನೆಸೊಟಾ ವಿಶ್ವವಿದ್ಯಾಲಯ ಸೇರಿದನು. ನಂತರ ವಿಸ್ಕಾನ್ಸಿನ್ ಹಾಗೂ ಹಾರ್ವರ್ಡ್ ಪೀಠಗಳನ್ನಲಂಕರಿಸಿದ್ದನು. ವ್ಯಾನ್ವ್ಲೆಕ್, ಡಿರಾಕ್ನ ಕ್ವಾಂಟಂ ಬಲ ವಿಜ್ಞಾನದ ಸಾಧಕ ,ಬಾಧಕಗಳನ್ನು ಅಧ್ಯಯನ ಮಾಡಿ, ಪರಮಾಣುಗಳ ಕಾಂತೀಯ ಗುಣಗಳನ್ನು ವಿಶದೀಕರಿಸಿದನು. 1932ರಲ್ಲಿ ಥಿಯರಿ ಆಫ್ ಎಲೆಕ್ಟ್ರಿಕ್ ಅಂಡ್ ಮ್ಯಾಗ್ನಿಟಿಕ್ ಸಸೆಪ್ಟಬಿಲಿಟೀಸ್ ಪುಸ್ತಕ ಪ್ರಕಟಿಸಿದನು. ಇದರಲ್ಲಿ ಪರಮಾಣುಗಳ ಅನುಕಾಂತೀಯ ಗುಣಗಳನ್ನು ಚರ್ಚಿಸಿದ್ದನು. ತಾಪಮಾನ ಸ್ವತಂತ್ರವಾದ ಕಾಂತೀಯ ಸಂವೇದನೆ (Susceptibility) ಯನ್ನು ಈಗ ವ್ಯಾನ್ವ್ಲೆಕ್ ಅನುಕಾಂತೀಯತೆ (Paramagnetism) ಎಂದು ಕರೆಯಲಾಗುತ್ತದೆ. ವ್ಯಾನ್ವ್ಲೆಕ್ ಸ್ಪಟಿಕಗಳಲ್ಲಿನ ರಾಸಾಯನಿಕ ಬಂಧಗಳನ್ನು ಕುರಿತು ಅಧ್ಯಯನ ನಡೆಸಿ, ಸಿದ್ಧಾಂತಗಳನ್ನು ಮಂಡಿಸಿದನು. ಈ ಸಿದ್ಧಾಂತಗಳು ಲೋಹ ಸಂಯುಕ್ತ ಪರಮಾಣುಗಳ ವೈದ್ಯುತ್, ಕಾಂತೀಯ ಹಾಗೂ ರೋಹಿತದ ಗುಣ ಲಕ್ಷಣಗಳ ಮುನ್ಸೂಚನೆ ಪಡೆಯಲು ನೆರವಾಗುತ್ತವೆ. ವ್ಯಾನ್ವ್ಲೆಕ್ ಸ್ಥಳೀಯ ಮಟ್ಟದಲ್ಲಿನ ಕಾಂತೀಯ ಭ್ರಾಮ್ಯತೆಗಳು, ಎಲೆಕ್ಟ್ರಾನ್ಗಳ ಅಂತರಕ್ರಿಯೆಗೆ ಹೇಗೆ ನೆರವಾಗುತ್ತವೆಯೆಂದು ವಿವರಿಸಿದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ವ್ಯಾನ್ವ್ಲೆಕ್ ವಾತಾವರಣದಲ್ಲಿನ ನೀರು ಹಾಗೂ ಆಮ್ಲಜನಕ, ರಡಾರ್ ಸಂಜ್ಞೆಗಳನ್ನು ಹೀರಿಕೊಳ್ಳುವುದನ್ನು ತೋರಿಸಿದನು. ಸದಾ ಹಸನ್ಮುಖಿಯೂ, ಸ್ನೇಹಶೀಲನೂ ಆಗಿದ್ದ ವ್ಯಾನ್ವ್ಲೆಕ್ 1977ರಲ್ಲಿ ಫಿಲೆಫ್ವಾರೆನ್ ಆ್ಯಂಡರ್ಸನ್ ಹಾಗೂ ನೆವಿಲ್ ಫಾ್ರನ್ಸಿಸ್ ಮಾಟ್ರೊಂದಿಗೆ ನೊಬೆಲ್ ಪ್ರಶಸ್ತಿ ಪಡೆದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಮಾಟ್, ಸರ್ ನೆವಿಲ್ ಫಾ್ರನ್ಸಿಸ್ (1905--) 1977 Mott , Sir Nevill Francis
ಬ್ರಿಟನ್-ಭೌತಶಾಸ್ತ್ರ- ಕ್ರಮವಿಹೀನ ಸಾಮಾಗ್ರಿಗಳ ಎಲೆಕ್ಟ್ರಾನಿಕ್ ರಚನೆ ಅನಾವರಣಗೊಳಿಸಿದಾತ.
ಮಾಟ್ನ ತಂದೆ ತಾಯಿಗಳಿಬ್ಬರೂ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಕೆಲಸಕ್ಕಿದ್ದರು. ಮಾಟ್ ಕೇಂಬ್ರಿಜ್ನಲ್ಲಿ ಗಣಿತ ವ್ಯಾಸಂಗ ಮಾಡಿ. ಅಲ್ಲಿಯೇ ಉಪನ್ಯಾಸಕನಾಗಿ, ಫೆಲೋ ಆಗಿ ಗುರುತಿಸಿಕೊಂಡನು. ಕೆಲಕಾಲ ರುದರ್ಫೋರ್ಡ್ ಹಾಗೂ ಬೋಹ್ರ್ ಜೊತೆಗೆ ಕೆಲಸ ಮಾಡಿದನು. ಎಚ್. ಮ್ಯಾಸ್ಸೆಯ ಸಂಗಡ ಕಣಗಳ ಚದುರಿಕೆ ಕುರಿತು ಸಂಶೋಧಿಸಿ ಹೊಸ ಕ್ಷೇತ್ರವೊಂದಕ್ಕೆ ಭದ್ರ ಬುನಾದಿ ಹಾಕಿದನು. 28ನೇ ವಯಸ್ಸಿನಲ್ಲಿ ಬ್ರಾಸ್ಟಲ್ನಲ್ಲಿ ಪ್ರಾಧ್ಯಾಪಕನಾದ ಮಾಟ್, ಎಚ್.ಜೋನ್ಸ್ನ ಪ್ರಭಾವದಿಂದ ಘನಸ್ಥಿತಿ ಭೌತಶಾಸ್ತ್ರದಲ್ಲಿ ಆಸಕ್ತಿ ತಳೆದನು. ಜೇಮ್ಸ್ನೊಂದಿಗೆ ಲೋಹ ,ಮಿಶ್ತ ಲೋಹಗಳನ್ನು ಕುರಿತಾಗಿ ಮತ್ತು ಅರ್ ಡಬ್ಲ್ಯೂ .ಗರ್ನಿಯೊಂದಿಗೆ ಅಯಾನಿಕ ಸ್ಫಟಿಕಗಳ ಬಗೆಗೆ ಪ್ರಯೋಗಗಳನ್ನು ನಡೆಸಿದನು. ಈ ಪ್ರಯೋಗಗಳಿಂದ ಸಾಮಾಗ್ರಿಗಳಲ್ಲಿನ ಸ್ಥಾನ ಪಲ್ಲಟ ಹಾಗೂ ಅವುಗಳ ಸತ್ತ್ವಗಳ ಬಗೆಗೆ ಹೊಸ ವಿಚಾರಗಳು ತಿಳಿದು ಬಂದವು. ಸ್ಪಟಿಕಗಳಲ್ಲದ ಅರೆವಾಹಕಗಳ ಅರಿವಿಗೆ ಮಾಟ್ ಶ್ರಮಿಸಿದನು. ಮಾಟ್ನಿಂದಾಗಿ ಘನಸ್ಥಿತಿ ಭೌತಶಾಸ್ತ್ರ ಮತ್ತು ಸಾಮಾಗ್ರಿಗಳ ವಿಜ್ಞಾನಗಳಿಗೆ ಹೊಸ ಹುರುಪು ಬಂದಿತು. 1962ರಲ್ಲಿ ನೈಟ್ ಪದವಿಗೇರಿದ ಮಾಟ್, 1977ರ ನೊಬೆಲ್ ಪ್ರಶಸ್ತಿಯನ್ನು ಫಿಲೆಫ್ವಾರೆನ್ ಆ್ಯಂಡರ್ಸನ್ ಹಾಗೂ ಜಾನ್ ಹಾಸ್ಬ್ರಕ್ ವ್ಯಾನ್ ವ್ಲೆಕ್ರೊಂದಿಗೆ ಹಂಚಿಕೊಂಡನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಕ್ಯಾಪಿಟ್ಸ, ಪಿಯಾಟ್ರ್ ಲಿಯೋಡೋವಿಚ್ (1894-1984) 1978 Kapitsa , Piotr Leonidovitch
ರಷ್ಯಾ-ಭೌತಶಾಸ್ತ್ರ- ಅಧಿಕ ಕಾಂತ ಕ್ಷೇತ್ರ , ನಿಮ್ನ ತಾಪಮಾನಗಳ ಬಗೆಗೆ ಪ್ರಯೋಗ ನಡೆಸಿದಾತ.
ಕ್ಯಾಪಿಟ್ಸ್ನ ತಂದೆ ಹಾಗೂ ತಾತ ಇಬ್ಬರೂ ಇಂಜಿನಿಯರ್ ಆಗಿದ್ದರು. ಈಗ ಸೇಂಟ್ ಪೀಟರ್ಸ್ಬರ್ಗ್ ಎಂದು ಕರೆಯಲಾಗುವ ಆಗಿನ ಪೆಟ್ರೊಗ್ರಾಡ್ ಪಾಲಿಟೆಕ್ನಿಕ್ನಲ್ಲಿ ಕ್ಯಾಪಿಟ್ಸ ಇಂಜಿನಿಯರಿಂಗ ಪದವಿಗಳಿಸಿದನು. ಇಲ್ಲಿ ಮೂರು ವರ್ಷಗಳ ಕಾಲ ಉಪನ್ಯಾಸಕನಾಗಿದ್ದನು. 1919ರಲ್ಲಿ ಜರುಗಿದ ಕ್ರಾಂತಿ , ಆವರಿಸಿದ ಬರಗಾಲದಿಂದಾಗಿ ಕ್ಯಾಪಿಟ್ಸನ ಮಡದಿ ಮತ್ತು ಇಬ್ಬರು ಮಕ್ಕಳು ಅಸು ನೀಗಿದರು. ಇದರಿಂದ ಜುಗುಪ್ಸೆ ಹೊಂದಿದ ಕ್ಯಾಪಿಟ್ಸ , 1921ರಲ್ಲಿ ಇಂಗ್ಲೆಂಡ್ಗೆ ಹೋಗಿ ರುದರ್’ಫೋರ್ಡ್ ಸ್ಥಾಪಿಸಿದ್ದ ಕೇಂಬ್ರಿಜ್ ಲ್ಯಾಬೋರೇಟರಿಯಲ್ಲಿ ನೌಕರಿ ಗಿಟ್ಟಿಸಿದನು. ಕ್ಯಾಪಿಟ್ಸ್ ಹಾಗೂ ರುದರ್’ಫೋರ್ಡ್ ಇಬ್ಬರೂ ಪ್ರಯೋಗ ಪರಿಣಿತರಾಗಿದ್ದು ಪರಸ್ಪರ ಪ್ರಶಂಸಕರಾಗಿದ್ದರು, ಇಲ್ಲಿಯೆೀ ಕ್ಯಾಪಿಟ್ಸ ಡಾಕ್ಟರೇಟ್ ಪೂರ್ಣಗೊಳಿಸಿದನು. ಅಧಿಕ ಕಾಂತ ಕ್ಷೇತ್ರಗಳನ್ನು ಪಡೆಯುವ ಬಗ್ಗೆ ಕ್ಯಾಪಿಟ್ಸ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದನು. 0.01 ಸೆಕೆಂಡಿಗೂ ಅಲ್ಪಾವಧಿಗೆ, 10000 ಆ್ಯಂಪಿರೀಗೂ ಮೀರಿದ ವಿದ್ಯುತ್ ಪ್ರವಾಹ ಹರಿಸಿ, 1924ರ ವೇಳೆಗೆ ಕ್ಯಾಪಿಟ್ಸ ಅತ್ಯಧಿಕ ಕಾಂತತ್ವ ಗಳಿಸುವಲ್ಲಿ ಯಶಸ್ವಿಯಾದನು. ಲೋಹಗಳು ಅಧಿಕ ಕಾಂತಕ್ಷೇತ್ರದಲ್ಲಿರುವಾಗಲೂ, ಅಲ್ಪ ತಾಪಮಾನವಿರುವಾಗಲೂ, ವೈದ್ಯುತ್ ರೋಧತ್ವವನ್ನು ಹೆಚ್ಚಿಸಿಕೊಳ್ಳುತ್ತವೆ. ಈ ಪ್ರಭಾವ ಬಳಸಿಕೊಂಡು, ಹೀಲಿಯಂ ದ್ರವೀಕರಣಕ್ಕೆ ಕ್ಯಾಪಿಟ್ಸ, ಮುಂದಾದನು. ಇದಕ್ಕಾಗಿ ಅವನಿಗೆ ಹೊಸ ಪ್ರಯೋಗಾಲಯ 1933ರಲ್ಲಿ ನಿರ್ಮಿಸಿಕೊಡಲಾಯಿತು. 1934ರಲ್ಲಿ ಹೀಲಿಯಂ ದ್ರವ, ತಾಮ್ರಕ್ಕಿಂತಲೂ ಉತ್ತಮ ವಾಹಕವಾಗಿರುವುದೆಂದು ಕ್ಯಾಪಿಟ್ಸ ತೋರಿಸಿದನು. ಹೀಲಿಯಂ 2.2ಕೆಲ್ವಿನ್ ತಾಪಮಾನದಲ್ಲಿ ಎಲ್ಲಾ ಬಗೆಯ ಸ್ನಿಗ್ದತೆಯನ್ನು (Viscosity) ಕಳೆದುಕೊಳ್ಳುತ್ತದೆ. ಕ್ಯಾಪಿಟ್ಸನ ಸ್ನೇಹಿತನಾಗಿದ್ದ ಲಂಡಾವ್ ಇದಕ್ಕೆ ಮುಂದೆ ಸೈದ್ಧಾಂತಿಕ ಕಾರಣಗಳನ್ನು ನೀಡಿದನು. 1934ರಲಿ ಕ್ಯಾಪಿಟ್ಸ, ತನ್ನ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ರಷ್ಯಾಕ್ಕೆ ತೆರಳಿದನು. ಅವನು ಯುರೋಪಿಗೆ ಮರಳಲು ರಷ್ಯಾ ಸರ್ಕಾರ ಅನುಮತಿ ನೀಡಲಿಲ್ಲ. ಇದನ್ನು ಯುರೋಪಿನ ಸಂಘ, ಸಂಸ್ಥೆಗಳು ತೀವ್ರವಾಗಿ ಪ್ರತಿಭಟಿಸಿದವು. ಆದರೆ ಕ್ಯಾಪಿಟ್ಸ ಪ್ರಾವ್ಡ್ ಪತ್ರಿಕೆಯ ವರದಿ ಓದಿ ವಿಸ್ಮಯಗೊಂಡನು. ಅದರಲ್ಲಿ ಮಾಸ್ಕೋದ ಬಳಿ ಹೊಸದಾಗಿ ನಿರ್ಮಾಣಗೊಂಡಿದ್ದ ಭೌತಿಕ ಸಮಸ್ಯೆಗಳ ಪರಿಹಾರ ಸಂಸ್ಥೆಯ ನಿರ್ದೇಶಕನಾಗಿ ಕ್ಯಾಪಿಟ್ಸನನ್ನು ನೇಮಿಸಲಾಗಿದ್ದಿತು. ಕೇಂಬ್ರಿಜ್ನಿಂದ ಕ್ಯಾಪಿಟ್ಸ ಬಳಸುತ್ತಿದ್ದ ವ್ಶೆಜ್ಞಾನಿಕ ಉಪಕರಣಗಳನ್ನು ಮಾಸ್ಕೋಗೆ ತರಿಸಲಾಯಿತು. ಕ್ಯಾಪಿಟ್ಸನ ಸ್ನೇಹಿತ ಲಂಡಾವ್ನನ್ನು ದೇಶದ್ರೋಹದ ಅಪರಾಧದಮೇಲೆ ಬಂಧಿಸಲಾಯಿತು. ಕ್ಯಾಪಿಟ್ಸ ಇದಕ್ಕೆ ಉಗ್ರ ಪ್ರತಿಭಟನೆ ತೋರಿದನು,. ನಾನಾ ಬಗೆಯ ಬೇರೆ ಕಾರಣಗಳಿಂದ ಲಂಡಾವ್ ಗಲ್ಲಿನ ಶಿಕ್ಷೆಗೊಳಗಾಗಿ ಪಾರಾದನು. ನಂತರ ಅದರಿಂದ 1939ರಿಂದ ಕ್ಯಾಪಿಟ್ಸ ದ್ರವೀಕೃತ ಗಾಳಿ, ಆಮ್ಲಜನಕದ ಬಗೆಗೆ ಸಂಶೋಧಿಸಿ, ರಷ್ಯಾದ ಉಕ್ಕಿನ ತಯಾರಿಕೆಯ ಹೆಚ್ಚಳಕ್ಕೆ ನೆರವಾದನು. 1946ರಲ್ಲಿ ಕ್ಯಾಪಿಟ್ಸ, ಗುಪ್ತಚಾರ ವಿಭಾಗದ ಮುಖ್ಯಸ್ಥನಾಗಿದ್ದ ಬೆರಿಯರ್ನ ಅಸಾಮರ್ಥ್ಯವನ್ನು ಉಲ್ಲೇಖಿಸಿ ಸ್ಟ್ಯಾಲಿನ್ಗೆ ಪತ್ರ ಬರೆದನು. ಇದರಿಂದಾಗಿ ಕ್ಯಾಪಿಟ್ಸ ಗೃಹ ಬಂಧನಕ್ಕೊಳಗಾಗಿ , ಅಲ್ಲಿಯೆೀ ತನ್ನ ಸಂಶೋಧನೆ ಮುಂದುವರೆಸಿದನು. ಇದಾದ ಎಂಟು ವರ್ಷಗಳ ನಂತರ ಸ್ಟ್ಯಾಲಿನ್ ಮರಣ ಹೊಂದಿದನು. ಬೆರಿಯರ್ಗೆ ಮರಣ ದಂಡನೆ ವಿಧಿಸಲಾಯಿತು. ಆಗ ಕ್ಯಾಪಿಟ್ಸ ಗೃಹ ಬಂಧನದಿಂದ ಬಿಡುಗಡೆಗೊಂಡು , ರಾಯಲ್ ಸೊಸೈಟಿಯ ಫೆಲೋ ಆಗಿ ನೇಮಕಗೊಂಡನು. 1978ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ವಿಲ್ಸನ್, ರಾಬರ್ಟ್ ವುಡ್ರೋ (1936--) 1978 Wilson , Robert Woodrow
ಅಸಂಸಂ-ಭೌತಶಾಸ್ತ್ರ- ವಿಶ್ವಾತ್ಮಕವಾದ ಸೂಕ್ಷ್ಮ ತರಂಗಾಂತರ ಹಿನ್ನೆಲೆ ವಿಕಿರಣದ ಸಹ ಅನಾವರಣಕಾರ.
ವಿಲ್ಸನ್, ರೈಸ್ ವಿಶ್ವವಿದ್ಯಾಲಯ, ಹೌಸ್ಟನ್, ಕ್ಯಾಲ್ಟೆಕ್ನಲ್ಲಿ ತನ್ನ ಶಿಕ್ಷಣ ಪೂರೈಸಿದನು. ನಂತರ ಬೆಲ್ ಪ್ರಯೋಗಾಲಯಗಳಲ್ಲಿದ್ದನು. ಮುಂದೆ 1976ರಲ್ಲಿ ನ್ಯೂಜೆರ್ಸಿಯ ಹೋಮ್ಡೆಲ್ನ ರೇಡಿಯೋ ಭೌತಶಾಸ್ತ್ರ ವಿಭಾಗದ ಸಂಶೋಧನಾ ಮುಖ್ಯಸ್ಥನಾದನು. ಬೆಲ್ ಪ್ರಯೋಗಾಲಯದಲ್ಲಿರುವಾಗ, ವಿಲ್ಸನ್, ಪೆಂಜಿಯಾಸ್ ಜೊತೆಗೆ, ಉಪಗ್ರಹಗಳ ಸಂಪರ್ಕಕ್ಕಾಗಿ ನಿರ್ಮಿಸಲಾಗಿದ್ದ, ಬೃಹತ್ ರೇಡಿಯೋ ದೂರದರ್ಶಕಗಳನ್ನು ಬಳಸಿ ಪ್ರಯೋಗಗಳನ್ನು ಹಮ್ಮಿಕೊಂಡನು. ಇವರು 1964ರಲ್ಲಿ ಎಲ್ಲಾ ದಿಕ್ಕುಗಳಲ್ಲಿ ಒಂದೇ ರೀತಿಯಲ್ಲಿ ಒಂದೇ ತೀವ್ರತೆಯಲ್ಲಿರುವ ವಿಕಿರಣದ ಹಿನ್ನೆಲೆಯನ್ನು ಗುರುತಿಸಿದರು. ವಿಕಿರಣದ ಚೈತನ್ಯ ವಿತರಣೆ 3.5 ಕೆಲ್ವಿನ್ ತಾಪಮಾನದಲ್ಲಿರುವ ಕಪ್ಪುಕಾಯಕ್ಕೆ ಸಮನಾಗಿದ್ದಿತು. ಡಿಕ್ ಹಾಗೂ ಪಿ.ಜೆ.ಇ ಪೀಬಲ್ಸ್ ಈ ವಿಕಿರಣ ಮಹಾಬಾಜಣೆಯ (Big Bang) ಉಳಿಕೆಯೆಂದು ಹೇಳಿದರು. ಈ ಹಿನ್ನೆಲೆ ವಿಕಿರಣದ ಅಸ್ತಿತ್ವವನ್ನು ಗ್ಯಾಮೊವ್, ಆಲ್ಫರ್ ಹಾಗೂ ಆರ್.ಸಿ.ಹೆರ್ಮಾನ್ ಮುನ್ಸೂಚಿಸಿದ್ದರು. ವಿಲ್ಸನ್ ಹಾಗೂ ಪೆಂಜಿಯಾಸ್ 1978ರ ನೊಬೆಲ್ ಪ್ರಶಸ್ತಿ ಪಡೆದರು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಪೆಂಜಿಯಾಸ್, ಅರ್ನೋ ಅ್ಯಲನ್ (1933--) 1978 Penzias , Arno Allan
ಅಸಂಸಂ-ಖಗೋಳಶಾಸ್ತ್ರ- 3ಕೆ ಸೂಕ್ಷ್ಮ ತರಂಗಗಳ ಹಿನ್ನೆಲೆ ವಿಕಿರಣತೆ ಅನಾವರಣಗೊಳಿಸಿದಾತ.
ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ಅಸಂಸಂಗಳಿಗೆ ಪಲಾಯನಗೊಂಡ ಕುಟುಂಬದಲ್ಲಿ ಪೆಂಜಿಯಾಸ್ ಜನಿಸಿದನು. ನ್ಯೂಯಾರ್ಕ್ನಲ್ಲಿ ವ್ಯಾಸಂಗ ಮಾಡಿದ ಪೆಂಜಿಯಾಸ್ 1961ರಲ್ಲಿ ಬೆಲ್ ಲ್ಯಾಬ್ಗೆ ಸೇರಿದನು. ಮಹಾಬಾಜಣೆ (Big Bang) ವಾದದ ಪ್ರಕಾರ ಪರಮಾದಿ ಪರಮಾಣು ಅಸ್ಫೋಟಗೊಂಡು , ಈ ವಿಶ್ವದ ಉಗಮ ಪ್ರಾರಂಭವಾಗಿದೆ,. ಇದರ ಆಧಾರದ ಮೇಲೆ 1948ರಲ್ಲಿ ಗ್ಯಾಮೋವ್, ಆಲ್ಫರ್, ಹಾಗೂ ಆರ್.ಹೆರ್ಮಾನ್, ಇಂತಹ ಮಹಾಬಾಜಣೆಯಾದಾಗ ಉದಿಸಿದ ವಿಕಿರಣ, ವಿಶ್ವದಾದ್ಯಂತ ಹರಡಿದ್ದು, ಕಾಲಾನುಕ್ರಮೇಣ ಇದು ತಂಪಾಗಿ, ಸರಿ ಸುಮಾರು 5ಕೆ ತಾಪಮಾನದಲ್ಲಿರಬಹುದೆಂದು ಸೂಚಿಸಿದರು. 1964ರಲ್ಲಿ ಡಿಕೆ ಹಾಗೂ ಪಿ.ಜೆ.ಪಿಬ್ಲ್ಸ್ ಇವರ ವಾದವನ್ನು ವಿಸ್ತರಿಸಿದರು. ಇದೇ ಸಮಯದಲ್ಲಿ ಇವರಿಗರಿವಿಲ್ಲದಂತೆ ಪೆಂಜಿಯಾಸ್ ಹಾಗೂ ಆರ್.ಡಬ್ಲ್ಯು.ವಿಲ್ಸನ್ ಬೆಲ್ ಪ್ರಯೋಗಾಲಯದ ಯೋಜನೆಯೊಂದರಲ್ಲಿ ನ್ಯೂಜೆರ್ಸಿಯಲ್ಲಿ ಸ್ಥಾಪಿಸಿದ್ದ 6ಮೀ ವ್ಯಾಸದ ರೇಡಿಯೋ ದೂರದರ್ಶಕದ ಮೂಲಕ ಆಕಾಶಗಂಗೆಯನ್ನು ಜಾಲಾಡುತ್ತಿದ್ದರು. ಹೀಗಿರುವಾಗ 7 ಸೆಂ ಮೀ. ತರಂಗಾಂತರದಲ್ಲಿ (Wave Length) ಅವರಿಗೆ ಭಾರಿ ಬಾಹ್ಯ ಆಡಚಣೆಗಳುಂಟಾದವು. ಇವುಗಳಿಗೆ ಯಾವುದೇ ಭೂಮೂಲವಾದ ಆಕರವನ್ನು ಗುರುತಿಸಲಾಗಲಿಲ್ಲ,. ಈ ತರಂಗ ಸಂಕೇತಗಳು ಎಲ್ಲ ದಿಶೆಗಳಿಂದಲೂ ಒಂದೇ ಬಗೆಯ ಸಾಮಥ್ರ್ಯ ಹೊಂದಿದ್ದು, ಕಪ್ಪು ಕಾಯವೊಂದಎಂದ ಹೊಮ್ಮುವ 3.5ಕೆ ತಾಪಮಾನದ ವಿಕಿರಣಗಳಿಗೆ ಸಮವಾಗಿದ್ದವು. ಈ ಅನಾವರಣದಿಂದ ಮಹಾಬಾಜಣೆ ಸಿದ್ಧಾಂತಕ್ಕೆ ಪ್ರಬಲವಾದ ಬಾಹ್ಯ ಸಾಕ್ಷಿ ದಕ್ಕಿದಂತಾಯಿತು. ಪೆಂಜಿಯಾಸ್ ಹಾಗೂ ವಿಲ್ಸನ್, 1978ರ ನೊಬೆಲ್ ಪ್ರಶಸ್ತಿ ಗಳಿಸಿದರು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಪಾಕಿಸ್ತಾನ-ಸೈದ್ಧಾಂತಿಕ ಭೌತಶಾಸ್ತ್ರ- ಕ್ಷೀಣ ಬೈಜಿಕ ಬಲ ಹಾಗೂ ವೈದ್ಯುತ್ ಕಾಂತೀಯತೆಗಳ ಐಕ್ಯ ಸಿದ್ಧಾಂತ ಅಭಿವೃದ್ಧಿಗೊಳಿಸಿದಾತ.
ಅಬ್ದಸ್ ಸಲಾಂ, ಈಗಿನ ಪಾಕಿಸ್ತಾನದಲ್ಲಿರುವ ಜಾಂಗ್ ಎಂಬ ಬಹು ಹಿಂದುಳಿದ ಹಳ್ಳಿಯಲ್ಲಿ ಜನಿಸಿದನು. ಅಬ್ಬಸ್ನ ತಂದೆ, ಶಿಕ್ಷಕನಾಗಿದ್ದು ಶೈಕ್ಷಣಿಕವಾಗಿ ಬಹು ಹಿಂದುಳಿದಿದ್ದ ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದನು. ಮೆಟ್ರಿಕ್ಯುಲೇಷನ ಪರೀಕ್ಷೆಯಲ್ಲಿ ಇಡೀ ಪಂಜಾಬ್ ಪ್ರಾಂತ್ಯಕ್ಕೆ ಮೊದಲನೆಯನಾಗಿ, ದಾಖಲೆ ಅಂಕಗಳಿಸಿದ ಅಬ್ದಸ್ ಲಾಹೋರ್ನಿಂದ ಸೈಕಲ್ನಲ್ಲಿ ತನ್ನ ಊರಿಗೆ ಬಂದಾಗ, ಇಡೀ ಊರಿಗೆ ಊರೇ ಅವನನ್ನು ಸ್ವಾಗತಿಸಿತು. ವಿದ್ಯಾರ್ಥಿ ವೇತನ ಗಳಿಸಿದ ಅಬ್ದಸ್ ಪಂಜಾಬ್ ವಿಶ್ವವಿದ್ಯಾಲಯದಿಂದ 1946ರಲ್ಲಿ ಎಂ.ಎ ಪದವಿ ಪೂರ್ಣಗೊಳಿಸಿದನು. ಇದೇ ವರ್ಷ ದಕ್ಕಿದ ಅನುದಾನದಿಂದಾಗಿ ಕೇಂಬ್ರಿಜ್ನ ಸೇಂಟ್ ಜಾನ್ ಕಾಲೇಜ್ ಸೇರಿದನು. ಇಲ್ಲಿ ಗಣಿತ ಹಾಗೂ ಭೌತಶಾಸ್ತ್ರಗಳೆರಡರಲ್ಲಿ ಅತ್ಯಧಿಕ ಅಂಕ ಗಳಿಸಿ ತೇರ್ಗಡೆ ಹೊಂದಿದನು. 1950ರಲ್ಲಿ ಡಾಕ್ಟರೇಟ್ ಅಧ್ಯಯನಕ್ಕೆ ಮುಂಚೆ ಸಿದ್ಧಪಡಿಸಿದ ಲೇಖನಕ್ಕಾಗಿ ಸ್ಮಿತ್ ಪ್ರಶಸ್ತಿ ಗಳಿಸಿದನು. 1951ರಲ್ಲಿ ಕೇಂಬ್ರಿಜ್ನಿಂದ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಪದವಿ ಗಳಿಸಿದನು. 1951ರಲ್ಲಿ ಪಾಕಿಸ್ತಾನಕ್ಕೆ ಮರಳಿದ ಅಬ್ದಸ್, ಲಾಹೋರ್ನ ಸರ್ಕಾರಿ ಕಾಲೇಜಿನಲ್ಲಿ ಗಣಿತದ ಅಧ್ಯಾಪಕನಾದನು. 1952 ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥನಾದನು ಪಾಕಿಸ್ತಾನದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕೆಂದು ಲಂಡನ್ನಿಂದ ತಾಯ್ನಾಡಿಗೆ ಬಂದಿದ್ದ ಅಬ್ದಸ್ಗೆ ಅತ್ಯಲ್ಪ ಕಾಲದಲ್ಲೇ ಭ್ರಮ ನಿರಸನವಾಯಿತು. ಅಭಿವೃದ್ಧಿಶೀಲ ದೇಶಗಳ ಪ್ರತಿಭಾವಂತರಿಗೆ ಅವಕಾಶಗಳು ಅಲಭ್ಯವಾಗಿರುವುದನ್ನು ಮನಗಂಡ ಅಬ್ಬಸ್ ಮುಂದೆ ಅವರ ನೆರವಿಗಾಗಿ ಟ್ರಸ್ಟೆಯಲ್ಲಿ ಐಸಿಟಿಪಿ ಸಂಸ್ಥೆ ಸ್ಥಾಪಿಸಿದನು. 1954ರಲ್ಲಿ ಕೇಂಬ್ರಿಜ್ಗೆ ಹೋಗಿ ಅಲ್ಲಿ ಪ್ರಾಧ್ಯಾಪಕನಾದನು. ಆದರೆ ಅಬ್ದಸ್ಗೆ ತಾಯ್ನಾಡಿನ ಸೆಳೆತ ಬಹುವಾಗಿದ್ದಿತು. ಆದ್ದರಿಂದ ಪಾಕಿಸ್ತಾನದ ವೈಜ್ಞಾನಿಕ ನೀತಿ ನಿಯಮಗಳ ರೂಪಿಸಿಕೆಯಲ್ಲಿ ಅಬ್ದಸ್ ಪಾತ್ರ ಗಣನೀಯ. 1954 ರಿಂದ 1974 ರವರೆಗೆ ಅಬ್ದಸ್ ಪಾಕಿಸ್ತಾನದ ಅಧ್ಯಕ್ಷರ ಪ್ರಧಾನ ವೈಜ್ಞಾನಿಕ ಸಲಹೆಗಾರನಾಗಿದ್ದನು. ನಲವತ್ತು ವರ್ಷಗಳಿಗೂ ಅಧಿಕ ಕಾಲದಿಂದ ಮೂಲ ಕಣಗಳ ಸಂಶೋಧನೆಯಲ್ಲಿ ಅಬ್ದಸ್ ಸಲಾಂದು ಜಗದ್ವಿಖ್ಯಾತ ಹೆಸರು. ಈ ವಿಶ್ವದಲ್ಲಿ ಗುರುತ್ವ, ವೈದ್ಯುತ್ ಕಾಂತೀಯತೆ, ಪ್ರಬಲ ಹಾಗೂ ಕ್ಷೀಣ ಬೈಜಿಕವೆಂಬ ನಾಲ್ಕು ಬಗೆಯ ಬಲಗಳಿವೆ. ಪ್ರಬಲ ಹಾಗೂ ಕ್ಷೀಣ ಬಲಗಳು ಪರಮಾಣುವಿನ ಬೀಜದ ಸನಿಹ ಮಾತ್ರ ಪ್ರಭಾವಶಾಲಿಯಾಗಿರುತ್ತವೆ. ಸಲಾಂ ಕ್ಷೀಣ ಬೈಜಿಕ ಬಲ (Weak nuclear force) ಹಾಗೂ ವೈದ್ಯುತ್ಕಾಂತೀಯ ಬಲಗಳ ಸಂಬಂಧವನ್ನು ವಿವರಿಸಿದನು. ವೀಯ್ನ್ಬರ್ಗ್ ಹಾಗೂ ಗ್ಲಾಷೋ ಸ್ವತಂತ್ರವಾಗಿ ಇದೇ ವಿವರಣೆ ನೀಡಿದರು. ಈ ಮೂವರು 1979ರ ನೊಬೆಲ್ ಪ್ರಶಸ್ತಿ ಪಡೆದರು. ಇವರ ಸಿದ್ಧಾಂತ ತಟಸ್ಥ ಪ್ರವಾಹಗಳ ಮುನ್ಸೂಚನೆ ನೀಡಿದ್ದಿತು. 1913ರಲ್ಲಿ ಇದು ಪ್ರಯೋಗಗಳಿಂದ ಖಚಿತಗೊಂಡಿತು. ಬಿಡುವು, ರಜೆ, ವಿಶ್ರಾಂತಿ, ಮನರಂಜನೆ ಅಬ್ಬಾಸ್ ದಿನಚರಿಯಿಂದ ದೂರ. ವೈಜ್ಞಾನಿಕ ಚಿಂತನೆ, ಪರಿಶ್ರಮಗಳೇ ಆತನ ಉಸಿರು ಜೀವಾಳ. ಕಣ ಭೌತಶಾಸ್ತ್ರದಲ್ಲಿ ಅಬ್ಬಸ್ ಸಲಾಂನ ಸಾಧನೆಗಾಗಿ 1979ರಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸ್ವಯಂಪರಿಶ್ರಮ, ಆಸಕ್ತಿಗಳಿಂದ ಅಬ್ದಸ್ ಸಂಸ್ಕೃತದಲ್ಲಿ ಪಾಂಡಿತ್ಯ ಸಂಪಾದಿಸಿದ್ದನು. ಏಕಂ ಸತ್ ವಿಪ್ರಾ ಬಹುಧಾ ವದಂತಿ- ಸತ್ಯವೊಂದೇ ಬಲ್ಲವರು ಬಹು ಬಗೆಯಲ್ಲಿ ಕಾಣುತ್ತ್ತಾರೆ -ಎಂಬ ಉಕ್ತಿ ಅಬ್ದಸ್ಗೆ ಬಹು ಮೆಚ್ಚಿಗೆಯಾಗಿದ್ದಿತು. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಗ್ಲಾಷೋ, ಷೆಲ್ಡಾನ್ ಲೀ (1932--) 1979 gLASHOW SHELDON LEE
ಅಸಂಸಂ-ಭೌತಶಾಸ್ತ್ರ- ವೈದ್ಯುತ್ ಕಾಂತತ್ವ ಮತ್ತು ಕ್ಷೀಣ ಬೈಜಿಕ ಅಂತಕ್ರಿಯೆಗಳನ್ನು ಒಗ್ಗೂಡಿಸಿ ಸಮಗ್ರಗೊಳಿಸಿದಾತ.
ಗ್ಲಾಷೋ ಕಾರ್ನೆಲ್, ಹಾರ್ವರ್ಡ್ನಲ್ಲಿ ವಿದ್ಯಾಭ್ಯಾಸ ಮಾಡಿ, ಜೀನಿವಾದಲ್ಲಿರುವ ಯುರೋಪಿಯನ್ ಆರ್ಗಾನೈಸೇಷನ್ ಫಾರ್’ ನ್ಯೂಕ್ಲಿಯರ್ ರಿಸರ್ಚ್ ಮತ್ತು ಬೊಹ್ರ್ ಸಂಸ್ಥೆಗಳಲ್ಲಿ ಕೆಲಸ ಮಾಡಿದನು. 1967 ರಲ್ಲಿ ಹಾರ್ವರ್ಡ್ಗೆ ಮರಳಿ ಪ್ರಾಧ್ಯಾಪಕನಾದನು. ಹಾರ್ವರ್ಡ್ನಲ್ಲಿರುವಾಗ ಗ್ಲಾಷೋ,ವೈದ್ಯುತ್ ಕಾಂತತ್ವ ಮತ್ತು ಕ್ಷೀಣ ಅಂತಕ್ರಿಯೆಗಳ (Weak Interactions) ಸಂಬಂಧ ತಿಳಿಸುವ ಗಣಿತದ ಮಾದರಿಗಳನ್ನು ಮೊದಲಿಗೆ ರೂಪಿಸಿದನು. “ವೀಯ್ನ್ಬರ್ಗ್ ಮತ್ತು ಅಬ್ಬಸ್ ಸಲಾಂ, ಇದನ್ನು ಮುಂದುವರೆಸಿ ಲೆಪ್ಟಾನ್ಸ್ (ಎಲೆಕ್ಟ್ರಾನ್ ಮತ್ತು ನ್ಯೂಟ್ರಿನೋ) ಕಣಗಳಿಗೆ ಸಮರ್ಪಕವಾಗಿ ಅನ್ವಯಿಸಿದರು. ಗ್ಲಾಷೋ ಇವರ ಸಿದ್ಧಾಂತವನ್ನು, ಇನ್ನು ಮುಂದುವರೆಸಿ, ಮೂಲಕಣಗಳನ್ನು ವಿವರಿಸುವ ‘ಚಾರ್ಮ್’ ಎಂದು ಕರೆಯಲಾಗುತ್ತಿರುವ ಹೊಸ ಲಕ್ಷಣಗಳನ್ನು ಸೇರಿಸಿದನು. ‘ಚಾರ್ಮ್’ ಗುಣ ಲಕ್ಷಣದಿಂದ ಬೇರಿಯಾನ್ಸ್, ಮೆಸಾನ್ಸ್ ಕಣಗಳನ್ನು ವಿವರಿಸುವುದು ಸಾಧ್ಯವಾಯಿತು. ಗೆಲ್ಮನ್. ಮೂಲಕಣಗಳನ್ನು ಕ್ವಾರ್ಕ್ ಎನ್ನುವ ಕಣಗಳಿಂದಾಗಿದೆಯೆಂಬ ಸಿದ್ಧಾಂತ ಮಂಡಿಸಿದ್ದನು. ಗ್ಲಾಷೋ ,ಕ್ವಾರ್ಕ್ಗಳು ಸಂಖ್ಯೆಯಲ್ಲಿ ನಾಲ್ಕು ಇರಬೇಕೆಂದು ತಿಳಿಸಿದನು. ಈ ಆಧಾರದ ಮೇಲೆ ಮೂಲ ಕಣಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಜೆ ಅಥವಾ ಸೈ ಎಂದು ಕರೆಯಲಾಗುವ ಕಣವನ್ನು 1974ರಲ್ಲಿ ಟಿಂಗ್ ಮತ್ತು ರಿಕ್ಟರ್ ಪತ್ತೆ ಹಚ್ಚಿದರು. ಗ್ಲಾಷೋ ಸಿದ್ಧಾಂತ ಮೂಲಕಣಗಳ ಅರಿವಿನತ್ತ ಇಟ್ಟ ಮಹತ್ತರ ಹೆಜ್ಜೆಯೆಂದು ದಾಖಲಾಗಿದೆಯಲ್ಲದೆ. ಅದಕ್ಕಾಗಿ 1979ರ ನೊಬೆಲ್ ಪ್ರಶಸ್ತಿ ಗ್ಲಾಷೋಗೆ ಸಂದಿದೆ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ವೀಯ್ನ್ಬರ್ಗ್, ಸ್ಟೀವೆನ್ (1933--) 1979 Weinberg , Steven
ಅಸಂಸಂ-ಭೌತಶಾಸ್ತ್ರ- ವೈದ್ಯುತ್ ಕಾಂತೀಯ ಮತ್ತು ದುರ್ಬಲ ಬೈಜಿಕ ಬಲಗಳ ಐಕ್ಯತಾ ಸಿದ್ಧಾಂತ ನೀಡಿದಾತ.
ವೀಯ್ನ್ಬರ್ಗ್ನ ತಂದೆ ನ್ಯೂಯಾರ್ಕ್ನ ನ್ಯಾಯಾಲಯದಲ್ಲಿ ಬೆರಳಚ್ಚುಗಾರನಾಗಿದ್ದನು. ಕಾರ್ನೆಲ್ ಹಾಗೂ ಪ್ರಿನ್ಸ್’ಟನ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪೂರೈಸಿದ ವೀಯ್ನ್ಬರ್ಗ್ ಬರ್ಕ್ಲಿ, ಎಂಐಟಿಗಳಲ್ಲಿ ವೃತ್ತಿ ಜೀವನ ಸಾಗಿಸಿದನು. 1986ರಲ್ಲಿ ಆಸ್ಟಿನ್ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದನು. 1967ರಲ್ಲಿ ವೀಯ್ನ್ಬರ್ಗ್ ಪರಾಮರ್ಶನ ಬದಲಾವಣೆಗೆಗೆ ಸಂಬಂಧಿಸಿದ ಸಮಸ್ಯೆಯ ಅಧ್ಯಯನ ಪ್ರಾರಂಭಿಸಿದನು. ವೈದ್ಯುತ್ ಕಾಂತೀಯ ಹಾಗೂ ಶೈಥಿಲ್ಯಕ್ಕೆ ಕಾರಣವಾದ ಕ್ಷೀಣ ಬೈಜಿಕ ಬಲಗಳ ಮದ್ಯದಲ್ಲಿ ನೂರು ಕೋಟಿಯಷ್ಟು ವ್ಯತ್ಯಾಸವಿದೆ. ವೀಯ್ನ್ಬರ್ಗ್ ನೀಡಿದ ಸಿದ್ಧಾಂತದಲ್ಲಿ ಇವೆರಡರ ಮಧ್ಯೆ ಸಂಬಂಧವನ್ನು ಸ್ಪಷ್ಟಗೊಳಿಸಲಾಯಿತು. ಈ ಸಿದ್ಧಾಂತ ಭಾರವಾದ ಅವಿಷ್ಟರಹಿತ ಕಣ Z0 ಬೋಸಾನ್ ವಿನಿಮಯಗೊಂಡು ಕಣಗಳ ಮಧ್ಯದಲ್ಲಿ ಉಗಮವಾಗುವ ಆಕರ್ಷಕ ಬಲವನ್ನು ಇದು ಮುನ್ಸ್ಸೂಚಿಸಿತು. ಇದು ತಟಸ್ಥ ಪ್ರವಾಹಗಳ ಮುನ್ಸೂಚನೆ ನೀಡಿತು. ಈ ಕಣ, ಮುಕ್ತವಾಗಿರುವಾಗ ಅತ್ಯಲ್ಪ ಆಯಸ್ಸನ್ನು ಹೊಂದಿರುತ್ತದೆ. ಇಂತಹ ಕಣವನ್ನು 1983ರಲ್ಲಿ ಜೀನೇವಾದಲ್ಲಿನ ಸಿ.ಎ.ಅರ್.ಎನ್ ಪ್ರಯೋಗಾಲಯದಲ್ಲಿ ಪ್ರೋಟಾನ್-ಪ್ರತಿ ಕಣಗಳ ತಾಡನದಿಂದ ಪಡೆಯಲಾಯಿತು,. ಇದು ವೀಯ್ನ್ಬರ್ಗ್ ಸಿದ್ಧಾಂತಗಳಿಗೆ ಪ್ರಬಲ ಸಾಕ್ಷಾಯೊದಗಿಸಿತು. ಇಂತಹುದೇ ಸಿದ್ಧಾಂತವನ್ನು ಪಾಕಿಸ್ತಾನದ ವಿಜ್ಞಾನಿ ಅಬ್ದಸ್ ಸಲಾಂ ಸಹ ನೀಡಿದನು. ಆದುದರಿಂದ ಇದನ್ನು ವೀಯ್ನ್ಬರ್ಗ್ ಸಲಾಂ ಸಿದ್ಧಾಂತವೆಂದು ಕರೆಯಲಾಗುತ್ತಿದೆ. ಗ್ಲಾಷೋನಿಂದ ಈ ಸಿದ್ಧಾಂತ ಪರಿಪೂರ್ಣಗೊಂಡಿತು. 1979ರಲ್ಲಿ ವೀಯ್ನ್ಬರ್ಗ್, ಗ್ಲಾಷೋ ಹಾಗೂ ಸಲಾಂ ನೊಬೆಲ್ ಪ್ರಶಸ್ತಿ ಪಡೆದರು. ವೀಯ್ನ್ಬರ್ಗ್ ವಿಶ್ವ ಉಗಮ ಕುರಿತು ಬರೆದು 1979ರಲ್ಲಿ ಪ್ರಕಟಿಸಿದ ದಿಫಸ್ಟ್ ಥ್ರೀ ಮಿನಿಟ್ಸ್ ಜಗತ್ಪ್ರಸಿದ್ದ ಕೃತಿಯಾಗಿದೆ. ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು
ಜೇಮ್ಸ್, ವ್ಯಾಟ್ಸನ್ ಕ್ರೊನಿನ್ (1931--) 1980 James , Watson Cronin
ಇಲಿನಾಯ್ ಪ್ರಾಂತದ ಚಿಕಾಗೋದಲ್ಲಿ 29 ಸೆಪ್ಟೆಂಬರ್ 1931ರಲ್ಲಿ ಜೇಮ್ಸ್ನ ಜನನವಾಯಿತು. 1951ರಲ್ಲಿ ಚಿಕಾಗೋ ವಿಶ್ವವಿದ್ಯಾಲಯ ಸೇರಿ ಭೌತಶಾಸ್ತ್ರದ ಶಿಕ್ಷಣ ಪಡೆದನು. ಇಲ್ಲಿ ಎನ್ರಿಕೋಫರ್ಮಿ, ಮಾರಿಯಾ ಮೇಯರ್ ಮಾರ್ವಿನ್ ಗೋಲ್ಡ್ ಬರ್ಜರ್, ಮುರ್ರೆ ಗೆಲ್ಮನ್ನಂತಹ ಖ್ಯಾತರು ಉಪನ್ಯಾಸ ನೀಡುತ್ತಿದ್ದರು. ಗೆಲ್ಮನ್ನ ಉಪನ್ಯಾಸಗಳಿಂದ ಕಣ ಭೌತಶಾಸ್ತ್ರದಲ್ಲಿ ಜೇಮ್ಸ್ಗೆ ಆಸಕ್ತಿ ಮೂಡಿತು. 1955ರಲ್ಲಿ ಡಾಕ್ಟರೇಟ್ ಗಳಿಸಿ ಜೇಮ್ಸ್ ಬ್ರೂಕ್ ಹೇವನ್ ಕಾಸ್ಮೊಟ್ರಾನ್ನ ವೇಗೋತ್ಕರ್ಷಕದಲ್ಲಿ ಸಂಶೋಧನೆ ನಡೆಸುತ್ತಿದ್ದ ರೋಡನಿ ಕೂಲ್ ತಂಡ ಸೇರಿದನು. ಈ ಕಾಲದಲ್ಲಿ ಕಣಗಳ ಕ್ಷೀಣಬಲಗಳ ಅಂತಕ್ರಿಯೆಯಲ್ಲಿ ಸಾಮ್ಯತೆ (Parity) ಭಂಗವಾಗುವುದೆಂದು ಅನಾವರಣಗೊಂಡಿದ್ದಿತು. ಕಣ ಶೈಥಿಲ್ಯವಾಗುವಾಗಲೂ (Decay) ಈ ಭಂಗ ವಿರುವುದೇ ಎಂದು ತಿಳಿಯಲು ಜೇಮ್ಸ್ ಹಲವಾರು ಪ್ರಯೋಗಗಳನ್ನು ರೂಪಿಸಿದನು. ವ್ಯಾಲ್ ಫಿûಚ್ನೊಂದಿಗೆ ನಡೆಸಿದ ಪ್ರಯೋಗಾತ್ಮಕ ಫಲಿತಾಂಶಗಳಿಂದ ಕೆ-ಮೆಸಾನ್ ಶೈಥಿಲ್ಯಗಳಲ್ಲಿ ಸಾಮ್ಯತೆ ಭಂಗವಾಗುವುದು ತಿಳಿದು ಬಂದಿತು. ಈ ಸಂಶೋಧನೆಗಾಗಿ ಜೇಮ್ಸ್ 1980ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.
ವ್ಯಾಲ್, ಲಾಗ್ಸ್ಡನ್ ಫಿಚ್ (1923--) 1980 Val , Logsdon Fitch
ವ್ಯಾಲ್ ನೆಬ್ಬಾಸ್ಕ ಪ್ರಾಂತದ ಹಳ್ಳಿಯೊಂದರಲ್ಲಿ 10 ಮಾರ್ಚ್ 1923ರಂದು ಜನಿಸಿದನು. ವ್ಯಾಲ್ ಜನಿಸಿದ ಹಳ್ಳಿ ತೀರಾ ಹಿಂದುಳಿದ ಪ್ರದೇಶವಾಗಿದ್ದು ಅತಿ ವಿರಳ ಜನ ಸಂಖ್ಯೆಂಯ ಪ್ರದೇಶವಾಗಿದ್ದಿತು. ಈ ಪ್ರದೇಶದಲ್ಲಿ ಸಿಯಾಕ್ಸ್ ಇಂಡಿಯನ್ ಮೂಲ ನಿವಾಸಿಗಳು ನೆಲೆಸಿದ್ದರು. ಕುದುರೆ ಸವಾರಿಯೊಂದರಲ್ಲಿ ಬಿದ್ದು ಬೆನ್ನನ್ನು ಘಾಸಿ ಮಾಡಿಕೊಂಡ ವ್ಯಾಲ್ ತಂದೆ, ತನ್ನ್ನ ತೋಟ ಮಾರಿ ಹತ್ತಿರದ ಗೋರ್ಡಾನ್ ಪಟ್ಟಣಕ್ಕೆ ಹೋಗಿ ನೆಲಸಿ ವಿಮಾ ವ್ಯವಹಾರ ಪ್ರಾರಂಭಿಸಿದನು. ವ್ಯಾನ್ನ ಬಾಲ್ಯ ಕುಟುಂಬದ ತೋಟ ಹಾಗೂ ಗೋಶಾಲೆಗಳಲ್ಲಿ ಕಳೆಯಿತು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ವ್ಯಾಲ್ ಸೈನಿಕವಾಗಿ ಆಯ್ಕೆಗೊಂಡು, ಮ್ಯಾನ್ಹಟನ್ ಯೋಜನೆ ಸಾಗುತ್ತಿದ್ದ ಲಾಸ್ ಆಲ್ಮೋಸ್ಗೆ ನಿಯೋಜಿತನಾದನು. ಎನ್ರಿಕೋಫರ್ಮಿ, ಬೊಹ್ರ್, ಚಾಡ್ವಿಕ್, ರಬಿಯಂತಹ ಖ್ಯಾತರು ಇಲ್ಲಿ ಕಾರ್ಯ ಮಗ್ನರಾಗಿರುವುದನ್ನು ವ್ಯಾಲ್ ಕಂಡನು. ಪರಮಾಣು ವಿಜ್ಞಾನಿಗಳ ಜೀವನ ಚರಿತ್ರೆಯ ದಾಖಲಾತಿಯಾದ ಆಲ್ ಇನ್ ಅವರ್ ಟೈಮ್ಸ್ ಸಂಪಾದಿತ ಕೃತಿಯಲ್ಲಿ ವ್ಯಾಲ್ ಲಾಸ್ ಆಲ್ಮೋಸ್ನಲ್ಲಿನ ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾನೆ. ಲಾಸ್ ಅಲ್ಮೋಸ್ನಲ್ಲಿರುವಾಗ ವ್ಯಾಲ್ ಪ್ರಯೋಗಶೀಲ ಭೌತಶಾಸ್ತ್ರದ ಮೂಲ ತತ್ತ್ವಗಳನ್ನು ಅರಿತನು. ಸೂಕ್ಷ್ಮಪ್ರಯೋಗಗಳಲ್ಲಿ ನಿಷ್ಕೃಷ್ಟ ಅಳತೆಗಳು ಅತ್ಯಗತ್ಯ. ಇವುಗಳಿಗೆ ಬೇಕಾದ ಮಾಪನ ಉಪಕರಣಗಳ ತಂತ್ರಜ್ಞಾನ, ಮತ್ತು ನಿರ್ಮಾಣದಲ್ಲಿ ವ್ಯಾಲ್ ಪರಿಣಿತಿ ಗಳಿಸಿದನು. ಯುದ್ದ ಮುಗಿದ ನಂತರ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಜಿಮ್ ರೇನ್ವಾಟರ್ ಕೈಕೆಳಗೆ ಸಂಶೋಧನೆ ಮುಂದುವರೆಸಿ ವ್ಯಾಲ್ ಡಾಕ್ಟರೇಟ್ ಗಳಿಸಿದನು. ಈ ಅವಧಿಯಲ್ಲಿ ಅಗೆ ಬೋಹ್ರ್, ರೇನ್ವಾಟರ್ನ್ನು ಕಾಣಲು ಬಂದಿದ್ದನು. ಇವರಿಬ್ಬರ ಸಂಭಾಷಣೆಯ ಮಧ್ಯೆ ವ್ಯಾಲ್ ಮ್ಯೂ-ಮೆಸಿಕ್ ಪರಮಾಣುಗಳನ್ನು ಕುರಿತಾದ ಲೇಖನವೊಂದನ್ನು ಪಡೆದನು. ಇದೇ ಸಮಯಕ್ಕೆ ಕೊಲಂಬಿಯಾದಲ್ಲಿ ನೆವಿಸ್ ಸೈಕ್ಲೋಟ್ರಾನ್ ನಿರ್ಮಾಣಗೊಂಡು, ಅದರಲ್ಲಿ ಪ್ರಯೋಗಗಳು ಪ್ರಾರಂಭಗೊಂಡಿದ್ದವು. ಸೈಕ್ಲೋಟ್ರಾನ್ನಲ್ಲಿ ದಕ್ಕಿದ ಪೈ-ಮೆಸಾನ್ ದೂಲಗಳಲ್ಲಿ ಕೆಲವು ಶೈಥಿಲ್ಯ (Decay) ಹೊಂದಿ ಮ್ಯೂ-ಮೆಸಾನ್ಗಳು ದಕ್ಕಿದ್ದವು. ಮ್ಯೂ-ಮೆಸಾನ್ಗಳನ್ನು ಸೋಡಿಯಂ ಅಯೋಡೈಡ್ನ್ನು ಥ್ಯಾಲಿಯಯೊಂದಿಗೆ ಪಟೂಕರಣಗೊಳಿಸಿ (Activation) ಪ್ರತ್ಯೇಕಿಸುವುದು ಸಾಧ್ಯವೆಂದು ಹಾಫ್ಸ್ಟ್ಯಾಡ್ಟರ್ ತೋರಿಸಿದ್ದನು. ಇದನ್ನು ಅತ್ಯುತ್ತಮ ಮಿನುಗುಕಾರಕದಂತೆಯೂ (Scintillator) ಗಾಮಾ ಕಿರಣಗಳ ಚೈತನ್ಯದ ರೋಹಿತದರ್ಶಕದಂತೆಯೂ (Spectroscope) ಬಳಸಬಹುದಾಗಿದ್ದಿತು. ಇವೆಲ್ಲ ತಂತ್ರಗಳನ್ನು ಬಳಸಿ ವ್ಯಾಲ್ ಪರಮಾಣು ಬೀಜದ ತ್ರಿಜ್ಯವನ್ನು ಅಳೆಯುವಲ್ಲಿ ಯಶಸ್ಸನ್ನು ಕಂಡನು. ಇದರ ಮುಂದುವರಿಕೆಯಾಗಿ ಮ್ಯೂ-ಮೆಸಾನ್ ದ್ರವ್ಯ ನಿರ್ಧಾರವೂ ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ವ್ಯಾಲ್ ಕೆ-ಮೆಸಾನ್ಗಳ ಅಧ್ಯಯನದಲ್ಲಿ ನಿರತನಾದನು. ಇವುಗಳು ಅಂತಕ್ರಿಯೆಗೊಳಗಾದಾಗ ಸಾಮ್ಯತೆ (Pಚಿಡಿiಣಥಿ) ಭಂಗವಾಗುವುದು ತಿಳಿದು ಬಂದಿತು. ಇದಕ್ಕಾಗಿ ವ್ಯಾಲ್ 1980ರಲ್ಲಿ ನೊಬೆಲ್ ಪ್ರಶಸ್ತಿ ಪಡೆದನು.ಲೇಖಕರು : ಎನ್.ಶಂಕರಪ್ಪ ತೋರಣಗಲ್ಲು